- ಚುನಾವಣೆ ಘೋಷಣೆಗೆ ಕ್ಷಣಗಣನೆ ಹಿನ್ನೆಲೆ । ಮಹಿಳೆಯರ ಓಲೈಕೆಗೆ ಹಣ ವರ್ಗಏನಿದು ತಂತ್ರಗಾರಿಕೆ?

- 2023ರಿಂದ ಕುಟುಂಬದ ಒಬ್ಬ ಮಹಿಳೆಗೆ ಮಾಸಿಕ 1000 ರು.ಗಳನ್ನು ಸರ್ಕಾರ ವರ್ಗಾವಣೆ ಮಾಡುತ್ತಾ ಬಂದಿದೆ

- ‘ಕಲೈನರ್‌ ಮಹಿಳಾ ಸಬಲೀಕರಣ’ ಎಂಬ ಈ ಯೋಜನೆಯಲ್ಲಿ 1.31 ಕೋಟಿ ಮಹಿಳೆಯರು ಫಲಾನುಭವಿಗಳಿದ್ದಾರೆ

- ಯಾವುದೇ ಕ್ಷಣದಲ್ಲಿ ತ.ನಾಡು ಸೇರಿ ಪಂಚರಾಜ್ಯಗಳಿಗೆ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಕಂಡುಬರುತ್ತಿದೆ

- ಹೀಗಾಗಿ ಫೆಬ್ರವರಿ, ಮಾರ್ಚ್‌, ಏಪ್ರಿಲ್‌ನ 3000 ರು., ಬೇಸಿಗೆ ಖರ್ಚಿಗೆಂದು 2000 ರು. ವರ್ಗ ಮಾಡಿರುವ ಸ್ಟಾಲಿನ್‌


- ಯಾವುದೇ ಮುನ್ಸೂಚನೆ ನೀಡದೆ ಬೆಳ್ಳಂಬೆಳಗ್ಗೆ ಹಣ ಹಾಕಿದ ಸರ್ಕಾರ. ಮೆಸೇಜ್‌ ನೋಡಿ ಮಹಿಳೆಯರಿಗೆ ಅಚ್ಚರಿ

--

ಇದು ‘ಬಿಹಾರ ಮಾದರಿ’

ಚುನಾವಣೆ ಗೆಲ್ಲುವ ತಂತ್ರ

ಕೆಲ ತಿಂಗಳ ಹಿಂದಷ್ಟೇ ನಡೆದ ಬಿಹಾರ ವಿಧಾನಸಭಾ ಚುನಾವಣೆ ಘೋಷಣೆಗೂ ಮುನ್ನ ಎನ್‌ಡಿಎ ಮೈತ್ರಿಕೂಟ 75 ಲಕ್ಷ ಮಹಿಳೆಯರ ಬ್ಯಾಂಕ್‌ ಖಾತೆಗೆ ಸ್ವಉದ್ಯೋಗ ಕೈಗೊಳ್ಳಲು ತಲಾ 10000 ರು. ಜಮೆ ಮಾಡಿತ್ತು. ಇದು ರಾಜ್ಯದಲ್ಲಿ ಎನ್‌ಡಿಎ ಕೂಟದ ಭರ್ಜರಿ ಜಯಕ್ಕೆ ಕಾರಣ ಎಂಬ ವಿಶ್ಲೇಷಣೆ ಕೇಳಿಬಂದಿತ್ತು. ಅದರ ಬೆನ್ನಲ್ಲೇ ಡಿಎಂಕೆ ಸರ್ಕಾರ ಕೂಡ ಅದನ್ನೇ ಹೋಲುವಂಥ ರೀತಿಯಲ್ಲಿ ಹಣ ಬಿಡುಗಡೆ ಮೂಲಕ ಮತದಾರರ ಓಲೈಕೆಗೆ ಮುಂದಾಗಿದೆ.

--

ಚೆನ್ನೈ: ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಸರ್ಕಾರ ರಾಜ್ಯದ 1.31 ಕೋಟಿ ಮಹಿಳೆಯರಿಗೆ ಶುಕ್ರವಾರ ಬೆಳ್ಳಂಬೆಳಗ್ಗೆಯೇ 5000 ರು.ನ ಅಚ್ಚರಿ ನೀಡಿದೆ. ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಾಗಿರುವ 1.31 ಕೋಟಿ ಮಹಿಳೆಯರ ಬ್ಯಾಂಕ್‌ ಖಾತೆಗೆ ಸರ್ಕಾರ ಯಾವುದೇ ಮುನ್ಸೂಚನೆ ನೀಡದೆಯೇ ತಲಾ 5000 ರು. ಜಮೆ ಮಾಡಿದೆ.

ಅಲ್ಲದೆ ರಾಜ್ಯದಲ್ಲಿ ಮತ್ತೆ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಮಾಸಿಕ ನೀಡುತ್ತಿರುವ ತಲಾ 1000 ರು. ಹಣದ ನೆರವನ್ನು 2000 ರು.ಗೆ ಏರಿಸುವ ಘೋಷಣೆಯನ್ನೂ ಮಾಡಿದೆ. ಈ ಮೂಲಕ ರಾಜ್ಯದ 5.4 ಕೋಟಿ ಮತದಾರರ ಪೈಕಿ ಶೇ.50ಕ್ಕಿಂತ ಹೆಚ್ಚಿನ ಪಾಲು ಹೊಂದಿರುವ ಮಹಿಳೆಯರ ಮತ ಸೆಳೆಯಲು ಡಿಎಂಕೆ ಮುಂದಾಗಿದೆ.

