ಮುಚ್ಚಿದ್ರೆ ಏನಾಗುತ್ತೆ?

- ಹೋರ್ಮಜ್‌ ಮುಚ್ಚಿದ ಬಳಿಕ ವಿಶ್ವದ ಶೇ.20 ತೈಲ, ಅನಿಲ ಪೂರೈಕೆ ವ್ಯತ್ಯಯ

- ಯುದ್ಧ ತೀವ್ರಗೊಂಡರೆ ಬಾಬ್‌, ಸೂಯೆಜ್‌ ಕಾಲುವೆ ಮೇಲೆ ಹೌತಿ ದಾಳಿ ಸಂಭವ

- ದಾಳಿ ನಡೆದರೆ ಏಷ್ಯಾದಿಂದ ಯುರೋಪ್‌ಗೆ ಸಂಪರ್ಕ ಕಲ್ಪಿಸುವ ಮಾರ್ಗ ಬಂದ್‌

- ದಾಳಿಯಿಂದ ಮಾರ್ಗ ಬದಲಾಯಿಸಿದರೆ ಹೆಚ್ಚುವರಿ 6500 ಕಿ.ಮೀ ಸಂಚರಿಸಬೇಕು


- ಇದರಿಂದ ಸಂಚಾರದ ಅವಧಿ, ವಸ್ತುಗಳ ವೆಚ್ಚ, ಸರಕಿನ ವಿಮಾ ಮೊತ್ತ ಹೆಚ್ಚಳ ಭೀತಿ

==

ದುಬೈ: ಲೆಬನಾನ್‌ನ ಹಿಜ್ಬುಲ್ಲಾ ಉಗ್ರರ ಬಳಿಕ ಇದೀಗ ಯೆಮೆನ್‌ನ ಹೌತಿ ಉಗ್ರರು ಕೂಡ ಇರಾನ್‌ ಸಂಘರ್ಷಕ್ಕೆ ಧುಮುಕಿದ್ದಾರೆ ಹಾಗೂ ಇರಾನ್‌ ಬೆಂಬಲಿಸಿ ಇಸ್ರೇಲ್‌ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದಾರೆ. ಫೆ.28ರಿಂದ ಆರಂಭವಾದ ಮಧ್ಯಪ್ರಾಚ್ಯ ಸಂಘರ್ಷಕ್ಕೆ ಹೌತಿಗಳು ಧಮುಕುತ್ತಿರುವುದು ಇದೇ ಮೊದಲು. ಆದರೆ ಈ ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ ಎಂದು ಇಸ್ರೇಲ್‌ ಸೇನೆ ಹೇಳಿದೆ.

ಆದಾಗ್ಯೂ ಹೌತಿಗಳು ಕದನ ಕಣವನ್ನು ಪ್ರವೇಶಿಸಿರುವ ಕಾರಣ ಹೋರ್ಮುಜ್‌ ಜಲಸಂಧಿಯ ರೀತಿ ಕೆಂಪು ಸಮುದ್ರದಲ್ಲೂ ವಾಣಿಜ್ಯ ಹಡಗುಗಳ ಸಂಚಾರ ಅಸ್ತವ್ಯಸ್ತಗೊಳ್ಳುವ ಆತಂಕ ಶುರುವಾಗಿದೆ. ಏಕೆಂದರೆ ಕೆಂಪು ಸಮುದ್ರದಲ್ಲಿ ಬಾಬ್‌ ಅಲ್‌ ಮಂಡೆಬ್‌ ಎಂಬ ಜಲಸಂಧಿ ಹಾಗೂ ಸೂಯೆಜ್‌ ಕಾಲುವೆ ಇವೆ. ಹೌತಿಗಳ ಕಾರ್ಯಸ್ಥಾನವೇ ಕೆಂಪು ಸಮುದ್ರ ಆಗಿರುವ ಕಾರಣ, ಇಲ್ಲಿ ಕದನ ಆರಂಭವಾದರೆ ಈ ಎರಡೂ ಜಲಮಾರ್ಗ ಬಂದ್ ಆಗುವ ಸಂಭವವಿದೆ. ಆಗ ತೈಲ ಮಾತ್ರವಲ್ಲ, ಇಡೀ ವಿಶ್ವಕ್ಕೆ ವಾಣಿಜ್ಯಿಕ ಸರಕು ಸಾಗಣೆಗೂ ಅಡ್ಡಿ ಆಗುವ ಆತಂಕವಿದೆ.ಕೆಂಪು ಸಮುದ್ರ ಏಕೆ ಮಹತ್ವದ್ದು?:

ಇರಾನ್ ಬೆಂಬಲಿತ ಹೌತಿಗಳು ಇಸ್ರೇಲ್-ಹಮಾಸ್ ಯುದ್ಧದ ಸಮಯದಲ್ಲಿ ಕೆಂಪು ಸಮುದ್ರದ ಕಾರಿಡಾರ್‌ನಲ್ಲಿ ವಾಣಿಜ್ಯ ಸರಕು ಸಾಗಣೆಯನ್ನು ಗುರಿಯಾಗಿಸಿ ಪದೇ ಪದೇ ದಾಳಿ ನಡೆಸುತ್ತಿದ್ದರು. ನವೆಂಬರ್‌ 2023ರಿಂದ ಜನವರಿ 2025ರ ವರೆಗೆ ಹೌತಿ ಉಗ್ರರು ಸುಮಾರು 100ಕ್ಕೂ ಹೆಚ್ಚು ವಾಣಿಜ್ಯ ಹಡಗುಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್‌ ಹಾರಿಬಿಟ್ಟು 2 ಹಡಗು ನಾಶ ಮಾಡಿದ್ದರು. ಆದರೆ ಇತ್ತೀಚೆಗೆ ತಣ್ಣಗಾಗಿದ್ದರು.

