ಸಾರಾಂಶ
ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ವಿರುದ್ಧ ಭಾರತ ತೀವ್ರ ಕಿಡಿಕಾರಿದೆ. ‘ಸಿಂಧು ಒಪ್ಪಂದಕ್ಕೆ ಪಾಕಿಸ್ತಾನವು ಭಯೋತ್ಪಾದನೆಗೆ ನೀಡುತ್ತಿರುವ ಪ್ರೋತ್ಸಾಹವೇ ಕಾರಣ ಎಂದು ತಿರುಗೇಟು ನೀಡಿದೆ.
ನವದೆಹಲಿ: ತಜಕಿಸ್ತಾನದಲ್ಲಿ ನಡೆಯತ್ತಿರುವ ವಿಶ್ವಸಂಸ್ಥೆಯ ವಿಶೇಷ ಸಭೆಯಲ್ಲಿ ಸಿಂಧು ನದಿ ಒಪ್ಪಂದ ತಡೆ ವಿಚಾರ ಪ್ರಸ್ತಾಪಿಸಿದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ವಿರುದ್ಧ ಭಾರತ ತೀವ್ರ ಕಿಡಿಕಾರಿದೆ. ‘ಸಿಂಧು ಒಪ್ಪಂದಕ್ಕೆ ಪಾಕಿಸ್ತಾನವು ಭಯೋತ್ಪಾದನೆಗೆ ನೀಡುತ್ತಿರುವ ಪ್ರೋತ್ಸಾಹವೇ ಕಾರಣ, ಸುಮ್ಮನೆ ಈ ಒಪ್ಪಂದ ರದ್ದತಿಗೆ ಬೇರೆಯವರನ್ನು ಹೊಣೆ ಮಾಡುವುದನ್ನು ನಿಲ್ಲಿಸಿ‘ ಎಂದು ತಿರುಗೇಟು ನೀಡಿದೆ.
ಸಿಂಧು ಒಪ್ಪಂದ ತಡೆಹಿಡಿವ ಮೂಲಕ ಭಾರತವು ನೀರನ್ನು ಆಯುಧವಾಗಿ ಬಳಸುತ್ತಿದೆ ಎಂದು ಷರೀಫ್ ಆರೋಪಿಸಿದ್ದರು. ಇದಕ್ಕೆ ತೀವ್ರ ತಿರುಗೇಟು ನೀಡಿರುವ ಭಾರತದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕಿರ್ತಿ ವರ್ಧನ್ ಸಿಂಗ್, ‘ಪಾಕಿಸ್ತಾನವು ಅನಗತ್ಯವಾಗಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಸಿಂಧು ಒಪ್ಪಂದ ವಿಚಾರ ಪ್ರಸ್ತಾಪಿಸಿದೆ. ಸಂಬಂಧಪಡದ ವಿಚಾರ ಪ್ರಸ್ತಾಪಿಸುವ ಮೂಲಕ ಪಾಕಿಸ್ತಾನ ವೇದಿಕೆ ದುರುಪಯೋಗ ಮಾಡಿದೆ. ನಾವು ಕಠಿಣ ಪದಗಳಲ್ಲಿ ಇಂಥ ಪ್ರಯತ್ನ ಖಂಡಿಸುತ್ತೇವೆ’ ಎಂದರು.
‘ಸದ್ಭಾವನೆ ಮತ್ತು ಮಿತ್ರತ್ವದ ಸ್ಫೂರ್ತಿಯಿಂದಲೇ ಈ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಒಪ್ಪಂದದ ಪೀಠಿಕೆಯೇ ಹೇಳುತ್ತದೆ. ಹೀಗಾಗಿ ಈ ಒಪ್ಪಂದವನ್ನು ಸದ್ಭಾವನೆಯಿಂದ ಗೌರವಿಸುವುದು ಅಗತ್ಯ. ಆದರೆ ಪಾಕಿಸ್ತಾನ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ ಮೂಲಕ ಈ ಒಪ್ಪಂದ ಉಲ್ಲಂಘಿಸಿದೆ’ ಎಂದು ಕಿಡಿಕಾರಿದರು.
