‘ಹಿಂದುಸ್ತಾನವು ಬಹುಸಂಖ್ಯಾತರ ಇಚ್ಛೆಯಂತೆ ಕೆಲಸ ಮಾಡುತ್ತದೆ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆ ಇಲ್ಲ. ಕಾನೂನು ವಾಸ್ತವವಾಗಿ ಬಹುಸಂಖ್ಯಾತರ ಅಭಿಪ್ರಾಯದಂತೆ ಕೆಲಸ ಮಾಡುತ್ತದೆ. ಅವರ ಕಲ್ಯಾಣ ಮತ್ತು ಸಂತೋಷಕ್ಕಾಗಿ ಏನು ಪ್ರಯೋಜನವಾಗುತ್ತದೆಯೋ, ಅದನ್ನು ಮಾತ್ರ ಸ್ವೀಕರಿಸಲಾಗುತ್ತದೆ’ 

 ಪ್ರಯಾಗ್‌ರಾಜ್‌: ‘ಹಿಂದುಸ್ತಾನವು ಬಹುಸಂಖ್ಯಾತರ ಇಚ್ಛೆಯಂತೆ ಕೆಲಸ ಮಾಡುತ್ತದೆ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆ ಇಲ್ಲ. ಕಾನೂನು ವಾಸ್ತವವಾಗಿ ಬಹುಸಂಖ್ಯಾತರ ಅಭಿಪ್ರಾಯದಂತೆ ಕೆಲಸ ಮಾಡುತ್ತದೆ. ಅವರ ಕಲ್ಯಾಣ ಮತ್ತು ಸಂತೋಷಕ್ಕಾಗಿ ಏನು ಪ್ರಯೋಜನವಾಗುತ್ತದೆಯೋ, ಅದನ್ನು ಮಾತ್ರ ಸ್ವೀಕರಿಸಲಾಗುತ್ತದೆ’ ಎಂದು ಅಲಹಾಬಾದ್‌ ಹೈಕೋರ್ಟ್‌ ನ್ಯಾ। ಶೇಖರ್‌ ಕುಮಾರ್‌ ಯಾದವ್‌ ಹೇಳಿದ್ದಾರೆ. ಅಲ್ಲದೆ, ‘ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರುವುದರಿಂದ ಸೌಹಾರ್ದತೆ, ಜಾತ್ಯತೀತತೆ ನೆಲೆಸಲಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಯಾಗ್‌ರಾಜ್‌ನಲ್ಲಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಆಯೋಜಿಸಿದ್ದ, ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಪಟ್ಟ ಸಭೆಯಲ್ಲಿ ಮಾತನಾಡಿದ ಅವರು, ‘ಒಂದು ಕೋಮಿನಲ್ಲಿ ಸತಿ ಸಹಗಮನ, ಅಸ್ಪೃಶ್ಯತೆ ಮೊದಲಾದವನ್ನು ನಿವಾರಿಸಲಾಗಿದೆ. ಆ ಕೋಮಿನಲ್ಲಿ ಧರ್ಮಶಾಸ್ತ್ರ, ವೇದಗಳಿವೆ. ಆದರೆ ಇನ್ನೊಂದು ಕೋಮಿನಲ್ಲಿ ಬಹು ಪತ್ನಿತ್ವ, ತ್ರಿವಳಿ ತಲಾಖ್‌, ಹಲಾಲಾನಂಥ ಪದ್ಧತಿ ಇವೆ. ಇವು ಸ್ವೀಕಾರ್ಹವಲ್ಲ’ ಎಂದರು.

‘ಈ ದೇಶವು ಒಂದು ಸಂವಿಧಾನ ಮತ್ತು ಒಂದು ದಂಡದ ಕಾನೂನುಗಳನ್ನು ಹೊಂದಿರುವುದರಿಂದ, ನಾಗರಿಕ ಕಾನೂನುಗಳನ್ನು ಸಹ ಏಕೀಕರಿಸುವುದು ತಾರ್ಕಿಕವಾಗಿದೆ. ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರುವುದರಿಂದ ಸೌಹಾರ್ದತೆ, ಜಾತ್ಯತೀತತೆ ನೆಲೆಸಲಿದೆ’ ಎಂದು ಅಭಿಪ್ರಾಯಪಟ್ಟರು.