ಇರಾನ್‌ ಯುದ್ಧದ ಮೊದಲು ವಾರ್ಷಿಕವಾಗಿ ವಾರ್ಷಿಕ ಸುಮಾರು 1 ಲಕ್ಷ ಕೋಟಿ ಡಾಲರ್‌ ಮೌಲ್ಯದ ಸರಕುಗಳು ಕೆಂಪು ಸಮುದ್ರದ ಮೂಲಕ ಹಾದು ಹೋಗುತ್ತಿದ್ದವು. ಕೆಂಪು ಸಮುದ್ರದ ಹಡಗು ಮಾರ್ಗಗಳ ಮೇಲಿನ ಯಾವುದೇ ದಾಳಿಗಳು ಸೂಯೆಜ್ ಕಾಲುವೆ ಹಾಗೂ ಅಲ್‌ ಮಂಡೆಬ್‌ ಜಲಸಂಧಿಯ ಮುಖಾಂತರದ ಸಂಚಾರವನ್ನು ಅಡ್ಡಿಪಡಿಸುತ್ತವೆ.

ಇದು ಮೆಡಿಟರೇನಿಯನ್ ಸಮುದ್ರಕ್ಕೆ ತೈಲ, ಅನಿಲ ಮತ್ತು ವಿವಿಧ ಸರಕುಗಳನ್ನು ಸಾಗಿಸುವ ಹಡಗುಗಳಿಗೆ ನಿರ್ಣಾಯಕ ಜಲಮಾರ್ಗವಾಗಿದೆ. ಪ್ರತಿ ವರ್ಷ ಜಾಗತಿಕ ಕಡಲ ವ್ಯಾಪಾರದ ಸುಮಾರು ಶೇ.10ರಷ್ಟು (ಕಂಟೇನರ್ ಹಡಗು ಸಂಚಾರದ ಶೇ.40 ಸೇರಿದಂತೆ) ಈ ಕಾಲುವೆಯ ಮೂಲಕ ನಡೆಯುತ್ತದೆ. ಒಂದು ವೇಳೆ ಹೌತಿ ಉಗ್ರರ ದಾಳಿ ತಪ್ಪಿಸಿಕೊಳ್ಳಲು ಸರಕು ಹಡಗುಗಳು ದಕ್ಷಿಣ ಆಫ್ರಿಕಾದ ‘ಕೇಪ್‌ ಆಫ್ ಗುಡ್ ಹೋಪ್’ ಮಾರ್ಗ ಆಯ್ದುಕೊಂಡರೆ ಹಡಗುಗಳು ಹೆಚ್ಚುವರಿ 6500 ಕಿ.ಮೀ ಸಂಚರಿಸಬೇಕು. ಇದರಿಂದ ಸಂಚಾರದ ಅವಧಿ ಹೆಚ್ಚುತ್ತದೆ. ಪರಿಣಾಮ ವೆಚ್ಚ ಹೆಚ್ಚುತ್ತದೆ. ಉತ್ಪನ್ನಗಳ ದರ ಏರುತ್ತದೆ. ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ. ಒಟ್ಟಾರೆ ಜಾಗತಿಕ ಮಟ್ಟದಲ್ಲಿ ಕಚ್ಚಾತೈಲ, ಅನಿಲ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಭಾರೀ ವ್ಯತ್ಯಯವಾಗುತ್ತದೆ.

ಮೊದಲ ಬಾರಿ ಹೌತಿ ದಾಳಿ:

ಶುಕ್ರವಾರವಷ್ಟೇ ಹೌತಿ ಬಂಡುಕೋರರ ವಕ್ತಾರ ಬ್ರಿಗೇಡಿಯರ್‌ ಜನರಲ್‌ ಯೆಹ್ಯಾ ಸರೀ ಇಸ್ರೇಲ್‌ ಮೇಲೆ ದಾಳಿ ನಡೆಸುವ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಇಸ್ರೇಲ್‌ ಮೇಲೆ ದಾಳಿ ನಡೆಸಲಾಗಿದೆ. ದಕ್ಷಿಣ ಇಸ್ರೇಲ್‌ನ ಸೂಕ್ಷ್ಮ ಸೈನಿಕ ನೆಲೆಗಳ ಮೇಲೆ ಸಾಲು ಸಾಲು ಬ್ಯಾಲಿಸ್ಟಿಕ್‌ ಕ್ಷಿಪಣಿಗಳನ್ನು ಹಾರಿಸಲಾಗಿದೆ ಎಂದು ಸರೇ ಹೇಳಿದ್ದಾರೆ.