ಖಾತೆಗೆ ಹಣ:

2021ರಲ್ಲಿ ಅಧಿಕಾರಕ್ಕೆ ಬಂದಿದ್ದ ಡಿಎಂಕೆ ಸರ್ಕಾರ, 2023ರಿಂದ ಪ್ರತಿ ಕುಟುಂಬದ ಒಬ್ಬ ಮಹಿಳೆಗೆ ಮಾಸಿಕ ತಲಾ 1000 ರು. ನೆರವು ನೀಡುವ ಕಲೈನರ್‌ ಮಹಿಳಾ ಸಬಲೀಕರಣ ಯೋಜನೆ ಜಾರಿ ಮಾಡಿತ್ತು. ಪ್ರತಿ ತಿಂಗಳ 15ನೇ ತಾರೀಖು ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡಲಾಗುತ್ತಿತ್ತು.

ಈ ನಡುವೆ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸಜ್ಜಾಗಿದೆ. ಯಾವುದೇ ಕ್ಷಣದಲ್ಲಿ ಚುನಾವಣಾ ದಿನಾಂಕ ಘೋಷಣೆ ಸಾಧ್ಯತೆ ಇದೆ. ದಿನಾಂಕ ಘೋಷಣೆಯಾದರೆ ಮತದಾರರ ಮೇಲೆ ಪ್ರಭಾವ ಬೀರುವ ಯೋಜನೆಗಳಾದ ಮಾಸಿಕ ಹಣ ವಿತರಣೆಗೆ ಬ್ರೇಕ್‌ ಬೀಳುತ್ತೆ. ಈ ಹಿನ್ನೆಲೆಯಲ್ಲಿ ಫೆಬ್ರುವರಿ, ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳ ತಲಾ 1000 ರು. ಸೇರಿ ಒಟ್ಟು 3000 ರು. ಹಾಗೂ ಬೇಸಿಗೆ ಕಾಲ ಎದುರಿಸುವ ಹೆಸರಿನಲ್ಲಿ ಹೆಚ್ಚುವರಿ 2000 ರು. ಹಣ ಸೇರಿ ಒಟ್ಟು 5000 ರು. ನಗದನ್ನು ಮಹಿಳೆಯರ ಬ್ಯಾಂಕ್‌ ಖಾತೆಗೆ ಯಾವುದೇ ಮುನ್ಸೂಚನೆ ನೀಡದೆಯೇ ಶುಕ್ರವಾರ ಬೆಳಗ್ಗೆ ಜಮೆ ಮಾಡಲಾಗಿದೆ.

ಸಿಎಂ ಘೋಷಣೆ:

ಹಣ ಜಮೆ ಹೇಳಿಕೆ ಬಿಡುಗಡೆ ಮಾಡಿರುವ ಮುಖ್ಯಮಂತ್ರಿ ಸ್ಟಾಲಿನ್‌, ‘ಬೆಳಗ್ಗೆಯೇ ನೀವೆಲ್ಲಾ ನಿಮ್ಮ ಖಾತೆಗೆ ತಲಾ 5000 ರು. ಹಣ ಸ್ವೀಕರಿಸಿರಬಹುದು. ಮುಂದಿನ ಚುನಾವಣೆಯ ಹೆಸರಲ್ಲಿ ಇದನ್ನು ನೀಡಲಾಗುತ್ತಿದೆ ಎಂದು ಯೋಜನೆ ಜಾರಿಗೆ ತಡೆಯೊಡ್ಡಲು ಕೆಲ ಶಕ್ತಿಗಳು ಪ್ರಯತ್ನಿಸಿದ ಹಿನ್ನೆಲೆಯಲ್ಲಿ ಫೆಬ್ರುವರಿ ತಿಂಗಳಿನಿಂದ ಹಿಡಿದು 3 ತಿಂಗಳ ಅವಧಿಯ ತಲಾ 1000 ರು. ಮತ್ತು ಬೇಸಿಗೆಯನ್ನು ಎದುರಿಸಲು 2000 ರು. ಸೇರಿದಂತೆ ಒಟ್ಟು 5000 ರು. ಜಮೆ ಮಾಡಲಾಗಿದೆ. ಇದನ್ನು ಮಕ್ಕಳ ಶಿಕ್ಷಣ, ಔಷಧ ಖರೀದಿ ಮತ್ತಿತರೆ ಕೆಲಸಗಳಿಗೆ ಬಳಸಿ’ ಎಂದು ಸ್ಟಾಲಿನ್‌ ಸಲಹೆ ನೀಡಿದ್ದಾರೆ.

ವಿಪಕ್ಷಗಳ ವ್ಯಂಗ್ಯ:

ಈ ನಡುವೆ ಚುನಾವಣೆಯಲ್ಲಿ ಸೋಲು ಖಚಿತವಾದ ಹಿನ್ನೆಲೆಯಲ್ಲಿ ಮಹಿಳಾ ಮತದಾರರನ್ನು ಗುರಿಯಾಗಿಸಿ ಅವರ ಖಾತೆಗೆ ಹಣ ಜಮೆ ಮಾಡಲಾಗಿದೆ ಎಂದು ವಿಪಕ್ಷಗಳು ವ್ಯಂಗ್ಯವಾಡಿವೆ.