ಐತಿಹಾಸಿಕ ವಕ್ಫ್ ತಿದ್ದುಪಡಿ ಮಸೂದೆಗೆ ಲೋಕಸಭೆ ಅಂಗೀಕಾರ : ತಡರಾತ್ರಿ 2 ಗಂಟೆಗೆ ಅನುಮೋದನೆ

| N/A | Published : Apr 03 2025, 02:49 AM IST / Updated: Apr 03 2025, 06:51 AM IST

ಸಾರಾಂಶ

ಮುಸ್ಲಿಂ ಸಮುದಾಯದಲ್ಲಿನ ಎಲ್ಲಾ ವರ್ಗಗಳಿಗೂ ಮಂಡಳಿಯಲ್ಲಿ ಅವಕಾಶ ಕೊಡುವ ಐತಿಹಾಸಿಕ ವಕ್ಫ್‌ ತಿದ್ದುಪಡಿ ಮಸೂದೆಗೆ ಲೋಕಸಭೆ ಬುಧವಾರ ತಡರಾತ್ರಿ 2 ಗಂಟೆಗೆ ಅನುಮೋದನೆ ನೀಡಿದೆ.

ನವದೆಹಲಿ: ಭಾರತೀಯ ಸೇನೆ, ರೈಲ್ವೆ ಹೊರತುಪಡಿಸಿದರೆ ದೇಶದಲ್ಲೇ ಅತಿ ಹೆಚ್ಚು ಭೂಮಿಯ ಮಾಲೀಕತ್ವ ಹೊಂದಿರುವ ವಕ್ಫ್‌ ಮಂಡಳಿಯ ಆಡಳಿತದಲ್ಲಿ ಪಾರದರ್ಶಕತೆ ತರುವ, ಮಂಡಳಿಯ ಪರಮಾಧಿಕಾರ ಕಟ್‌ ಮಾಡುವ, ಮಹಿಳೆಯರಿಗೆ ಮತ್ತು ಮುಸ್ಲಿಂ ಸಮುದಾಯದಲ್ಲಿನ ಎಲ್ಲಾ ವರ್ಗಗಳಿಗೂ ಮಂಡಳಿಯಲ್ಲಿ ಅವಕಾಶ ಕೊಡುವ ಐತಿಹಾಸಿಕ ವಕ್ಫ್‌ ತಿದ್ದುಪಡಿ ಮಸೂದೆಗೆ ಲೋಕಸಭೆ ಬುಧವಾರ ತಡರಾತ್ರಿ 2 ಗಂಟೆಗೆ ಅನುಮೋದನೆ ನೀಡಿದೆ.

ಮಧ್ಯಾಹ್ನ 12 ಗಂಟೆಗೆ ಸಂಸದೀಯ ಖಾತೆ ಸಚಿವ ಕಿರಣ್‌ ರಿಜಿಜು ಅವರಿಂದ ಮಂಡಿಸಲ್ಪಟ್ಟ ಮಸೂದೆಗೆ ‘ಯುನಿಫೈಡ್‌ ವಕ್ಫ್ ಮ್ಯಾನೇಜ್‌ಮೆಂಟ್‌ ಎಂಪವರ್‌ ಮೆಂಟ್‌ ಎಫೀಶಿಯನ್ಸಿ ಬಿಲ್‌’ (ಉಮ್ಮೀದ್‌) ಎಂದು ಮರುನಾಮಕರಣ ಮಾಡಲಾಯಿತು. ಸುಮಾರು 12 ಗಂಟೆಯ ಚರ್ಚೆ ಬಳಿಕ 2 ತಾಸು ಕಾಲ ಮತದಾನ ನಡೆದು ರಾತ್ರಿ 2ರ ಸುಮಾರಿಗೆ ಮಸೂದೆಗೆ ಸದನ ಅಸ್ತು ಎಂದಿತು. 

