ಸಾರಾಂಶ
ಆಗ್ರಾ: ದೇಶದಲ್ಲಿ ಆಹಾರದ ಪಾರ್ಸಲ್ಗಳಲ್ಲಿ ಕೀಟಾಣುಗಳು ಪತ್ತೆ ಆಗುವ ಸರಣಿ ಮುಂದುವರಿದಿದೆ. ಗುರುವಾರ ಭೋಪಾಲ್ನಿಂದ ಆಗ್ರಾಗೆ ಹೋಗುತ್ತಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಕೊಡಲಾದ ಊಟದಲ್ಲಿ ಜಿರಳೆ ಪತ್ತೆಯಾಗಿದೆ. ಇದರ ಬೆನ್ನಲ್ಲೇ ಇದರ ನಿರ್ವಹಣೆ ಹೊತ್ತ ಐಆರ್ಸಿಟಿಸಿ, ಪ್ರಯಾಣಿಕ ದಂಪತಿಯಲ್ಲಿ ಕ್ಷಮೆ ಕೇಳಿದೆ.
ವಂದೇ ಭಾರತ್ ರೈಲಿನಲ್ಲಿ ತಮ್ಮ ಸಂಬಂಧಿಕರಿಗೆ ಕೊಡಲಾದ ಊಟದಲ್ಲಿ ಜಿರಳೆ ಕಾಣಿಸಿಕೊಂಡ ಬಗ್ಗೆ ವಿದಿತ್ ವರ್ಷಣೆ ತಮ್ಮ ಎಕ್ಸ್ ಖಾತೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಐಆರ್ಸಿಟಿಸಿ ಕ್ಷಮೆ ಯಾಚಿಸಿದೆ. ಜೊತೆಗೆ ಸಂಬಂಧಪಟ್ಟವರ ಮೇಲೆ ಸೂಕ್ತ ಪ್ರಮ ಕೈಗೊಳ್ಳಲಾಗಿದೆ ಎಂದು ಭರವಸೆ ನೀಡಿದೆ.
ಈ ಮೊದಲೂ ಇಂತಹ ಪ್ರಕರಣಗಳು ದಾಖಲಾಗಿದ್ದು, ರೈಲ್ವೆಯಲ್ಲಿ ನೀಡಲಾಗುವ ಆಹಾರದ ಬಗ್ಗೆ ಕಳವಳಕ್ಕೆ ಕಾರಣವಾಗಿದೆ.
ರಾಮಾಯಣ ಅವಹೇಳನ:
ಬಾಂಬೆ ಐಐಟಿ ವಿದ್ಯಾರ್ಥಿಗಳಿಗೆ 1.2 ಲಕ್ಷ ರು. ದಂಡ
ಮುಂಬೈ: ರಾಮಾಯಣವನ್ನು ವಿಡಂಬನೆ ಮಾಡಿ ‘ರಾಹೋವನ’ ಶೀರ್ಷಿಕೆಯ ವಿವಾದಾತ್ಮಕ ನಾಟಕ ಪ್ರದರ್ಶಿಸಿದ್ದಕ್ಕಾಗಿ ಬಾಂಬೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ತನ್ನ 8 ವಿದ್ಯಾರ್ಥಿಗಳಿಗೆ ಭಾರಿ ದಂಡ ವಿಧಿಸಿದೆ.ಹಿಂದೂ ಮಹಾಕಾವ್ಯವನ್ನು ಮನಬಂದಂತೆ ತಿರುಚಿ ಹಿಂದೂಗಳ ಭಾವನೆಗೆ ಧಕ್ಕೆ ತರಲಾಗಿತ್ತು ಎಂಬ ಆರೋಪವು ನಾಟಕ ಪ್ರದರ್ಶನದ ಬಳಿಕ ಕೇಳಿಬಂದಿತ್ತು. ನಾಟಕದಲ್ಲಿ ವಾದವನ್ನು ಉತ್ತೇಜಿಸುವ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಅಪಹಾಸ್ಯ ಮಾಡುವ ಅಂಶಗಳಿದ್ದವು ಎಂದು ದೂರಲಾಗಿತ್ತು. ಹೀಗಾಗಿ ಸಂಸ್ಥೆಯು ತಪ್ಪಿನ ತೀವ್ರತೆ ಆಧರಿಸಿ 4 ವಿದ್ಯಾರ್ಥಿಗಳಿಗೆ ತಲಾ ₹ 1.2 ಲಕ್ಷ ದಂಡ ಹಾಗೂ ಉಳಿದ 4 ವಿದ್ಯಾರ್ಥಿಗಳಿಗೆ ತಲಾ 40 ಸಾವಿರ ರು. ದಂಡ ವಿಧಿಸಿದೆ.