ಸಾರಾಂಶ
ಲಾಹೋರ್: ಪಾಕಿಸ್ತಾನದ ಲಾಹೋರ್ನಲ್ಲಿ ಭಾನುವಾರ ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯೂಐ) 1,900 ತಲುಪಿದ್ದು, ಅತಿ ಕಳಪೆ ಮಟ್ಟಕ್ಕೆ ತಲುಪಿದೆ. ಈ ಮೂಲಕ ಭಾರತದ ರಾಜಧಾನಿ ದಿಲ್ಲಿಯನ್ನು ಹಿಂದಿಕ್ಕಿ ‘ವಿಶ್ವದ ಅತ್ಯಂತ ಕಲುಷಿತ ನಗರ’ವೆಂಬ ಕುಖ್ಯಾತಿ ಪಡೆದುಕೊಂಡಿದೆ. ದಿಲ್ಲಿಯಲ್ಲಿ ಸೋಮವಾರ ಎಕ್ಯೂಐ 400 ರಷ್ಟಿದ್ದು, ಲಾಹೋರ್ನಲ್ಲಿ ದಿಲ್ಲಿಗಿಂತ 5 ಪಟ್ಟು ಮಾಲಿನ್ಯ ಹೆಚ್ಚಿದೆ.
ಈ ನಡುವೆ ದಿನದಿಂದ ದಿನಕ್ಕೆ ಕುಸಿಯುತ್ತಿರುವ ವಾಯು ಗುಣಮಟ್ಟಕ್ಕೆ ಭಾರತದಲ್ಲಿನ ಮಾಲಿನ್ಯವೇ ಕಾರಣವೆಂದು ಪಾಕಿಸ್ತಾನ ಆರೋಪಿಸಿದೆ.ಮಾಧ್ಯಮಗಳೊಂದಿಗೆ ಮಾತನಾಡಿದ ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವ ರಾಜಾ ಜಹಾಂಗೀರ್ ಅನ್ವರ್, ‘ಭಾರತದಿಂದ ಬರುವ ಕಲುಷಿತ ಗಾಳಿಯಿಂದ ಲಾಹೋರ್ನಲ್ಲಿ ಎಕ್ಯೂಐ ಅತ್ಯಂತ ಕಳಪೆ ಗುಣಮಟ್ಟಕ್ಕೆ ತಲುಪುತ್ತಿದೆ. ಇದರಿಂದ ನಮಗೆ ತೊಂದರೆ ಆಗುತ್ತಿದೆ. ಹೀಗಾಗಿ ಇನ್ನು ಹವಾಮಾನ ರಾಜತಾಂತ್ರಿಕತೆಯೂ ಅಗತ್ಯವಿದೆ’ ಎಂದಿದ್ದಾರೆ.
ಪಾಕಿಸ್ತಾನವು ಪಂಜಾಬ್ ಗಡಿಗೆ ಹೊಂದಿಕೊಂಡಿದೆ. ಪಂಜಾಬ್ನಲ್ಲಿ ಬೆಳೆ ತ್ಯಾಜ್ಯ ಸುಡುವ ಸೀಸನ್ ಇದಾಗಿದ್ದು, ಅಲ್ಲಿಂದ ಬರುವ ಹೊಗೆ ತನ್ನಲ್ಲಿ ಮಾಲಿನ್ಯಕ್ಕೆ ಕಾರಣವಾಗುತ್ತಿದೆ ಎಂಬುದು ಪಾಕ್ ಆರೋಪ.==
ಮಾಲಿನ್ಯ ನಿಯಂತ್ರಣಕ್ಕೇನು ಕ್ರಮ?: ದಿಲ್ಲಿ ಸರ್ಕಾರಕ್ಕೆ ಸುಪ್ರೀಂ ಕ್ಲಾಸ್ನವದೆಹಲಿ: ದೀಪಾವಳಿ ಹಬ್ಬದ ಸಮಯದಲ್ಲಿ ಪಟಾಕಿಗಳ ಅಬ್ಬರದಿಂದ ಉಸಿರುಗಟ್ಟಿದ ರಾಷ್ಟ್ರರಾಜಧಾನಿ ದೆಹಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, ಪ್ರತಿ ವರ್ಷದಂತೆ ಪಾಲನೆಯಾಗದ ಪಟಾಕಿ ನಿಷೇಧ ಆದೇಶದ ಸಂಬಂಧ ಉತ್ತರಿಸುವಂತೆ ತಾಕೀತು ಮಾಡಿದೆ.
ಆಪ್ ನೇತೃತ್ವದ ಸರ್ಕಾರ ಹಾಗೂ ದೆಹಲಿ ಪೊಲಿಸರಿಗೆ ನೋಟಿಸ್ ಜಾರಿಗೊಳಿಸಿರುವ ನ್ಯಾ। ಅಭಯ್ ಎಸ್. ಒಕಾ ಹಾಗೂ ಅಗಸ್ಟಿನ್ ಜಾರ್ಜ್ ಮಸೀಹ್ ನೇತೃತ್ವದ ಪೀಠ, ‘ದೆಹಲಿಯಲ್ಲಿ ಪಟಾಕಿ ಉತ್ಪಾದನೆ, ಮಾರಾಟ ಹಾಗೂ ಸುಡುವುದರ ವಿರುದ್ಧ ಜಾರಿಗೊಳಿಸಲಾದ ಆದೇಶಗಳ ಕಡತವನ್ನು ಸಲ್ಲಿಸಿ. ಅಂತೆಯೇ, ಈ ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ತೆಗೆದುಕೊಂಡ ಕ್ರಮಗಳಿಗೆ ಸಂಬಂಧಿಸಿದಂತೆ ದೆಹಲಿಯ ಪೊಲೀಸ್ ಕಮೀಷನರ್ಗೂ ನೋಟಿಸ್ ಜಾರಿಗೊಳಿಸುತ್ತೇವೆ’ ಎಂದು ಝಾಡಿಸಿದೆ. ಇದಕ್ಕೆ ಉತ್ತರಿಸಲು 1 ವಾರದ ಗಡುವನ್ನು ನೀಡಲಾಗಿದೆ.ಜೊತೆಗೆ, ಮುಂದಿನ ವರ್ಷ ಸಂಪೂರ್ಣ ನಿಷೇಧ ಜಾರಿಗೊಳಿಸಲು ತೆಗೆದುಕೊಳ್ಳಲಿರುವ ಕ್ರಮಗಳು ಹಾಗೂ ಕೃಷಿ ತ್ಯಾಜ್ಯ ಸುಡುವ ರೈತರಿಗೆ ದಂಡ ವಿಧಿಸುವ ಬಗ್ಗೆ ಮಾಹಿತಿ ನೀಡುವಂತೆ ಕೇಳಿದೆ.ಸೋಮವಾರ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ ಅತಿ ಕಳಪೆ ಎನ್ನಬಹುದಾದ 400 ಅಂಕ ತಲುಪಿತ್ತು.