ಸಾರಾಂಶ
ಭಾರತದ ಮಾಜಿ ಪ್ರಧಾನಿ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಇಂದಿರಾ ಗಾಂಧಿ ಅವರನ್ನು ಭಾರತ ಮಾತೆ ಎಂದು ಕೇಂದ್ರ ಸಚಿವ, ಬಿಜೆಪಿ ನಾಯಕ ಸುರೇಶ್ ಗೋಪಿ ಬಣ್ಣಿಸಿದ್ದಾರೆ.
ತ್ರಿಶ್ಶೂರ್: ಭಾರತದ ಮಾಜಿ ಪ್ರಧಾನಿ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಇಂದಿರಾ ಗಾಂಧಿ ಅವರನ್ನು ಭಾರತ ಮಾತೆ ಎಂದು ಕೇಂದ್ರ ಸಚಿವ, ಬಿಜೆಪಿ ನಾಯಕ ಸುರೇಶ್ ಗೋಪಿ ಬಣ್ಣಿಸಿದ್ದಾರೆ. ಅಲ್ಲದೆ ಕೇರಳದ ಮಾಜಿ ಮುಖ್ಯಮಂತ್ರಿ ಕೆ.ಕರುಣಾಕರನ್ ಹಾಗೂ ಸಿಪಿಎಂನ ಇ.ಕೆ.ನಯನಾರ್ ಅವರನ್ನು ತಮ್ಮ ರಾಜಕೀಯ ಗುರುಗಳು ಎಂದು ಹೇಳಿದ್ದಾರೆ.
ನಗರದಲ್ಲಿ ಕರುಣಾಕರನ್ ಸ್ಮಾರಕಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ಇಂದಿರಾ ಗಾಂಧಿಯನ್ನು ಭಾರತ ದೇಶದ ತಾಯಿ ಎನ್ನಬಹುದು.
ಅದೇ ರೀತಿ ಕೇರಳದಲ್ಲಿ ಕಾಂಗ್ರೆಸ್ ಪಕ್ಷದ ಏಳಿಗೆಗೆ ದುಡಿದ ದಿ. ಕರುಣಾಕರನ್ ಅವರನ್ನು ಕೇರಳ ರಾಜ್ಯದ ಕಾಂಗ್ರೆಸ್ ಪಿತಾಮಹ ಹಾಗೂ ಕೆಚ್ಚೆದೆಯ ಆಡಳಿತಗಾರ ಎನ್ನಬಹುದು ಎಂದಿದ್ದಾರೆ. ಜೊತೆಗೆ ನಯನಾರ್ ಮತ್ತು ಕರುಣಾಕರನ್ ಇಬ್ಬರು ನನ್ನ ರಾಜಕೀಯ ಗುರುಗಳು’ ಎಂದಿದ್ದಾರೆ. ವಿಶೇಷವೆಂದರೆ ಲೋಕಸಭಾ ಚುನಾವಣೆಯಲ್ಲಿ ಸುರೇಶ್ ಗೋಪಿ ಅವರು ಕರುಣಾಕರನ್ ಪುತ್ರ ಮುರಳೀಧರನ್ರನ್ನು ಸೋಲಿಸಿದ್ದಾರೆ.