205 ಅಕ್ರಮ ವಲಸಿಗರನ್ನು ಭಾರತಕ್ಕೆ ಕಳಿಸಿದ ಅಮೆರಿಕ

| Published : Feb 05 2025, 12:30 AM IST

ಸಾರಾಂಶ

ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಆರಂಭಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸರ್ಕಾರ, ಅದರ ಭಾಗವಾಗಿ ಇದೀಗ ಭಾರತೀಯ ಮೂಲದ ಅಕ್ರಮ ನಿವಾಸಿಗಳನ್ನು ಸ್ವದೇಶಕ್ಕೆ ವಾಪಸ್‌ ಕಳುಹಿಸುವ ಕಾರ್ಯಕ್ಕೆ ಚಾಲನೆ ನೀಡಿದೆ.

ನವದೆಹಲಿ: ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಆರಂಭಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸರ್ಕಾರ, ಅದರ ಭಾಗವಾಗಿ ಇದೀಗ ಭಾರತೀಯ ಮೂಲದ ಅಕ್ರಮ ನಿವಾಸಿಗಳನ್ನು ಸ್ವದೇಶಕ್ಕೆ ವಾಪಸ್‌ ಕಳುಹಿಸುವ ಕಾರ್ಯಕ್ಕೆ ಚಾಲನೆ ನೀಡಿದೆ. ಸೂಕ್ತ ದಾಖಲೆಗಳಿಲ್ಲದೆ ಅಮೆರಿಕದಲ್ಲಿ ನೆಲೆಸಿದ್ದ 205 ಮಂದಿ ಭಾರತೀಯರನ್ನು ಅಮೆರಿಕದ ಸ್ಯಾನ್‌ ಆ್ಯಂಟಾನಿಯೋ ವಿಮಾನ ನಿಲ್ದಾಣದಿಂದ ಸಿ-17 ಮಿಲಿಟರಿ ವಿಮಾನದ ಮೂಲಕ ಕಳುಹಿಸಿಕೊಡಲಾಗಿದೆ.

ಪ್ರತಿಯೊಬ್ಬರ ದಾಖಲೆಗಳನ್ನು ಸ್ಪಷ್ಟವಾಗಿ ಪರಿಶೀಲಿಸಿದ ಬಳಿಕವೇ ಅವರನ್ನು ವಾಪಸ್‌ ಕಳುಹಿಸಿಕೊಡಲಾಗಿದೆ. ಅಕ್ರಮ ವಲಸಿಗರು ಇರುವ ವಿಮಾನವು ಮಾರ್ಗ ಮಧ್ಯೆ ಜರ್ಮನಿಯ ರಾಮ್‌ಸ್ಟೈನ್‌ನಲ್ಲಿ ಇಂಧನಕ್ಕಾಗಿ ಕೆಲಕಾಲ ತಂಗಲಿದ್ದು, ಬಳಿಕ ನೇರವಾಗಿ ಪಂಜಾಬ್‌ನಲ್ಲಿ ಬಂದಿಳಿಯಲಿದೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕದ ರಾಯಭಾರ ಕಚೇರಿ ಈ ಬೆಳವಣಿಗೆಯನ್ನು ಖಚಿತಪಡಿಸಲು ನಿರಾಕರಿಸಿದೆ. ಆದರೆ ಅಮೆರಿಕವು ತನ್ನ ವಲಸೆ ನೀತಿಯನ್ನು ಕಠಿಣಗೊಳಿಸುತ್ತಿದೆ, ಅಕ್ರಮ ವಲಸಿಗರನ್ನು ವಾಪಸ್‌ ಕಳುಹಿಸಿಕೊಡುತ್ತಿದೆ ಎಂದಷ್ಟೇ ಹೇಳಿದೆ.

ಪ್ರತಿ ವರ್ಷವೂ ಅಮೆರಿಕ ಅಕ್ರಮ ವಲಸಿಗರನ್ನು ಅವರವರ ತವರು ರಾಜ್ಯಕ್ಕೆ ಕಳುಹಿಸಿ ಕೊಡುತ್ತಿದೆಯಾದರೂ, ಟ್ರಂಪ್ 2ನೇ ಬಾರಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಭಾರತೀಯರನ್ನು ತವರಿಗೆ ಕಳುಹಿಸುತ್ತಿದೆ.

18000 ಭಾರತೀಯರ ಪಟ್ಟಿ:

ಅಮೆರಿಕದ ಇತಿಹಾಸದಲ್ಲೇ ಅತಿದೊಡ್ಡ ಗಡೀಪಾರು ಪ್ರಕ್ರಿಯೆಯನ್ನು ಟ್ರಂಪ್‌ ಸರ್ಕಾರ ಆರಂಭಿಸಿದೆ. ಒಟ್ಟಾರೆ 1.5 ದಶಲಕ್ಷ ಮಂದಿಯನ್ನು ಗಡೀಪಾರು ಮಾಡಲು ಅಮೆರಿಕ ನಿರ್ಧರಿಸಿದ್ದು, 18 ಸಾವಿರ ಭಾರತೀಯ ಅಕ್ರಮ ವಲಸಿಗರ ಪ್ರಾಥಮಿಕ ಪಟ್ಟಿಯೂ ಇದರಲ್ಲಿದೆ.

ಅಮೆರಿಕದಲ್ಲಿ 7.25 ಲಕ್ಷ ಮಂದಿ ಭಾರತೀಯರು ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದು ಮೆಕ್ಸಿಕೋ, ಇಎಲ್‌ ಸಾಲ್ವೆಡಾರ್‌ ಬಳಿಕದ ಅತಿದೊಡ್ಡ ಅಕ್ರಮ ನಿವಾಸಿಗಳ ಸಂಖ್ಯೆ ಭಾರತೀಯರದ್ದಾಗಿದೆ.

ಭಾರತದ ವಿರೋಧ ಇಲ್ಲ:

ಅಕ್ರಮ ನಿವಾಸಿಗಳನ್ನು ವಾಪಸ್‌ ಕಳುಹಿಸಿಕೊಡುವ ಅಮೆರಿಕದ ಕ್ರಮಕ್ಕೆ ಭಾರತದಿಂದ ಯಾವುದೇ ವಿರೋಧ ವ್ಯಕ್ತವಾಗಿಲ್ಲ. ನಮ್ಮ ದೇಶದ ಅಕ್ರಮ ನಿವಾಸಿಗಳನ್ನು ಸ್ವೀಕರಿಸಲು ಭಾರತ ಸಿದ್ಧವಿದೆ ಎಂದು ಈಗಾಗಲೇ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿದ್ದಾರೆ.

ಭಾರತವು ಅಕ್ರಮ ವಲಸೆಯನ್ನು ವಿರೋಧಿಸುತ್ತದೆ. ಯಾಕೆಂದರೆ ಅದು ಹಲವು ಸಂಘಟಿತ ಅಪರಾಧಗಳ ಜತೆಗೆ ತಳಕು ಹಾಕಿಕೊಂಡಿರುತ್ತದೆ ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ಅವರೂ ಹೇಳಿದ್ದಾರೆ. ಸೂಕ್ತ ದಾಖಲೆಗಳನ್ನು ನೀಡಿದರೆ ರಾಷ್ಟ್ರೀಯತೆಯನ್ನು ಪರಿಶೀಲಿಸಿ ಅಕ್ರಮವಾಗಿ ನೆಲೆಸಿರುವವರನ್ನು ವಾಪಸ್‌ ತೆಗೆದುಕೊಳ್ಳಲಿದ್ದೇವೆ ಎಂದು ಅವರು ಹೇಳಿದ್ದರು.