ಸೂಚನಾ - ಪತಿ ಮಧ್ಯೆ ಗೋವಾ ಠಾಣೆಯಲ್ಲಿ ಭಾರೀ ವಾಕ್ಸಮರ

| Published : Jan 15 2024, 01:50 AM IST / Updated: Jan 15 2024, 11:55 AM IST

ಸಾರಾಂಶ

ತನ್ನ 4 ವರ್ಷದ ಮಗುವನ್ನು ಹತ್ಯೆ ಮಾಡಿರುವ ಆರೋಪ ಹೊತ್ತಿರುವ ಬೆಂಗಳೂರಿನ ಸ್ಟಾರ್ಟ್ಅಪ್‌ ಸಿಇಒ ಸೂಚನಾ ಸೇಠ್‌ ಹಾಗೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಆಕೆಯ ಪತಿ ವೆಂಕಟ್‌ ರಾಮನ್‌ ನಡುವೆ ಪೊಲೀಸ್ ಠಾಣೆಯಲ್ಲಿಯೇ ಭಾರೀ ವಾಕ್ಸಮರ ನಡೆದಿದೆ.

ಪಣಜಿ: ತನ್ನ 4 ವರ್ಷದ ಮಗುವನ್ನು ಹತ್ಯೆ ಮಾಡಿರುವ ಆರೋಪ ಹೊತ್ತಿರುವ ಬೆಂಗಳೂರಿನ ಸ್ಟಾರ್ಟ್ಅಪ್‌ ಸಿಇಒ ಸೂಚನಾ ಸೇಠ್‌ ಹಾಗೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಆಕೆಯ ಪತಿ ವೆಂಕಟ್‌ ರಾಮನ್‌ ನಡುವೆ ಪೊಲೀಸ್ ಠಾಣೆಯಲ್ಲಿಯೇ ಭಾರೀ ವಾಕ್ಸಮರ ನಡೆದಿದೆ.

ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೆಂಕಟ್‌ ರಾಮನ್‌ ಪೊಲೀಸರಿಗೆ ಹೇಳಿಕೆ ನೀಡಲು ಗೋವಾದ ಕ್ಯಾಲಂಗುಟ್‌ ಪೊಲೀಸ್‌ ಠಾಣೆಗೆ ಆಗಮಿಸಿದ್ದರು. ಈ ವೇಳೆ ಅಲ್ಲಿಯೇ ಪೊಲೀಸರ ವಶದಲ್ಲಿದ್ದ ಸೂಚನಾಳೊಂದಿಗೆ ಮಾತನಾಡಲು ವೆಂಕಟ್‌ಗೆ 15 ನಿಮಿಷ ಅವಕಾಶ ನೀಡಲಾಗಿತ್ತು.

ಆಗ ‘ನನ್ನ ಮಗನ ಏಕೆ ಹತ್ಯೆ ಮಾಡಿದೆ?’ ಎಂದು ವೆಂಕಟ್‌ ಸೂಚನಾರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಸೂಚನಾ ‘ಇದಕ್ಕೆಲ್ಲ ನೀನೇ ಕಾರಣ. ನಾನು ಪೊಲೀಸ್‌ ಕಸ್ಟಡಿಯಲ್ಲಿದ್ದರೆ, ನೀನು ಫ್ರೀಯಾಗಿ... ಆರಮಾಗಿ ಓಡಾಡಿಕೊಂಡಿದ್ದೀಯಲ್ಲಾ’ ಎಂದು ಕಿಚಾಯಿಸಿದ್ದಾಳೆ. 

ಆಗ ವೆಂಕಟ್‌ ‘ನನ್ನ ಮಗನನ್ನು ನೀನು ಹತ್ಯೆ ಮಾಡಿಲ್ಲವೇ? ಮಗು ಹೇಗೆ ಮೃತಪಟ್ಟಿತು?’ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಭಾರಿ ವಾಗ್ವಾದ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ನಿ ಕ್ರೂರಿ- ವೆಂಕಟ್‌ ಹೇಳಿಕೆ:ಇನ್ನು ಪೊಲೀಸರಿಗೆ 2 ಗಂಟೆಗಳ ಕಾಲ ಸುದೀರ್ಘ 5 ಪುಟಗಳ ಹೇಳಿಕೆ ನೀಡಿರುವ ವೆಂಕಟ್‌, ಸೂಚನಾ ಮೊದಲಿನಿಂದಲೂ ಕ್ರೂರ ಅಥವಾ ಹಿಂಸಾತ್ಮಕ ಮನಸ್ಥಿತಿಯುಳ್ಳವಳು ಎಂದು ತಿಳಿಸಿದ್ದಾರೆ.