ಸಾರಾಂಶ
ಸೊಲ್ಲಾಪುರ: ಕಳಂಕಿತ ಕಾಂಗ್ರೆಸ್ ಹಾಗೂ ಇಂಡಿಯಾ ಕೂಟ ಮೊದಲ ಎರಡು ಹಂತದಲ್ಲಿಯೇ ನಿರ್ನಾಮಗೊಂಡಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ಇಂಡಿಯಾ ಕೂಟದಲ್ಲಿ ನಾಯಕತ್ವಕ್ಕಾಗಿ ಮಹಾಯುದ್ಧವೇ ನಡೆಯುತ್ತಿದೆ ಎಂದು ಪ್ರಧಾನಿ ಕುಹಕವಾಡಿದ್ದಾರೆ.
ಚುನಾವಣೆ ಪ್ರಚಾರದ ಅಂಗವಾಗಿ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಮಾತನಾಡಿದ ಅವರು,‘ಇಂಡಿಯಾ ಕೂಟದಲ್ಲಿ ನಾಯಕತ್ವಕ್ಕಾಗಿ ಮಹಾಯುದ್ಧವೇ ನಡೆಯುತ್ತಿದೆ. ಆದರೆ ನೀವು 10 ವರ್ಷದ ನನ್ನ ಆಡಳಿತವನ್ನು ನೋಡಿದ್ದೀರಿ, ಪರೀಕ್ಷಿಸಿದ್ದೀರಿ. ಮತ್ತೊಂದೆಡೆ, ಕಾಂಗ್ರೆಸ್ ತನ್ನ 60 ವರ್ಷದ ಆಡಳಿತದಲ್ಲಿ ದೇಶಕ್ಕೆ ಭಯೋತ್ಪಾದನೆ, ಭ್ರಷ್ಟಾಚಾರ ಹಾಗೂ ದುರಾಡಳಿತವನ್ನು ನೀಡಿದೆ. ಈ ಕಳಂಕಗಳನ್ನು ಹೊತ್ತಿರುವ ಕಾಂಗ್ರೆಸ್ ಮತ್ತೆ ಚುಕ್ಕಾಣಿ ಹಿಡಿಯುವ ಹಂಬಲದಲ್ಲಿದೆ ಎಂದು ವಾಗ್ದಾಳಿ ನಡೆಸಿದರು.
ಇಂಡಿಯಾ ಕೂಟದ ನಾಯಕತ್ವದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ,‘ಇಂಡಿಯಾ ಕೂಟದಲ್ಲಿ ನಾಯಕತ್ವಕ್ಕೆ ಮಹಾಯುದ್ಧವೇ ನಡೆಯುತ್ತಿದೆ. ಅಲ್ಲಿ ಐದು ವರ್ಷ ಒಬ್ಬಬ್ಬರು ಪ್ರಧಾನಿಯಾಗುವ ಹಂಬಲದಲ್ಲಿದ್ದಾರೆ. ಈ ಮೂಲಕ ದೇಶದ ಅಭಿವೃದ್ಧಿಯನ್ನು ಬದಿಗೊತ್ತಿ, ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬಂತೆ ಜೇಬು ತುಂಬಿಸಿಕೊಳ್ಳಲು ತಯಾರಿ ನಡೆಸುತ್ತಿದ್ದಾರೆ. ಜನರೇ ನೀವು ಹೇಳಿ, ದೇಶದ ಚುಕ್ಕಾಣಿಯನ್ನು ಇನ್ನು ಪ್ರಧಾನಿ ಅಭ್ಯರ್ಥಿಯನ್ನೇ ಆಯ್ಕೆ ಮಾಡದವರಿಗೆ ಕೊಡುವಿರಾ? ಇಂಥಹ ತಪ್ಪನ್ನು ಮಾಡುವಿರಾ? ಎಂದು ಪ್ರಶ್ನಿಸಿದರು.