ಇದೇ ವೇಳೆ, ಈ ಒಪ್ಪಂದ ಜಾರಿಯಾದ ಬಳಿಕ ಅನೇಕ ಬದಲಾವಣೆಗಳಾಗಿವೆ. ಹೀಗಾಗಿ ಒಪ್ಪಂದದ ಕಟ್ಟುಪಾಡುಗಳನ್ನು ಮರುಪರಿಶೀಲಿಸುವ ಅಗತ್ಯವೂ ಇದೆ. ತಾಂತ್ರಿಕ ಅಭಿವೃದ್ಧಿ, ಜನಸಂಖ್ಯಾ ಬದಲಾವಣೆ, ಹವಾಮಾನ ಬದಲಾವಣೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯೂ ಇದರಲ್ಲಿ ಸೇರಿಕೊಂಡಿದೆ ಎಂದು ತಿಳಿಸಿದರು.
‘ಆಪರೇಷನ್ ಸಿಂದೂರ’ ಕುರಿತು ಪ್ರಬಂಧ ಸ್ಪರ್ಧೆ
ಜೂ.1-30ರ ತನಕ ದ್ವಿಭಾಷಾ ಪ್ರಬಂಧ ಸ್ಪರ್ಧೆ
@mygovindia ನಲ್ಲಿ ಮೂಲಕ ಪ್ರಬಂಧ ಕಳಸಿ
ಮೊದಲ 3 ವಿಜೇತರಿಗೆ ₹10 ಸಾವಿರ ಬಹುಮಾನ
ನವದೆಹಲಿ: ಪಹಲ್ಗಾಂ ನರಮೇಧ ನಡೆಸಿದ ಪಾಕಿಸ್ತಾನ ಉಗ್ರರಿಗೆ ಪಾಠ ಕಲಿಸಲು ಭಾರತ ನಡೆಸಿದ ಆಪರೇಷನ್ ಸಿಂದೂರದ ಕುರಿತು ರಕ್ಷಣಾ ಸಚಿವಾಲಯ ಪ್ರಬಂಧ ಸ್ಪರ್ಧೆ ಆಯೋಜಿಸಿದೆ. ಇದು ಜೂ.1 ರಿಂದ 30ರ ತನಕ ಸ್ಪರ್ಧೆ ನಡೆಯಲಿದೆ.ಭಾನುವಾರ ಪ್ರಕಟಣೆ ನೀಡಿರುವ ರಕ್ಷಣಾ ಸಚಿವಾಲಯ, ‘ಸ್ಪರ್ಧೆಯಲ್ಲಿ ವಿಜೇತರಾದ ಮೊದಲ ಮೂರು ವಿಜೇತರಿಗೆ 10 ಸಾವಿರ ರು. ನಗದು ಬಹುಮಾನ ದೊರೆಯಲಿದೆ.
ಜೊತೆಗೆ ವಿಜೇತರು ಆ.15ರಂದು ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯಲಿರುವ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸುವ ವಿಶೇಷ ಅವಕಾಶ ಪಡೆಯಲಿದ್ದಾರೆ’ ಎಂದಿದೆ.ಆಪರೇಷನ್ ಸಿಂದೂರದ ಮೂಲಕ ಭಯೋತ್ಪಾದನೆ ವಿರುದ್ಧ ಭಾರತದ ನೀತಿ ಮರು ವ್ಯಾಖ್ಯಾನದ ಕುರಿತು ರಕ್ಷಣಾ ಸಚಿವಾಲಯ ಅಥವಾ @mygovindiaದಲ್ಲಿ ದ್ವಿಭಾಷಾ ಪ್ರಬಂಧ ಸ್ಪರ್ಧೆಯಲ್ಲಿ ಆಸಕ್ತರು ಭಾಗವಹಿಸಬಹುದು. ಒಬ್ಬರು ಒಮ್ಮೆ ಮಾತ್ರ ತಮ್ಮ ಬರಹ ಕಳುಹಿಸಲು ಅವಕಾಶವಿದ್ದು, ಹಿಂದಿ ಅಥವಾ ಇಂಗ್ಲೀಷ್ನಲ್ಲಿ ಬರೆಯಬಹುದು ಎಂದು ರಕ್ಷಣಾ ಸಚಿವಾಲಯ ಹೇಳಿದೆ.