ಆಡಳಿತ-ವಿಪಕ್ಷ ವಾಕ್ಸಮರ:

ಇದಕ್ಕೂ ಮುನ್ನ ದಿನವಿಡೀ ನಡೆದ ಚರ್ಚೆ ವೇಳೆ ಇಂಡಿಯಾ ಮೈತ್ರಿಕೂಟದ ಸದಸ್ಯರು ವಿಧೇಯಕವನ್ನು ಬಲವಾಗಿ ವಿರೋಧಿಸಿ ಇದು ಮುಸ್ಲಿಮರ ಹಕ್ಕುಗಳ ಮೊಟಕು ಮಾಡುವ ಯತ್ನ ಎಂದು ಆರೋಪಿಸಿದರೆ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ಎನ್‌ಡಿಎ ಮೈತ್ರಿಕೂಟದ ಸದಸ್ಯರು ವಿಧೇಯಕವನ್ನು ಬಲವಾಗಿ ಸಮರ್ಥಿಸಿಕೊಂಡರು.

ಲೋಕಸಭೆಯಲ್ಲಿ ಮಸೂದೆ ಮಂಡಿಸಿ ಮಾತನಾಡಿದ ಸಂಸದೀಯ ಖಾತೆ ಸಚಿವ ಕಿರಣ್‌ ರಿಜಿಜು, ‘ಇದು ಯಾವುದೇ ಧರ್ಮದ ವಿರೋಧಿಯೂ ಅಲ್ಲ, ಯಾರ ಆಸ್ತಿಯನ್ನು ಕಿತ್ತುಕೊಳ್ಳುವುದೂ ಇಲ್ಲ. ಒಂದು ವೇಳೆ ಈ ಕಾಯ್ದೆಗೆ ತಿದ್ದುಪಡಿ ಮಾಡದೆ ಹೋದರೆ ಮುಂದೆ ಸಂಸತ್‌ ಕಟ್ಟಡವನ್ನೂ ವಕ್ಫ್ ತನ್ನದೆಂದು ಹೇಳಿಕೊಳ್ಳಬಹುದು ಎಂದು ಹೇಳಿದರು.

ಮಸೂದೆ ವಿರೋಧಿಸಿ ಮಾತನಾಡಿದ ಲೋಕಸಭೆಯಲ್ಲಿನ ಕಾಂಗ್ರೆಸ್‌ನ ಉಪನಾಯಕ ಗೌರವ್‌ ಗೊಗೋಯ್‌, ‘ವಕ್ಫ್‌ ಮಸೂದೆಯು ಸಂವಿಧಾನದ ಮೂಲ ರಚನೆ ಮೇಲಿನ ದಾಳಿಯಾಗಿದ್ದು, ಅದರ ನಿಬಂಧನೆಗಳನ್ನು ದುರ್ಬಲಗೊಳಿಸುವ, ಅಲ್ಪಸಂಖ್ಯಾತರ ಮಾನಹಾನಿ ಮಾಡುವ, ಅವರ ಹಕ್ಕುಗಳನ್ನು ಕಸಿಯುವ ಮತ್ತು ಭಾರತೀಯ ಸಮಾಜವನ್ನು ವಿಭಜಿಸುವ ಗುರಿ ಹೊಂದಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಎಂಐಎಂ ಪಕ್ಷದ ನಾಯಕ, ಸಂಸದ ಅಸಾದುದ್ದೀನ್‌ ಒವೈಸಿ ಮಾತನಾಡಿ ‘ಈ ಮಸೂದೆ ಮುಸ್ಲಿಮರ ಮೇಲಿನ ದಾಳಿಯಾಗಿದೆ. ಮೋದಿ ಸರ್ಕಾರವು ನನ್ನ ಸ್ವಾತಂತ್ರ್ಯದ ಮೇಲೆ ದಾಳಿ ಆರಂಭಿಸಿದೆ. ನನ್ನ ಮಸೀದಿಗಳ ಮೇಲೆ, ನನ್ನ ದರ್ಗಾಗಳನ್ನು ಗುರಿಯಾಗಿಸಿಕೊಂಡಿದೆ. ಈ ಮಸೂದೆಯು ಎಲ್ಲರಿಗೂ ಸಮಾನತೆ ನೀಡುವ ಹಕ್ಕನ್ನು ನಿರಾಕರಿಸಿದೆ. ಇದು ಅಸಾಂವಿಧಾನಿಕ’ ಎಂದು ಆಕ್ರೋಶ ವ್ಯಕ್ತಪಡಿಸಿ ಮಸೂದೆಯ ಪ್ರತಿಗಳನ್ನು ಹರಿದು ಹಾಕಿದರು.

