ಅದ್ದೂರಿಯಿಂದ ಆರಂಭವಾಗಬೇಕಿದ್ದ ಜಾತ್ರೆಯ ರಥ ರಸ್ತೆ ಮಧ್ಯದಲ್ಲೇ ಅನಾಥವಾಗಿ ನಿಲ್ಲುವಂತಾಗಿದೆ. ಜೊತೆಗೆ ಮತ್ತೊಂದು ಸಮುದಾಯ ದೇವಾಲಯದ ಪೂಜಾ ವಿಧಿ ವಿಧಾನಗಳನ್ನು ಸ್ಥಗಿತಗೊಳಿಸಿ ದೇವಾಲಯಕ್ಕೆ ಬೀಗ ಜಡಿದಿದ್ದಾರೆ

ಕನ್ನಡಪ್ರಭ ವಾರ್ತೆ ನಂಜನಗೂಡು ತಾಲೂಕಿನ ಹಗಿನವಾಳು ಗ್ರಾಮದ ದೇವಾಲಯದ ಬಳಿ ಫೋಕಸ್ ಲೈಟ್ ಮೇಲೆ ಬಸವೇಶ್ವರರ ಬಾವುಟ ಅಳವಡಿಸಿದ ವಿಚಾರದಲ್ಲಿ ಗ್ರಾಮದ ಎರಡು ಸಮುದಾಯಗಳ ನಡುವೆ ಉಂಟಾದ ವಿವಾದದಿಂದಾಗಿ ಗ್ರಾಮ ದೇವತೆ ಪಟ್ಟದಮ್ಮ ರಾಣಿ ಜಾತ್ರೆ ಸ್ಥಗಿತಗೊಂಡು ರಥವು ಬೀದಿಯಲ್ಲಿ ನಿಂತಿರುವ ಘಟನೆ ಜರುಗಿದೆ.ತಾಲೂಕಿನ ಹಗಿನವಾಳು ಗ್ರಾಮದಲ್ಲಿ ಶುಕ್ರವಾರ ರಾತ್ರಿ ಗ್ರಾಮದೇವತೆ ಪಟ್ಟದಮ್ಮ ರಾಣಿ ದೇವತೆ ಜಾತ್ರೆಯನ್ನು ನಡೆಸಲು ಸರ್ವ ಸಿದ್ದತೆಗಳು ನಡೆಸಲಾಗಿತ್ತು, ದೇವಾಲಯದ ಪಕ್ಕದಲ್ಲಿರುವ ಫೋಕಸ್ ಲೈಟ್ ಮೇಲೆ ಅಳವಡಿಸಲಾಗಿರುವ ಬಸವೇಶ್ವರರ ಬಾವುಟ ತೆಗೆಯುವ ವಿಚಾರದಲ್ಲಿ ಎರಡು ಸಮುದಾಯದ ನಡುವೆ ಉಂಟಾದ ಮಾತಿನ ಚಕಮಕಿ ಜಾತ್ರೆ ಸ್ಥಗಿತವಾಗುವಂತೆ ಮಾಡಿದೆ, ಒಂದು ಸಮುದಾಯದವರು ಬಾವುಟವನ್ನು ತೆರವುಗೊಳಿಸುವಂತೆ ಪಟ್ಟು ಹಿಡಿದರು, ಆದರೆ ಇನ್ನೊಂದು ಗುಂಪು ಬಾವುಟ ತೆರವುಗೊಳಿಸಲು ವಿರೋಧಿಸಿತು. ಈ ವೇಳೆ ಬಾವುಟದ ಬಳಿ ಅಂಬೇಡ್ಕರ್ ಭಾವಚಿತ್ರ ಅಳವಡಿಸಲು ಕೆಲವರು ಮುಂದಾದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಮಾತಿನ ಚಕಮಕಿಗೆ ನಡೆಯಿತು, ಇದರಿಂದಾಗಿ ಅದ್ದೂರಿಯಿಂದ ಆರಂಭವಾಗಬೇಕಿದ್ದ ಜಾತ್ರೆಯ ರಥ ರಸ್ತೆ ಮಧ್ಯದಲ್ಲೇ ಅನಾಥವಾಗಿ ನಿಲ್ಲುವಂತಾಗಿದೆ.ಜೊತೆಗೆ ಮತ್ತೊಂದು ಸಮುದಾಯ ದೇವಾಲಯದ ಪೂಜಾ ವಿಧಿ ವಿಧಾನಗಳನ್ನು ಸ್ಥಗಿತಗೊಳಿಸಿ ದೇವಾಲಯಕ್ಕೆ ಬೀಗ ಜಡಿದಿದ್ದಾರೆ.ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಎರಡು ