ಸಾರಾಂಶ
ಬೆಂಗಳೂರು :ರಾಜ್ಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದ್ದ ಬಹುಕೋಟಿ ಬಿಟ್ ಕಾಯಿನ್ ಹಗರಣ ಸಂಬಂಧ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಅವರಿಗೆ ಸಂಕಷ್ಟ ಎದುರಾಗಿದ್ದು, ವಿಚಾರಣೆಗೆ ಮತ್ತೆ ಎಸ್ಐಟಿ ನೋಟಿಸ್ ನೀಡಿದ ಬೆನ್ನಲ್ಲೇ ಬಂಧನ ಭೀತಿ ಶುರುವಾಗಿದೆ.
ಹಗರಣದ ಪ್ರಮುಖ ರೂವಾರಿ ಎನ್ನಲಾದ ಅಂತಾರಾಷ್ಟ್ರೀಯ ಮಟ್ಟದ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಜತೆ ನಲಪಾಡ್ ವ್ಯಾವಹಾರಿಕ ನಂಟು ಹೊಂದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಆರೋಪ ಹಿನ್ನೆಲೆಯಲ್ಲಿ ನಲಪಾಡ್ ಅವರಿಗೆ ಫೆ.7 ರಂದು ವಿಚಾರಣೆಗೆ ಹಾಜರಾಗುವಂತೆ ಸೆಕ್ಷನ್ 41ರಡಿ ವಿಶೇಷ ತನಿಖಾ ತಂಡ (ಎಸ್ಐಟಿ) ನೋಟಿಸ್ ನೀಡಿದೆ.
ಸಾಮಾನ್ಯವಾಗಿ ಆರೋಪಿತರಿಗೆ ಈ ಸೆಕ್ಷನ್ ಅಡಿ ತನಿಖಾಧಿಕಾರಿ ನೋಟಿಸ್ ನೀಡುತ್ತಾರೆ. ಹೀಗಾಗಿ ಅದೇ ಸೆಕ್ಷನ್ ಅಡಿ ನಲಪಾಡ್ ಅವರಿಗೆ ಎರಡನೇ ಬಾರಿಗೆ ಎಸ್ಐಟಿ ವಿಚಾರಣೆಗೆ ಕರೆದಿರುವುದು ಬಂಧನ ಭೀತಿಗೆ ಕಾರಣವಾಗಿದೆ.
ಕೆಲ ತಿಂಗಳ ಹಿಂದೆ ಕೂಡ ಬಿಟ್ ಕಾಯಿನ್ ಹಗರಣ ಸಂಬಂಧ ನಲಪಾಡ್ ಅವರನ್ನು ಎಸ್ಐಟಿ ವಿಚಾರಣೆ ನಡೆಸಿ ಹೇಳಿಕೆ ಪಡೆದಿತ್ತು. ಹ್ಯಾಕರ್ ಶ್ರೀಕಿಯಿಂದ ಕೋಟ್ಯಂತರ ರುಪಾಯಿಯನ್ನು ನಲಪಾಡ್ ಪಡೆದಿದ್ದಾರೆ ಎಂಬ ಆಪಾದನೆ ಸಹ ಇದೆ.