ಭಾರತಕ್ಕೆ ಗುಡ್‌ಬೈ: ವಾಟ್ಸಾಪ್‌ ಎಚ್ಚರಿಕೆ

| Published : Apr 27 2024, 01:16 AM IST / Updated: Apr 27 2024, 05:26 AM IST

ಸಾರಾಂಶ

‘2021ರಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನವಾದ ಮಾಹಿತಿ ತಂತ್ರಜ್ಞಾನ ಕಾಯ್ದೆ ಪಾಲನೆ ಕಡ್ಡಾಯ ಮಾಡಿದರೆ ನಾವು ಭಾರತಕ್ಕೆ ವಿದಾಯ ಹೇಳಬೇಕಾಗುತ್ತದೆ’ ಎಂದು ಅಮೆರಿಕದ ಮೆಟಾ ಒಡೆತನದ ವಾಟ್ಸಾಪ್‌ ಸ್ಪಷ್ಟಪಡಿಸಿದೆ.

ನವದೆಹಲಿ: ‘2021ರಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನವಾದ ಮಾಹಿತಿ ತಂತ್ರಜ್ಞಾನ ಕಾಯ್ದೆ ಪಾಲನೆ ಕಡ್ಡಾಯ ಮಾಡಿದರೆ ನಾವು ಭಾರತಕ್ಕೆ ವಿದಾಯ ಹೇಳಬೇಕಾಗುತ್ತದೆ’ ಎಂದು ಅಮೆರಿಕದ ಮೆಟಾ ಒಡೆತನದ ವಾಟ್ಸಾಪ್‌ ಸ್ಪಷ್ಟಪಡಿಸಿದೆ. ಈ ಕುರಿತು ದೆಹಲಿ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಸಾಮಾಜಿಕ ಮಾಧ್ಯಮಗಳು ಐಟಿ ನಿಯಮ ಪಾಲನೆ ಮಾಡುತ್ತಿಲ್ಲ ಎಂಬ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ನಡೆಸುತ್ತಿದೆ. ಈ ವೇಳೆ ವಾಟ್ಸಾಪ್‌ ಪರ ವಾದ ಮಂಡಿಸಿದ ಕಂಪನಿ ವಕೀಲರು, ‘ಜನರು ವಾಟ್ಸಾಪ್‌ನ ಸಂದೇಶ ಸೇವೆ ಬಳಕೆ ಮಾಡುತ್ತಿರುವುದೇ, ವ್ಯಕ್ತಿಯೊಬ್ಬ ರವಾನಿಸಿದ ಸಂದೇಶ ಮತ್ತೊಬ್ಬನ ಮೊಬೈಲ್‌ಗೆ ತಲುಪುವವರೆಗೂ ಗೂಢಲಿಪಿಯಲ್ಲಿ ಇರುತ್ತದೆ. ಅದನ್ನು ಯಾರೂ ಓದಲು ಸಾಧ್ಯವಿಲ್ಲ ಎಂಬ ಭರವಸೆಯ ಕಾರಣ. ಆದರೆ ಇದೀಗ ಅಂಥ ಸಂದೇಶಗಳನ್ನೇ ಓದಲು ಅವಕಾಶ ಮಾಡಿಕೊಡಬೇಕು ಎಂದು ಕೇಂದ್ರ ಸರ್ಕಾರ ಕಡ್ಡಾಯ ಮಾಡಿದರೆ ನಾವು ಭಾರತ ಬಿಡುವುದು ಅನಿವಾರ್ಯವಾಗಲಿದೆ’ ಎಂದರು.

ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಪೀಠ, ವಿಶ್ವದ ಬೇರೆ ದೇಶಗಳಲ್ಲಿ ಎಲ್ಲಿಯಾದರೂ ಇಂಥ ಕಾಯ್ದೆ ಇದೆಯೇ ಎಂದು ಪ್ರಶ್ನಿಸಿತು. ಅದಕ್ಕೆ ವಾಟ್ಸಾಪ್‌ ಪರ ವಕೀಲರು ಬ್ರೆಜಿಲ್‌ನಂಥ ದೇಶಗಳಲ್ಲೂ ಈ ಕಾಯ್ದೆ ಇಲ್ಲ ಎಂದು ಮಾಹಿತಿ ನೀಡಿದರು.ಈ ವಾದ- ಪ್ರತುವಾದ ಆಲಿಸಿದ ನ್ಯಾಯಪೀಠ ಮುಂದಿನ ವಿಚಾರಣೆಯನ್ನು ಆ.15ಕ್ಕೆ ನಿಗದಿಪಡಿಸಿತು.

