ಸಾರಾಂಶ
ಆಲಮಟ್ಟಿ: ಆಲಮಟ್ಟಿ ಹಾಗೂ ಆಲಮಟ್ಟಿ ಡ್ಯಾಂ ಸೈಟ್ ಸಂಪರ್ಕ ಕಲ್ಪಿಸಲು ಅಡ್ಡಿಯಾಗಿರುವ ಆಲಮಟ್ಟಿ ರೈಲು ನಿಲ್ದಾಣದ ಬಳಿ ಅಂಡರ್ ಪಾಸ್ ನಿರ್ಮಿಸುವುದಾಗಿ ಸಂಸದ ರಮೇಶ ಜಿಗಜಿಣಗಿ ಭರವಸೆ ನೀಡಿದರು.
ಸೋಮವಾರ ಆಲಮಟ್ಟಿಗೆ ಭೇಟಿ ನೀಡಿದ ಅವರು ರೈಲ್ವೆಯ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು. ಅಂಡರ್ ಪಾಸ್ ನಿರ್ಮಾಣದ ಕುರಿತು ನೈರುತ್ಯ ರೇಲ್ವೆ ಜನರಲ್ ಮ್ಯಾನೇಜರ್ ಜೊತೆ ಚರ್ಚಿಸುವುದಾಗಿ ತಿಳಿಸಿದರು. ಅಂಡರ್ ಪಾಸ್ ನಿರ್ಮಾಣಕ್ಕೆ ತಾಂತ್ರಿಕ ತೊಂದರೆ ಬಗ್ಗೆ ಅಧಿಕಾರಿಗಳು ಹೇಳಿದ್ದು, ಅದನ್ನು ಬಗೆಹರಿಸಿ ನಿರ್ಮಿಸಲು ಸೂಚಿಸಿದ್ದೇನೆ. ಇಲಾಖೆಯ ಜನರಲ್ ಮ್ಯಾನೇಜರ್ ಜೊತೆ ಮಾತನಾಡುವೆ. ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಆಲಮಟ್ಟಿ-ಯಾದಗಿರಿ ರೈಲು ಮಾರ್ಗ ಸಮೀಕ್ಷೆಗೆ ಆದೇಶಿಸಲಾಗಿದೆ ಎಂದರು.
ಅರಳದಿನ್ನಿಯ ಸ್ಮಶಾನ ದಾರಿಯ ಸಮಸ್ಯೆ ಬಗೆಹರಿಸುವಿಕೆ, ಬೇನಾಳ ರೈಲು ನಿಲ್ದಾಣದ ದುರಸ್ತಿ, ವಂದಾಲ ಬಳಿ ರೈಲ್ವೆ ಓವರ್ ಬ್ರಿಜ್ ನಿರ್ಮಾಣ ಮಾಡಿಸುವುದಾಗಿ ಭರವಸೆ ನೀಡಿದರು.ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಭರತರಾಜ ದೇಸಾಯಿ, ಶಿವಾನಂದ ಅವಟಿ, ರಮೇಶ ಆಲಮಟ್ಟಿ, ಶಂಕರ ಜಲ್ಲಿ, ಮಲ್ಲೇಶಿ ರಾಠೋಡ, ಪ್ರಮೋದ ಕುಲಕರ್ಣಿ, ರಮೇಶ ರೇಶ್ಮಿ, ಲಕ್ಷ್ಮಣ ಹಂಡರಗಲ್ಲ, ಮಲ್ಲಪ್ಪ ಹುಂಡೇಕಾರ, ಎನ್.ಎ.ಪಾಟೀಲ, ಎಂ.ಡಿ.ಬಾಗಲಕೋಟೆ, ದಾಮೋದರ ರಾಠಿ, ಮಹಾಂತೇಶ ಹಿರೇಮಠ, ಶ್ರೀಧರ ಬಿದರಿ, ಸುಭಾಷ ಗೋಖಲೆ, ರಮೇಶ ವಂದಾಲ, ಬಿ.ಎಚ್.ಗಣಿ, ಮಲ್ಲನಗೌಡ ಪಾಟೀಲ, ಕರಿಯಪ್ಪ ಭಾವಿಕಟ್ಟಿ, ಬಸವರಾಜ ದಂಡಿನ, ರೈಲ್ವೆ ಅಧಿಕಾರಿಗಳಾದ ಚಂದನ್, ಸೋಮನಾಥ ಇತರರು ಇದ್ದರು.
ಈ ಸಂದರ್ಭದಲ್ಲಿ ಆಲಮಟ್ಟಿ, ಬೇನಾಳ, ವಂದಾಲ ಗ್ರಾಮಸ್ಥರು ವಿವಿಧ ಬೇಡಿಕೆಗಳ ಮನವಿಯನ್ನು ಸಂಸದರು ಹಾಗೂ ರೈಲ್ವೆ ಅಧಿಕಾರಿಗಳಿಗೆ ಸಲ್ಲಿಸಿದರು. ಆಲಮಟ್ಟಿಯಲ್ಲಿ ಹುಬ್ಬಳ್ಳಿ-ನಿಜಾಮುದ್ದೀನ್ ಎಕ್ಸಪ್ರೆಸ್ ರೈಲು ಹಾಗೂ ಯಶವಂತಪುರ-ಬಾರಮೇರ್ ರೈಲುಗಳನ್ನು ನಿಲ್ಲಿಸಬೇಕು, ಬೇನಾಳ ರೈಲು ನಿಲ್ದಾಣದ ಫ್ಲಾಟ್ ಫಾರ್ಮ್ ನವೀಕರಣಗೊಳಿಸಬೇಕು, ವಂದಾಲ ಬಳಿ ರೈಲ್ವೆ ಓವರ್ ಬ್ರಿಜ್ ನಿರ್ಮಿಸುವಂತೆ ಮನವಿ ಸಲ್ಲಿಸಿದರು.