ಸಾರಾಂಶ
ಹೈದರಾಬಾದ್: ತೆಲುಗು ನಟ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ-2’ ಚಿತ್ರದ ಪ್ರೀಮಿಯಂ ಪ್ರದರ್ಶನದ ವೇಳೆ ಉಂಟಾದ ನೂಕುನುಗ್ಗಲಿನಿಂದಾಗಿ ಮಹಿಳೆಯೊಬ್ಬರು ಉಸಿರುಗಟ್ಟಿ ಸಾವನ್ನಪ್ಪಿದ್ದು, ಆಕೆಯ ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬುಧವಾರ ರಾತ್ರಿ ಏರ್ಪಡಿಸಲಾಗಿದ್ದ ಚಿತ್ರ ಪ್ರದರ್ಶನದ ವೇಳೆ ಆಗಮಿಸಿದ ನಟ ಅಲ್ಲು ಅರ್ಜುನ್ರನ್ನು ನೋಡಲು ಅಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ನೆರೆದಿದ್ದು, ಕಾಲ್ತುಳಿತದಂತಹ ಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಮಹಿಳೆ ಹಾಗೂ ಆಕೆಯ ಮಗ ಚಿತ್ರಮಂದಿರದ ಒಳಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾಗ ಈ ಘಟನೆ ನಡೆದಿದೆ.
‘ನಟ ಹಾಗೂ ಚಿತ್ರತಂಡ ಆಗಮಿಸುವ ಬಗ್ಗೆ ಚಿತ್ರಮಂದಿರದ ವ್ಯವಸ್ಥಾಪಕರಿಗೆ ಮಾಹಿತಿ ಇರಲಿಲ್ಲ. ಜೊತೆಗೆ ಆ ಚಿತ್ರಮಂದಿರ ನೆರೆದಿದ್ದ ಅಷ್ಟೂ ಜನರು ಒಳಗೆ ಪ್ರವೇಶಿಸಲಾಗದಷ್ಟು ಸಣ್ಣದಿತ್ತು. ಆಗ ಉಂಟಾದ ನೂಕುನುಗ್ಗಲಿನಿಂದಾಗಿ ಮಹಿಳೆ ಹಾಗೂ ಮಗನಿಗೆ ಉಸಿರುಗಟ್ಟಿ ಪ್ರಜ್ಞಾಹೀನರಾಗಿದ್ದಾರೆ. ಕೂಡಲೇ ಇಬ್ಬರಿಗೂ ಸಿಪಿಆರ್ ಮಾಡಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮಹಿಳೆ ಸಾವನ್ನಪ್ಪಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಮಗನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನಡೆಯುತ್ತಿದೆ.
ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದು, ಘಟನೆ ಸಂಬಂಧ ಪ್ರಕರಣ ದಾಖಲಿಸಲಾಗಿದೆ.
ಅಲ್ಲು ಅರ್ಜುನ್ ಮೇಲೆ ಕೇಸು
ಕಾಲ್ತುಳಿತ ಘಟನಗೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಏಕೆಂದರೆ ಅಲ್ಲು ಅರ್ಜುನ್ ವೀಕ್ಷಿಸಲು ಜನ ನುಗ್ಗಿದಾಗ ಕಾಲ್ತುಳಿತ ನಡೆದಿತ್ತು.