ಹಸೀನಾ ವಿರುದ್ಧ ಸಾಮೂಹಿಕ ನರಮೇಧ ಆರೋಪ

| N/A | Published : Jun 02 2025, 01:09 AM IST / Updated: Jun 02 2025, 04:39 AM IST

ಸಾರಾಂಶ

ಪ್ರಸ್ತುತ ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ಅವರ ವಿರುದ್ಧ ದಾಖಲಾಗಿರುವ ಕ್ರಮಿನಲ್‌ ಪ್ರಕರಣಗಳ ವಿಚಾರಣೆ ಭಾನುವಾರ ಆರಂಭವಾಗಿದೆ.

 ಢಾಕಾ : ಪ್ರಸ್ತುತ ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ಅವರ ವಿರುದ್ಧ ದಾಖಲಾಗಿರುವ ಕ್ರಮಿನಲ್‌ ಪ್ರಕರಣಗಳ ವಿಚಾರಣೆ ಭಾನುವಾರ ಆರಂಭವಾಗಿದೆ. ಮೊದಲ ದಿನವೇ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು ಹಸೀನಾ ಮತ್ತು ಇತರ ಇಬ್ಬರ ವಿರುದ್ಧ ಸಾಮೂಹಿಕ ಹತ್ಯೆ ಸೇರಿದಂತೆ ಹಲವಾರು ದೋಷಾರೋಪಗಳನ್ನು ಹೊರಿಸಿದೆ.

ಕಳೆದ ವರ್ಷ ವಿದ್ಯಾರ್ಥಿಗಳ ನೇತೃತ್ವದ ಪ್ರತಿಭಟನೆಗಳ ಮೇಲಿನ ಹಿಂಸಾತ್ಮಕ ದಮನದಲ್ಲಿ ಅವರ ಪಾತ್ರವಿದೆ. ಹಸೀನಾ ಮತ್ತು 2 ಹಿರಿಯ ಅಧಿಕಾರಿಗಳ ಮೇಲೆ ಮಾನವೀಯತೆ ವಿರುದ್ಧದ ಅಪರಾಧ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಹಸೀನಾ ಸರ್ಕಾರವನ್ನು ಪದಚ್ಯುತಗೊಳಿಸಿದ ಸುಮಾರು 10 ತಿಂಗಳ ನಂತರ ಭಾನುವಾರದ ವಿಚಾರಣೆಯು ಹಸೀನಾ ಅವರ ಗೈರುಹಾಜರಿಯಲ್ಲಿ ಆಂಭವಾಗಿದೆ. ಟೀವಿಯಲ್ಲೂ ವಿಚಾರಣೆ ಪ್ರಸಾರ ನಡೆಯಿತು.‘ಅಶಾಂತಿಯ ಸಮಯದಲ್ಲಿ ಭದ್ರತಾ ಪಡೆ ಕಾರ್ಯಾಚರಣೆಗಳ ಜವಾಬ್ದಾರಿಯು ಸರ್ಕಾರದ ಮುಖ್ಯಸ್ಥೆ ಆಗಿದ್ದ ಹಸೀನಾರದ್ದಾಗಿತ್ತು. 2024ರ ಆಗಸ್ಟ್‌ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆ ಹತ್ತಿಕ್ಕಲು ಅವರು ಭದ್ರತಾ ಪಡೆ, ತಮ್ಮ ಅವಾಮಿ ಲೀಗ್‌ ಪಕ್ಷ ಮತ್ತು ಬೆಂಬಲಿತ ಗುಂಪುಗಳಿಗೆ ಕಾರ್ಯಾಚರಣೆಗೆ ಆದೇಶಿಸಿದ್ದರು. ಇದರಿಂದ ಸಾಮೂಹಿಕ ನರಮೇಧ ನಡೆದಿದೆ. ಇದು ಯೋಜಿತ ಹತ್ಯೆ’ ಎಂದು ಮುಖ್ಯ ಪ್ರಾಸಿಕ್ಯೂಟರ್‌ ತಜುಲ್‌ ಇಸ್ಲಾಂ ವಾದಿಸಿದ್ದಾರೆ. ಇದಕ್ಕೆ ಪೂರಕವಾಗಿ 81 ಜನರನ್ನೂ ಸಾಕ್ಷಿಯಾಗಿ ಪಟ್ಟಿ ಮಾಡಲಾಗಿದೆ. ಬಾಂಗ್ಲಾ ದಂಗೆಯಲ್ಲಿ 1500 ಜನ ಸಾವನ್ನಪ್ಪಿದ್ದು, 25000 ಮಂದಿ ಗಾಯಗೊಂಡಿದ್ದರು ಎನ್ನಲಾಗಿದೆ.

Read more Articles on