ಸಾರಾಂಶ
ಕಡಲೂರು: ಶಾಲಾ ವಾಹನವೊಂದು ಹಳಿ ಕ್ರಾಸಿಂಗ್ ಮಾಡುತ್ತಿದ್ದ ವೇಳೆ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದು ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ದಾರುಣ ಘಟನೆ ತಮಿಳುನಾಡಿನ ಕಡಲೀಲರುನಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ಮಂಗಳವಾರ ಬೆಳಿಗ್ಗೆ 7.45ರ ಸುಮಾರಿಗೆ ಶಾಲಾ ಬಸ್ ರೈಲ್ವೆ ಗೇಟ್ನಲ್ಲಿ ಹಳಿ ಕ್ರಾಸ್ ಮಾಡುತ್ತಿದ್ದಾಗ ವಿಲ್ಲುಪುರಂ ಮತ್ತು ಮೈಲಾಡುತುರೈ ನಡುವಿನ ಪ್ಯಾಸೆಂಜರ್ ರೈಲು ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ವ್ಯಾನ್ ಹಳಿಯಿಂದ ದೂರಕ್ಕೆ ಎಸೆಯಲ್ಪಟ್ಟಿದೆ. ಘಟನೆಯಲ್ಲಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಮತ್ತು ಚಾಲಕ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರೈಲು ಬರುವ ಕಾರಣಕ್ಕೆ ಗೇಟ್ ಕೀಪರ್ ಗೇಟ್ ಮುಚ್ಚಲು ಹೋದಾಗ ವಾಹನ ಚಾಲಕ ಶಾಲೆಗೆ ತಡವಾಗುತ್ತದೆ ಎನ್ನುವ ಕಾರಣಕ್ಕೆ ಕ್ರಾಸಿಂಗ್ಗೆ ಮುಂದಾಗಿದ್ದಾರೆ. ಈ ಕಾರಣದಿಂದಲೇ ಅಪಘಾತ ನಡೆದಿದೆ ಎನ್ನಲಾಗಿದೆ ಒಂದು ವರದಿ ತಿಳಿಸಿದ್ದರೆ, ಇನ್ನೊಂದು ವರದಿ ಅನ್ವಯ ರೈಲು ಬರುವಾಗ ಕ್ರಾಸಿಂಗ್ನಲ್ಲಿ ಗೇಟ್ ತೆರೆದಿತ್ತು ಎಂದು ಹೇಳಿವೆ. ಒಟ್ಟಾರೆ ನಿಯಮ ಉಲ್ಲಂಘನೆ, ನಿರ್ಲಕ್ಷ್ಯ ವಹಿಸಿ ಅಪಘಾತಕ್ಕೆ ಕಾರಣವಾದ ಗೇಟ್ ಕೀಪರ್ನನ್ನು ಕೆಲಸದಿಂದ ಅಮಾನತು ಮಾಡಲಾಗಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.ಗೇಟ್ ಕೀಪರ್ಗೆ ತಮಿಳು ಬಾರದಿರುವುದು
ರೈಲ್ವೆ ನಿಲ್ದಾಣದ ಗೇಟ್ ಕೀಪರ್ಗೆ ತಮಿಳು ಬರುತ್ತಿರಲಿಲ್ಲ
ಚೆನ್ನೈ: ತಮಿಳುನಾಡಿನಲ್ಲಿ ಶಾಲಾ ವಾಹನಕ್ಕೆ ರೈಲು ಡಿಕ್ಕಿಯಾಗಿ ಮೂವರು ವಿದ್ಯಾರ್ಥಿಗಳ ಸಾವು ಪ್ರಕರಣ ಇದೀಗ ಭಾಷಾ ಸಮಸ್ಯೆ ಆಯಾಮ ತೆಗೆದುಕೊಳ್ಳುತ್ತಿದ್ದು, ‘ರೈಲ್ವೆ ನಿಲ್ದಾಣದ ಗೇಟ್ ಕೀಪರ್ಗೆ ತಮಿಳು ಬರುತ್ತಿರಲಿಲ್ಲ. ಇದು ಅಪಘಾತಕ್ಕೆ ಕಾರಣ’ ಎಂದು ಡಿಎಂಕೆ ಹಿರಿಯ ನಾಯಕ ಟಿಕೆಎಸ್ ಇಳಂಗೋವನ್ ಹೇಳಿದ್ದಾರೆ. ಕಡಲೂರು ಸಂಬಂಧಿಸಿದಂತೆ ಗೇಟ್ ಕೀಪರ್ ಪಂಕಜ್ ಶರ್ಮಾರನ್ನು ಈಗಾಗಲೇ ಅಮಾನತು ಮಾಡಲಾಗಿದೆ. ಘಟನೆಗೆ ಪ್ರತಿಕ್ರಿಯಿಸಿರುವ ಇಳಂಗೋವನ್, ‘ರೈಲ್ವೆ ಕ್ರಾಸಿಂಗ್ನಲ್ಲಿದ್ದ ಗೇಟ್ ಕೀಪರ್ ತಮಿಳು ಭಾಷಿಕರಲ್ಲ. ಹೀಗಾಗಿ ಉಂಟಾದ ತಪ್ಪು ಸಂವಹನವೇ ದುರಂತಕ್ಕೆ ಕಾರಣವಾಗಿರಬಹುದು’ ಎಂದಿದ್ದಾರೆ.