ಸಾರಾಂಶ
ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಮಹಾರಾಷ್ಟ್ರ ಸೇರಿದಂತೆ 10 ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಪೈಕಿ ಕರ್ನಾಟಕದ ಮಾಜಿ ಸಂಸದ, ಮಾಜಿ ಸಚಿವ, ಸಿ.ಎಚ್.ವಿಜಯ್ಶಂಕರ್ ಅವರನ್ನು ಮೇಘಾಲಯಕ್ಕೆ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ.
ಶನಿವಾರ ಸಂಜೆ ಆದೇಶ ಪತ್ರ ಬಿಡುಗಡೆಯಾಗಿದೆ. ಇದರಲ್ಲಿ ತೆಲಂಗಾಣ ಹಾಗೂ ಜಾರ್ಖಂಡ್ನ ಹಾಲಿ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಅವರನ್ನು ಮಹಾರಾಷ್ಟ್ರಕ್ಕೆ ನೇಮಿಸಲಾಗಿದೆ. ಹರಿಬಾವ್ ಕಿಶನ್ ಬಾವ್ ಬಾಗಡೆ ಅವರನ್ನು ರಾಜಸ್ಥಾನಕ್ಕೆ, ಸಂತೋಷ್ ಕುಮಾರ್ ಗಂಗ್ವಾರ್ ಅವರನ್ನು ಜಾರ್ಖಂಡ್ಗೆ, ರಾಮನ್ ಡೇಕಾ ಅವರನ್ನು ಛತ್ತೀಸ್ಗಢ ರಾಜ್ಯಪಾಲರಾಗಿ, ಜಿಷ್ಣು ದೇವ್ ವರ್ಮಾ ಅವರನ್ನು ತೆಲಂಗಾಣದ ರಾಜ್ಯಪಾಲರಾಗಿ, ಓಂ ಪ್ರಕಾಶ್ ಮಾಥುರ್ ಅವರನ್ನು ಸಿಕ್ಕಿಂ ರಾಜ್ಯಪಾಲರಾಗಿ ನೇಮಿಸಲಾಗಿದೆ.
ಅಸ್ಸಾಂನ ಹಾಲಿ ರಾಜ್ಯಪಾಲರಾದ ಗುಲಾಬ್ ಚಂದ್ ಕಟಾರಿಯಾ ಅವರನ್ನು ಪಂಜಾಬ್ ರಾಜ್ಯಪಾಲರಾಗಿ, ಜೊತೆಗೆ ಚಂಡೀಗಢ ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ.
ಅಸ್ಸಾಂಗೆ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರನ್ನು ನೇಮಿಸಿದ್ದು, ಇವರಿಗೆ ಮಣಿಪುರದ ರಾಜ್ಯಪಾಲರಾಗಿಯೂ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ.
ಜೊತೆಗೆ ಕೆ.ಕೈಲಾಸನಾಥನ್ ಅವರನ್ನು ಪುದುಚೇರಿಯ ಉಪರಾಜ್ಯಪಾಲರಾಗಿ ನೇಮಕ ಮಾಡಿ ರಾಷ್ಟ್ರಪತಿ ಭವನ ಆದೇಶ ಹೊರಡಿಸಿದೆ.
ಸಿ.ಎಚ್.ವಿಜಯ್ಶಂಕರ್:
ರಾಣೇಬೆನ್ನೂರು ಮೂಲದವರಾದ ವಿಜಯ್ಶಂಕರ್ ಅವರು 1994ರಲ್ಲಿ ಮೊದಲ ಬಾರಿಗೆ ಹುಣಸೂರು ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿ, 1998 ಹಾಗೂ 2004ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾದರು. ಇವರು 2010ರಲ್ಲಿ ಕರ್ನಾಟಕದ ಕ್ಯಾಬಿನೆಟ್ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.