ಸಾರಾಂಶ
ತೆಹರಾನ್: ಇರಾನ್ನ ಸರ್ವೋಚ್ಚ ನಾಯಕ ಅಯೋತುಲ್ಲಾ ಅಲಿ ಖಮೇನಿ ಸೋಮವಾರ ಭಾರತ, ಗಾಜಾ ಮತ್ತು ಮ್ಯಾನ್ಮಾರ್ನಲ್ಲಿರುವ ಮುಸ್ಲಿಮರು ಸಂಕಟ ಪಡುತ್ತಿದ್ದಾರೆ ಎಂದು ಆರೋಪಿಸಿದ್ದು, ಮುಸ್ಲಿಮರ ಒಗ್ಗಟ್ಟಿಗೆ ಕರೆ ನೀಡಿದ್ದಾರೆ.
ಈದ್ ಮಿಲಾದ್ ಹಬ್ಬದಂದು ಟ್ವೀಟ್ ಮಾಡಿರುವ ಅವರು, ಮ್ಯಾನ್ಮಾರ್, ಗಾಜಾ, ಭಾರತ ಅಥವಾ ಇನ್ನಾವುದೇ ಸ್ಥಳದಲ್ಲಿ ಮುಸ್ಲಿಂ ಅನುಭವಿಸುತ್ತಿರುವ ನೋವನ್ನು ನಾವು ನಿರ್ಲಕ್ಷಿಸಿದರೆ ನಾವು ನಮ್ಮನ್ನು ಮುಸ್ಲಿಮರು ಎಂದು ಪರಿಗಣಿಸಲಾಗದು ಎಂದು ಹೇಳಿದ್ದಾರೆ.
‘ "ಇಸ್ಲಾಮಿನ ಶತ್ರುಗಳು ಯಾವಾಗಲೂ ನಮ್ಮನ್ನು ಅಸಡ್ಡೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇಸ್ಲಾಮಿಕ್ ಗೌರವವನ್ನು ಏಕತೆಯ ಮೂಲಕ ಮಾತ್ರ ಸಾಕಾರಗೊಳ್ಳಬಹುದು. ಇಂದು, ಗಾಜಾ ಮತ್ತು ಪ್ಯಾಲೆಸ್ತೀನ್ನ ತುಳಿತಕ್ಕೊಳಗಾದ ಜನರನ್ನು ಬೆಂಬಲಿಸುವುದು ಖಂಡಿತವಾಗಿಯೂ ನಮ್ಮ ಕರ್ತವ್ಯವಾಗಿದೆ. ಈ ಕರ್ತವ್ಯವನ್ನು ನಿರ್ಲಕ್ಷಿಸಿದರೆ ದೇವರು ಪ್ರಶ್ನಿಸುತ್ತಾನೆ’ ಎಂದರು.
ಭಾರತ ತಿರುಗೇಟು
ಭಾರತದಲ್ಲಿ ಮುಸ್ಲಿಮರ ಸ್ಥಿತಿ ಬಗ್ಗೆ, ಸ್ನೇಹಿತ ದೇಶವಾದ ಇರಾನ್ ನಾಯಕ ಖಮೇನಿ ಮಾಡಿರುವ ಹೇಳಿಕೆಗೆ ಭಾರತ ಸೋಮವಾರ ತೀವ್ರ ಖಂಡನೆ ವ್ಯಕ್ತಪಡಿಸಿದೆ. ‘ತಪ್ಪು ಮಾಹಿತಿ ಇದಾಗಿದ್ದು, ಸ್ವೀಕಾರಾರ್ಹವಲ್ಲ. ಅನ್ಯ ದೇಶಗಳ ಅಲ್ಪಸಂಖ್ಯಾತರ ಬಗ್ಗೆ ಮಾತನಾಡುವ ದೇಶಗಳು ಮೊದಲು ತಮ್ಮ ದೇಶದಲ್ಲಿನ ಅವರ ಸ್ಥಿತಿಯತ್ತ ಗಮನಹರಿಸಲಿ’ ಎಂದಿದೆ.