ಚುನಾವಣಾ ಬಾಂಡ್‌: ಇಂದು ಎಸ್‌ಬಿಐ ಅರ್ಜಿ ವಿಚಾರಣೆ

| Published : Mar 11 2024, 01:19 AM IST

ಚುನಾವಣಾ ಬಾಂಡ್‌: ಇಂದು ಎಸ್‌ಬಿಐ ಅರ್ಜಿ ವಿಚಾರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಬಾಂಡ್‌ ಮಾಹಿತಿ ಸಲ್ಲಿಕೆ ಅವಧಿ ವಿಸ್ತರಣೆ ಕೋರಿರುವ ಎಸ್‌ಬಿಐ ಮನವಿಯ ಜೊತೆಗೆ ಎಸ್‌ಬಿಐ ವಿರುದ್ಧ ನ್ಯಾಯಾಂಗ ನಿಂದನಾ ಕೇಸೂ ಇಂದೇ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಸಮ್ಮತಿಸಿದೆ.

ನವದೆಹಲಿ: ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳು ಸಂಗ್ರಹಿಸಿದ ಹಣದ ಸಮಗ್ರ ಮಾಹಿತಿ ನೀಡಲು ನೀಡಿದ್ದ ಸಮಯ ವಿಸ್ತರಣೆ ಕೋರಿ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್‌ ಸೋಮವಾರ ವಿಚಾರಣೆ ನಡೆಸಲಿದೆ. ಜೊತೆಗೆ ಮಾ.6ರೊಳಗೆ ಮಾಹಿತಿ ನೀಡದ ಎಸ್‌ಬಿಐ ವಿರುದ್ಧ ನ್ಯಾಯಾಂಗ ನಿಂದನಾ ಪ್ರಕರಣ ದಾಖಲಿಸಬೇಕು ಎಂದು ವಕೀಲ ಪ್ರಶಾಂತ್ ಭೂಷಣ್‌ ಕೋರಿದ್ದ ಅರ್ಜಿಯನ್ನೂ ಇದೇ ವೇಳೆ ನ್ಯಾಯಾಲಯ ವಿಚಾರಣೆ ನಡೆಸಲಿದೆ.ಚುನಾವಣಾ ಬಾಂಡ್‌ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ ಸಂಗ್ರಹಿಸಲು ಅವಕಾಶ ನೀಡಿದ್ದ ಕಾಯ್ದೆಯನ್ನೇ ಅಸಾಂವಿಧಾನಿಕ ಎಂದು ಫೆ.15ರಂದು ಮಹತ್ವದ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠ 2019ರ ಏ.12ರಿಂದ 2024ರ ತೀರ್ಪು ಹೊರಡಿಸಿದ ದಿನದವರೆಗೆ ರಾಜಕೀಯ ಪಕ್ಷಗಳು ಬಾಂಡ್‌ ಮೂಲಕ ಎಷ್ಟು ಹಣ ಸಂಗ್ರಹಿಸಿವೆ, ಹಣ ನೀಡಿದವರು ಯಾರು ಎಂಬುದನ್ನು ಮಾ.6ರೊಳಗೆ ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಸೂಚಿಸಿತ್ತು.

ಆದರೆ ಗಡುವು ಮುಗಿಯುವ ಹಿಂದಿನ ದಿನವಾದ ಮಾ.5ರಂದು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಎಸ್‌ಬಿಐ, ಮಾಹಿತಿ ಸಲ್ಲಿಕೆ ಅವಧಿಯನ್ನು ಜೂ.30ರವರೆಗೂ ವಿಸ್ತರಣೆ ಮಾಡುವಂತೆ ಕೋರಿತ್ತು.ಎಸ್‌ಬಿಐ ಈ ಅರ್ಜಿಯನ್ನು ವಿಪಕ್ಷಗಳು ಬಲವಾಗಿ ಪ್ರಶ್ನಿಸಿದ್ದವು. ಇದು ಮೋದಿ ಸರ್ಕಾರಕ್ಕೆ ಒತ್ತಡಕ್ಕೆ ಬಲಿಯಾಗಿ ಕೈಗೊಂಡ ನಿರ್ಧಾರ ಎಂದು ಟೀಕಿಸಿದ್ದವು. ಮತ್ತೊಂದೆಡೆ ಎಸ್‌ಬಿಐ ಉದ್ದೇಶಪೂರ್ವಕವಾಗಿ ಮಾಹಿತಿ ಸಲ್ಲಿಕೆ ವಿಳಂಬ ಮಾಡುತ್ತಿದೆ ಎಂಬುದಾಗಿ ಪ್ರಶಾಂತ್‌ ಭೂಷಣ್‌ ಅವರ ಮೂಲಕ ಎಡಿಆರ್‌ ಎಂಬ ಎನ್‌ಜಿಒ ಮಾ.7ರಂದು ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿತ್ತು.