ಏನಿದು ಪ್ರಕರಣ?:

2021ರಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಹೊಸ ಐಟಿ ಕಾಯ್ದೆ ಅನ್ವಯ, ವಾಟ್ಸಾಪ್‌, ಟ್ವೀಟರ್‌, ಫೇಸ್‌ಬುಕ್‌, ಇನ್ಸ್ಟಾಗ್ರಾಂ ಮೊದಲಾದ ಜಾಲತಾಣಗಳು, ಸರ್ಕಾರ ಬಯಸಿದ ವೇಳೆ ನಿರ್ದಿಷ್ಟ ಸಂದೇಶ, ಫೋಟೋ ಮೊದಲ ಬಾರಿಗೆ ಸೃಷ್ಟಿಸಿದ, ರವಾನಿಸಿದ ವ್ಯಕ್ತಿ ಯಾರೆಂಬ ಮಾಹಿತಿ ಹಂಚಿಕೊಳ್ಳುವುದು ಕಡ್ಡಾಯ ಎಂದು ಸೂಚಿಸಲಾಗಿತ್ತು. 

ವಾಟ್ಸಾಪ್‌ನಲ್ಲಿ ಹರಿದಾಡುವ ಸಂದೇಶಗಳು ಕೋಮುಗಲಭೆಗೂ ಕಾರಣವಾಗುವ ಕಾರಣ ಇಂಥ ಕಾಯ್ದೆ ಅನಿವಾರ್ಯ ಎಂದು ಕೇಂದ್ರ ಸರ್ಕಾರ ಹೇಳಿತ್ತು.ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ವಾಟ್ಸಾಪ್‌, ಭಾರತದಲ್ಲಿ 40 ಕೋಟಿ ಸಕ್ರಿಯ ವಾಟ್ಸಾಪ್‌ ಬಳಕೆದಾರರಿದ್ದಾರೆ. 

ಅವರು ತಾವು ಕಳುಹಿಸುವ ಸಂದೇಶ ಎನ್‌ಕ್ರಿಪ್ಟೆಡ್‌ (ಗೂಢಲಿಪಿ) ಆಗಿರುತ್ತದೆ. ವ್ಯಕ್ತಿಯೊಬ್ಬ ಅದನ್ನು ಕಳುಹಿಸಿದ ಬಳಿಕ ಅದು ಯಾರಿಗೆ ತಲುಪಬೇಕೋ ಆತನಿಗೆ ತಲುಪುವವರೆಗೂ ಗೂಢಲಿಪಿಯಲ್ಲಿರುತ್ತದೆ. ಯಾರೂ ಅದನ್ನು ಓದಲು ಸಾಧ್ಯವಿಲ್ಲ ಎಂಬ ಭರವಸೆಯೇ ಅವರು ಈ ಪ್ರಮಾಣದಲ್ಲಿ ಬಳಸಲು ಕಾರಣ. ಆದರೆ ಇಂಥ ಸಂದೇಶವನ್ನು ನಾವು ಓದಿ ಸರ್ಕಾರ ಬಯಸಿದಾಗ ನೀಡಬೇಕು ಎಂದಾದಲ್ಲಿ ಗ್ರಾಹಕರ ಭರವಸೆಗೆ ಧಕ್ಕೆ ಉಂಟಾಗುತ್ತದೆ. ಇಂಥ ಪ್ರಯತ್ನ ಬಳಕೆದಾರನ ಖಾಸಗಿತನಕ್ಕೆ ಧಕ್ಕೆ ತರುತ್ತದೆ. ಜೊತೆಗೆ ಕೋಟ್ಯಂತರ ಜನರು ರವಾನಿಸುವ ಕೋಟ್ಯಂತರ ಸಂದೇಶಗಳ ಇಡೀ ಸರಣಿಯನ್ನೇ ನಾವು ಸಂಗ್ರಹಿಸಬೇಕಾಗುತ್ತದೆ. ಹೀಗಾಗಿ ಭಾರತದಲ್ಲಿ ನಾವು ಸಂದೇಶ ರವಾನೆಯ ಸೇವೆಯನ್ನೇ ರದ್ದುಪಡಿಸಬೇಕಾಗುತ್ತದೆ’ ಎಂದು ಕೋರ್ಟಲ್ಲಿ ವಾದ ಮಂಡಿಸಿದೆ.