ಇಲ್ಲಿನ ರಾಜಭವನದಲ್ಲಿ ನಿಯೋಜಿಸಲಾಗಿರುವ ಕೋಲ್ಕತಾ ಪೊಲೀಸರಿಂದ ನನಗೆ ಅಭದ್ರತೆ ಕಾಡುತ್ತಿದೆ. ಅವರನ್ನು ಇಲ್ಲಿಂದ ತೆರವು ಮಾಡುವಂತೆ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಸೂಚಿಸಿದ್ದರೂ ಪ್ರಯೋಜನ ಆಗಿಲ್ಲ ಎಂದು ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಕಿಡಿಕಾರಿದ್ದಾರೆ.
ಕೋಲ್ಕತಾ : ಇಲ್ಲಿನ ರಾಜಭವನದಲ್ಲಿ ನಿಯೋಜಿಸಲಾಗಿರುವ ಕೋಲ್ಕತಾ ಪೊಲೀಸರಿಂದ ನನಗೆ ಅಭದ್ರತೆ ಕಾಡುತ್ತಿದೆ. ಅವರನ್ನು ಇಲ್ಲಿಂದ ತೆರವು ಮಾಡುವಂತೆ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಸೂಚಿಸಿದ್ದರೂ ಪ್ರಯೋಜನ ಆಗಿಲ್ಲ ಎಂದು ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಕಿಡಿಕಾರಿದ್ದಾರೆ.
ಇತ್ತೀಚೆಗೆ ಬೋಸ್ ಮೇಲೆ ರಾಜಭವನ ಮಹಿಳಾ ಸಿಬ್ಬಂದಿಯಿಂದ ಕಾಮಚೇಷ್ಟೆ ಆರೋಪ ಕೇಳಿಬಂದಿತ್ತು. ಆಗಿನಿಂದ ರಾಜ್ಯಪಾಲರು, ‘ಕೋಲ್ಕತಾ ಪೊಲೀಸರು ರಾಜಭವನದಲ್ಲಿ ಭದ್ರತಾ ನೆಪದಲ್ಲಿ ಇದ್ದು ಗೂಢಚರ್ಯೆ ನಡೆಸುತ್ತಿದ್ದಾರೆ. ಎಲ್ಲ ಮಾಹಿತಿಯನ್ನು ಮಮತಾಗೆ ನೀಡುತ್ತಾರೆ’ ಎಂದು ಕಿಡಿಕಾರಿದ್ದರು.
ಈ ಬಗ್ಗೆ ಮತ್ತೆ ಗುರುವಾರ ಪಿಟಿಐ ಜತೆ ಮಾತನಾಡಿದ ಅವರು, ‘ನಾನು ರಾಜ್ಯ ಪೊಲೀಸರಿಗೆ ರಾಜಭವನವನ್ನು ಖಾಲಿ ಮಾಡುವಂತೆ ಆದೇಶ ನೀಡಿದ್ದರೂ ಖಾಲಿ ಮಾಡದೆ ರಾಜಭವನದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತವಾಗಿ ನಿಯೋಜಿಸಿರುವ ಪ್ರಭಾರಿ ಅಧಿಕಾರಿ ಮತ್ತು ಅವರ ತಂಡದ ಉಪಸ್ಥಿತಿಯು ನನ್ನ ವೈಯಕ್ತಿಕ ಭದ್ರತೆಗೆ ಬೆದರಿಕೆಯಾಗಿ ಪರಿಣಮಿಸಿದೆ’ ಎಂದು ಹೇಳಿದ್ದಾರೆ.
‘ಹೊರಗಿನ ಪ್ರಭಾವಿ ವ್ಯಕ್ತಿಗಳ ಒತ್ತಾಯದ ಮೇರೆಗೆ ರಾಜಭವನದಲ್ಲಿ ನಿಯೋಜಿಸಲಾದ ಸಿಬ್ಬಂದಿ ನಿರಂತರವಾಗಿ ಬೇಹುಗಾರಿಕೆ ನಡೆಸುತ್ತಿದ್ದಾರೆ. ನನ್ನ ಪ್ರತಿಯೊಂದು ಚಲನವಲನಗಳನ್ನು ಹಾಗೂ ನನ್ನ ಕೆಲಸದ ಮೇಲೂ ಕಣ್ಣಿಟ್ಟಿದ್ದಾರೆ. ಇಲ್ಲಿಯ ವಿಚಾರ ಮತ್ತು ಮಾಹಿತಿಗಳನ್ನು ಹೊರಗೆ ತಿಳಿಸುತ್ತಿರುತ್ತಾರೆ’ ಎಂದು ಬೋಸ್ ಹೇಳಿದ್ದಾರೆ.