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್ ಮಾತನಾಡಿ ಸಮಾಜದ ಧ್ರುವೀಕರಣದ ಗುರಿ ಹೊಂದಿರುವ ಈ ಮಸೂದೆಯು ದೇಶದ ಜಾತ್ಯತೀತ ಚಿತ್ರಣಕ್ಕೆ ಧಕ್ಕೆ ತಂದು, ಜಗತ್ತಿಗೆ ತಪ್ಪು ಸಂದೇಶ ರವಾನಿಸುತ್ತದೆ. ತನ್ನ ಕುಸಿಯುತ್ತಿರುವ ಮತಬ್ಯಾಂಕ್‌ ಉಳಿಸಿಕೊಳ್ಳಲು ಬಿಜೆಪಿ ಈ ಮಸೂದೆ ಮಂಡಿಸುತ್ತಿದೆ ಎಂದು ಆರೋಪಿಸಿದರು.

ಇನ್ನೊಂದೆಡೆ ಮಸೂದೆಯಲ್ಲಿರುವ ತಿದ್ದುಪಡಿಗಳು ಪಾಸ್ಮಾಂದಾ (ಹಿಂದುಳಿದ ಮುಸ್ಲಿಮರು) ಸಮುದಾಯ, ಬಡವರು ಮತ್ತು ಮಹಿಳೆಯರ ಪರವಾಗಿದೆ ಎಂದು ಕೇಂದ್ರ ಸಚಿವ, ಜೆಡಿಯುದ ಲಲನ್‌ ಸಿಂಗ್‌ ಮಸೂದೆ ಬೆಂಬಲಿಸಿದರು. ಟಿಡಿಪಿಯ ಸಂಸದ ಕೃಷ್ಣಪ್ರಸಾದ್ ತೆನೆಟ್ಟಿ ಮಾತನಾಡಿ, ವಕ್ಫ್‌ ತಿದ್ದುಪಡಿ ಮಸೂದೆಯ ನಿಯಮಗಳನ್ನು ರೂಪಿಸುವಾಗ ಮಂಡಳಿಯ ಸಂಯೋಜನೆಯಲ್ಲಿ ರಾಜ್ಯಗಳಿಗೆ ಬದಲಾವಣೆ ಮಾಡುವ ಅವಕಾಶವನ್ನು ಕೇಂದ್ರ ಸರ್ಕಾರ ಖಚಿತಪಡಿಸಬೇಕು ಎಂದು ಸಲಹೆ ನೀಡಿದರು.

ಬಳಿಕ ಮಸೂದೆ ಪರವಾಗಿ ವಿಪಕ್ಷಗಳ ಅನುಮಾನ, ಟೀಕೆಗೆ ಎಳೆಎಳೆಯಾಗಿ ತಿರುಗೇಟು ನೀಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ‘ಮತ ಬ್ಯಾಂಕ್‌ ರಾಜಕೀಯಕ್ಕಾಗಿ, ವಕ್ಫ್‌ ಮಸೂದೆಯು ಧಾರ್ಮಿಕ ವಿಷಯ ಹಾಗೂ ಆಸ್ತಿಗಳಲ್ಲಿ ಹಸ್ತಕ್ಷೇಪ ಮಾಡುತ್ತದೆ ಎಂಬ ಭಯವನ್ನು ಹಬ್ಬಿಸಲಾಗುತ್ತಿದೆ. ಈ ಮುಲಕ ಮುಸ್ಲಿಂ ಸಮುದಾಯದ ದಾರಿ ತಪ್ಪಿಸಲಾಗುತ್ತಿದೆ’ ಎಂದು ಎಂದು ಕಿಡಿಕಾರಿದರು. ಜೊತೆಗೆ ಈ ಕಾಯ್ದೆಯನ್ನು ಮುಸ್ಲಿಂ ಸಮುದಾಯ ಒಪ್ಪಲ್ಲ ಎಂಬ ಸಂಸದರೊಬ್ಬರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅಮಿತ್‌ ಶಾ, ‘ನೀವೇನು ಬೆದರಿಕೆ ಹಾಕುತ್ತಿದ್ದೀರಾ? ಇದು ಭಾರತ ಮತ್ತು ಸಂಸತ್‌ ರೂಪಿಸಿದ ಕಾನೂನು. ಇದನ್ನು ಎಲ್ಲರೂ ಪಾಲಿಸಲೇಬೇಕು’ ಎಂದು ಗುಡುಗಿದರು.

ಜೊತೆಗೆ ವಕ್ಫ್‌ ಮಂಡಳಿಯಲ್ಲಿ 12 ಮುಸ್ಲಿಮೇತರ ಸದಸ್ಯರ ಸೇರ್ಪಡೆ ಕುರಿತ ಆತಂಕದ ಬಗ್ಗೆ ಮಾತನಾಡಿದ ಶಾ, ‘ಅವರ ಕೆಲಸ ಕೇವಲ ಆಡಳಿತ ಕಾರ್ಯಗಳಿಗೆ ಸೀಮಿತವಾಗಿರುತ್ತದೆ. ಅವರು ದಾನವಾಗಿ ಬಂದ ವಕ್ಫ್‌ ಆಸ್ತಿಗಳು ಕಾನೂನಿನ ಪ್ರಕಾರ ಸರಿಯಾಗಿವೆಯೇ ಎಂಬುದನ್ನು ನೋಡಿಕೊಳ್ಳುತ್ತಾ ಅದರ ನಿರ್ವಹಣೆ ಮೇಲ್ವಿಚಾರಣೆ ಮಾಡುತ್ತಾರೆ. ಧಾರ್ಮಿಕ ಸಂಸ್ಥೆಗಳನ್ನು ನೋಡಿಕೊಳ್ಳುವವರ ಪೈಕಿ ಮುಸ್ಲಿಮೇತರರು ಇರುವುದಿಲ್ಲ ಹಾಗೂ ಅವರು ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ’ ಎಂದು ಸ್ಪಷ್ಟನೆ ನೀಡಿದರು. ಜೊತೆಗೆ ಕಾಯ್ದೆ ಪೂರ್ವಾನ್ವಯವಾಗದು ಎಂದು ಭರವಸೆ ನೀಡಿದರು.

13 ಗಂಟೆಗಳ ಸುದೀರ್ಘ ಚರ್ಚೆ, ಆಡಳಿತ- ವಿಪಕ್ಷಗಳ ವಾಕ್ಸಮರದ ಬಳಿಕ ಅಂಗೀಕಾರ

ಇದು ಮುಸ್ಲಿಮರ ನಂಬಿಕೆಯಲ್ಲಿ ಮಧ್ಯಪ್ರವೇಶ, ಹಕ್ಕು ಕಸಿವ ಯತ್ನ: ವಿಪಕ್ಷಗಳ ಟೀಕೆ

ಲೋಕಸಭೆಯಲ್ಲಿ ಮಸೂದೆಯ ಪ್ರತಿಹರಿದು ಎಂಐಎ ನಾಯಕ ಒವೈಸಿ ಆಕ್ರೋಶ

ಬಿಲ್‌ ಧರ್ಮ ವಿರೋಧಿಯಲ್ಲ, ಯಾರ ಆಸ್ತಿಯೂ ಕಸಿಯಲ್ಲ: ಸಚಿವ ರಿಜಿಜು

ಕಾಯ್ದೆ ಒಪ್ಪಲ್ಲ ಎನ್ನಬೇಡಿ, ಇದು ಸಂಸತ್‌ ರೂಪಿಸಿದ ಕಾನೂನು: ಶಾ ಎಚ್ಚರಿಕೆ

ಇಂದು ರಾಜ್ಯಸಭೆಯಲ್ಲಿ ವಿಧೇಯಕ ಮಂಡನೆ । ಇಂದೇ ಅಂಗೀಕಾರ ಸಾಧ್ಯತೆ

ವಕ್ಫ್‌ ತಿದ್ದುಪಡಿ ಕಾಯ್ದೆ ಪರ 288 ಮತ

ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ 232 ಮತ