- - ಮತದಾರ ಪಟ್ಟಿ ಪರಿಷ್ಕರಣೆ ನಡೆಸುತ್ತಿರುವುದಕ್ಕೆ ಕಿಡಿನವದೆಹಲಿ: ತಮ್ಮ ವಿರೋಧ ಇದ್ದರೂ ಮತದಾರ ಪಟ್ಟಿ ಪರಿಷ್ಕರಣೆಗೆ (ಎಸ್ಐಆರ್) ಹಟ ತೊಟ್ಟು ನಿಂತಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಸಂಸತ್ತಿನಲ್ಲಿ ವಾಗ್ದಂಡನೆ ಅರ್ಜಿ ಸಲ್ಲಿಸಲು ವಿಪಕ್ಷಗಳು ಮುಂದಾಗಿವೆ ಎಂಬ ಮಾಹಿತಿ ಲಭಿಸಿದೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ವಿಪಕ್ಷಗಳು ಮುಂದಾದ ಬೆನ್ನಲ್ಲೇ, ಈ ವಿದ್ಯಮಾನ ನಡೆದಿದೆ.

ಮಾರ್ಚ್ ಎರಡನೇ ವಾರದಲ್ಲಿ ಪ್ರಾರಂಭವಾಗುವ ಬಜೆಟ್ ಅಧಿವೇಶನದ 2ನೇ ಹಂತದಲ್ಲಿ ವಾಗ್ದಂಡನೆ ನೋಟಿಸ್‌ ನೀಡಿ ಬಳಿಕ ನಿಲುವಳಿ ಮಂಡಿಸಲು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಮುಂದಾಗಿದೆ. ಇದಕ್ಕೆ ಇಂಡಿಯಾ ಕೂಟದ ಇತರ ಅಂಗಪಕ್ಷಗಳು ಸಮ್ಮತಿಸಿವೆ ಎಂದು ಮೂಲಗಳು ಹೇಳಿವೆ.

ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಟಿಎಂಸಿ ಬೆಂಬಲಿಸಿರಲಿಲ್ಲ. ಆದರೆ ಮತದಾರ ಪಟ್ಟಿ ಪರಿಷ್ಕರಣೆಗೆ (ಎಸ್ಐಆರ್) ವಿಪಕ್ಷಗಳಿಂದ ಒಟ್ಟಾಗಿ ವ್ಯಾಪಕ ವಿರೋಧವಿದೆ. ಹೀಗಾಗಿ ಬಿರ್ಲಾ ವಿರುದ್ಧದ ತಮ್ಮ ನಡೆಗೆ ಟಿಎಂಸಿ ಅಸಮ್ಮತಿ ಸೂಚಿಸಿದ್ದರೂ, ಎಸ್ಐಆರ್‌ ನೇತೃತ್ವ ವಹಿಸಿರುವ ಜ್ಞಾನೇಶ್‌ ವಿರುದ್ಧ ಸಿಡಿದು ನಿಂತಿರುವ ಮಮತಾ ಪಕ್ಷಕ್ಕೆ ಇತರ ಪ್ರತಿಪಕ್ಷಗಳು ಬೆಂಬಲ ಸೂಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಆದರೆ ವಿಪಕ್ಷಗಳಿಗೆ ಬಹುಮತ ಇಲ್ಲದ ಕಾರಣ ಎನ್‌ಡಿಎ ಈ ಬಗ್ಗೆ ತಲೆಕೆಡಿಸಿಕೊಳ್ಳುವ ಸಾಧ್ಯತೆ ಇಲ್ಲ. ಆದಾಗ್ಯೂ 2 ಸಾಂವಿಧಾನಿಕ ಪದವಿ (ಸಿಇಸಿ ಮತ್ತು ಸ್ಪೀಕರ್‌) ವಿರುದ್ಧ ಏಕಕಾಲಕ್ಕೆ ನಿರ್ಣಯ ಮಂಡನೆ ಆಗುತ್ತಿರುವುದು ಬಿಜೆಪಿಯನ್ನು ಒತ್ತಡಕ್ಕೆ ಸಿಲುಕಿಸಲಿದೆ ಎನ್ನಲಾಗಿದೆ.