ಸಾರಾಂಶ
ನವದೆಹಲಿ, ರಾಂಚಿ: ಬುಡಕಟ್ಟು ಹೋರಾಟ ರಾಷ್ಟ್ರಮಟ್ಟದಲ್ಲೂ ಪ್ರತಿಧ್ವನಿಸುವಂತೆ ಮಾಡಿದ್ದ, ಪ್ರತ್ಯೇಕ ಜಾರ್ಖಂಡ್ ರಾಜ್ಯ ಸೃಷ್ಟಿಗೆ ಕಾರಣರಾಗಿದ್ದ, ಜಾರ್ಜಂಡ್ನ ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್ (81) ಸೋಮವಾರ ಇಲ್ಲಿ ನಿಧನರಾದರು.
ಅನಾರೋಗ್ಯದಿಂದ ಬಳಲುತ್ತಿದ್ದ ಶಿಬು ಅವರು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಬೆಳಗ್ಗೆ ಅವರ ಇಹಲೋಕ ತ್ಯಜಿಸಿದ್ದಾರೆ.ಶಿಬು ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಮೋದಿಯಾಗಿ ಗಣ್ಯರು ಕಂಬನಿ ಮಿಡಿದಿದ್ದಾರೆ. ಶಿಬು ಅವರು, ಪತ್ನಿ ರೂಪಿ ಸೊರೆನ್, ಪುತ್ರ ಹೇಮಂತ್ ಸೊರೇನ್, ಬಸಂತ್ ಸೊರೇನ್ ಮತ್ತು ಪುತ್ರಿ ಅಂಜಲಿ ಅವರನ್ನು ಅಗಲಿದ್ದಾರೆ.
ಹುಟ್ಟು ಹೋರಾಟಗಾರ:
ಶಿಬುಗೆ 15 ವರ್ಷ ವಯಸ್ಸಾಗಿದ್ದ ವೇಳೆ ಅವರ ತಂದೆಯನ್ನು ಭೂಮಿಯ ಸಾಲದ ಪ್ರಕರಣದಲ್ಲಿ ಸಾಲಗಾರರು ಹತ್ಯೆಗೈದಿದ್ದರು. ಇದು ಬುಡಕಟ್ಟು ಜನರ ಬದುಕು, ಹೋರಾಟದ ಕುರಿತು ಶಿಬು ಗಮನ ಸೆಳೆದು, ಅದೇ ಅವರ ಸೈದ್ದಾಂತಿಕ ಹೋರಾಟಕ್ಕೆ ಕಾರಣವಾಯ್ತು. ಇದೇ ಕಾರಣಕ್ಕೆ ರಾಜ್ಯದ ಜನತೆ ಅವರನ್ನು ದಿಶೋಮ್ ಗುರು (ಭೂಮಿಯ ನಾಯಕ) 1973ರಲ್ಲಿ ಶಿಬು ಸೊರೇನ್, ಎ.ಕೆ.ರಾಯ್ ಮತ್ತು ಬಿನೋದ್ ಬಿಹಾರ ಜೊತೆಗೂಡಿ ಜಾರ್ಜಂಡ್ ಮುಕ್ತಿ ಮೋರ್ಚಾ ಸ್ಥಾಪಿಸಿದರು. ಮುಂದೆ ಇದೇ ಸಂಘಟನೆ, ಪ್ರತ್ಯೇಕ ಜಾರ್ಖಂಡ್ ರಾಜ್ಯ ರಚನೆಗೆ ಹೋರಾಟಕ್ಕೆ ಮೂಲ ರಾಜಕೀಯವಾಗಿ ಧ್ವನಿಯಾಗಿ ಹೊರಹೊಮ್ಮಿತು. ಇದರ ಫಲವಾಗಿ ಅಂತಿಮವಾಗಿ 2000ನೇ ಇಸವಿಯಲ್ಲಿ ಬಿಹಾರದಿಂದ ಹಲವು ಜಿಲ್ಲೆಗಳನ್ನು ಪ್ರತ್ಯೇಕಿಸಿ ಜಾರ್ಖಂಡ್ ರಾಜ್ಯ ರಚನೆ ಮಾಡಲಾಯ್ತು.
ರಾಜಕೀಯ:
8 ರಾಜ್ಯ ರಾಜ್ಯ ವಿಧಾನಸಭೆಗೆ, ಅದರ ನಡುವೆ ಲೋಕಸಭೆ, ರಾಜ್ಯಸಭೆಗೂ ಆಯ್ಕೆಯಾಗಿದ್ದ ಶಿಬು ಸೊರೇನ್ ಕೇಂದ್ರ ಸಚಿವರಾಗಿ ಮೂರು ಬಾರಿ ಜಾರ್ಜಂಡ್ ಮುಖ್ಯಮಂತ್ರಿಯಾಗಿಯು ಸೇವೆ ಸಲ್ಲಿಸಿದ್ದರು.
ಕಳಂಕ:
ಬುಡಕಟ್ಟು ನಾಯಕ ಶಿಬು ವಿರುದ್ಧ 1975ರಲ್ಲಿ ಚಿರುಧಿ ಜಿಲ್ಲೆಯಲ್ಲಿ 11 ಜನರನ್ನು ಹತ್ಯೆಗೈದ, ತಮ್ಮ ಮಾಜಿ ಆಪ್ತ ಕಾರ್ಯದರ್ಶಿ ಶಶಿನಾಥ್ ಹತ್ಯೆ ಪ್ರಕರಣ, ಅವಿಶ್ವಾಸ ಗೊತ್ತುವಳಿ ನಿರ್ಣಯದ ವೇಳೆ ಯುಪಿಎ ಸರ್ಕಾರದ ಪರವಾಗಿ ಮತ ಚಲಾಯಿಸಲು ಹಣ ಪಡೆದ ಆರೋಪಗಳು ಕೇಳಿಬಂದಿತ್ತಾದರೂ ಸಾಕ್ಷ್ಯಧಾರದ ಕೊರತೆಗಳು ಅವರನ್ನು ದೋಷಮುಕ್ತ ಮಾಡಿತ್ತು.