ಸಾರಾಂಶ
ಚೆನ್ನೈ: ‘ಶ್ರೀರಾಮ ಎಂಬ ವ್ಯಕ್ತಿ ಇದ್ದ ಎಂಬುದಕ್ಕೆ ಯಾವುದೇ ಐತಿಹಾಸಿಕ ಸಾಕ್ಷ್ಯವಿಲ್ಲ. ಶ್ರೀರಾಮ ಯಾವುದೇ ಅವತಾರವೂ ಅಲ್ಲ’ ಎಂದು ತಮಿಳುನಾಡಿನ ಡಿಎಂಕೆ ನಾಯಕ ಹಾಗೂ ಸಚಿವ ಎಸ್.ಎಸ್.ಶಿವಶಂಕರ್ ಹೇಳಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಗಂಗೈಕೊಂಡಚೋಳಪುರಂನಲ್ಲಿ ಮಹಾರಾಜ ರಾಜೇಂದ್ರ ಚೋಳನ ಜನ್ಮದಿನದ ಸಮಾರಂಭದಲ್ಲಿ ಮಾತನಾಡಿದ ಶಿವಶಂಕರ್, ‘ಚೋಳವಂಶದ ರಾಜರು ಇದ್ದರು ಎಂಬುದಕ್ಕೆ ಅವರ ಕಾಲದ ಶಿಲಾಶಾಸನಗಳು, ಅವರು ಕಟ್ಟಿಸಿದ ದೇಗುಲಗಳು ಹಾಗೂ ಕೆರೆಗಳು ಸಾಕ್ಷಿಯಾಗಿವೆ. ಆದರೆ, ಶ್ರೀರಾಮ 3000 ವರ್ಷಗಳ ಹಿಂದೆ ಇದ್ದ ಎಂಬುದಕ್ಕೆ ಏನು ಸಾಕ್ಷ್ಯವಿದೆ? ರಾಮ ಅವತಾರ ಎನ್ನುತ್ತಾರೆ. ಆದರೆ, ಅವತಾರ ಯಾವತ್ತೂ ಜನಿಸಲು ಸಾಧ್ಯವಿಲ್ಲ. ರಾಮ ಜನಿಸಿದ್ದಾನೆ ಅಂದರೆ ಅವನು ಅವತಾರ ಅಲ್ಲ. ನಮ್ಮ ಇತಿಹಾಸವನ್ನು ಮುಚ್ಚಿಟ್ಟು ಬೇರೆ ಇತಿಹಾಸವನ್ನು ಹೇರಲು ಇದನ್ನೆಲ್ಲ ಸೃಷ್ಟಿಸಿದ್ದಾರೆ’ ಎಂದು ಹೇಳಿದರು.
‘ರಾಮಾಯಣ ಮತ್ತು ಮಹಾಭಾರತದಲ್ಲಿ ಯಾವುದೇ ‘ಜೀವನ ಪಾಠ’ ಇಲ್ಲ. ಅದರಲ್ಲಿ ಜನರು ಕಲಿಯಬೇಕಾದ್ದು ಏನೂ ಇಲ್ಲ. ಅದರ ಬದಲು ತಿರುವಳ್ಳುವರ್ ಅವರ ವಚನ ಓದಿದರೆ ಸಾಕಷ್ಟು ಕಲಿಯಬಹುದು’ ಎಂದು ತಿಳಿಸಿದರು.
ಬಿಜೆಪಿ ಕಿಡಿ:
ಇದಕ್ಕೆ ‘ಎಕ್ಸ್’ನಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ, ‘ಡಿಎಂಕೆ ನಾಯಕರು ರಾಮನ ಬಗ್ಗೆ ಏಕೆ ಇಷ್ಟೊಂದು ತಲೆಕೆಡಿಸಿಕೊಳ್ಳುತ್ತಾರೆ? ಕಳೆದ ವಾರವಷ್ಟೇ ಅವರದೇ ಪಕ್ಷದ ನಾಯಕರೊಬ್ಬರು ರಾಮನನ್ನು ಹಾಡಿಹೊಗಳಿದ್ದರು. ಈಗ ಇವರು ಹೀಗಳೆಯುತ್ತಿದ್ದಾರೆ’ ಎಂದು ಆಕ್ಷೇಪಿಸಿದರು.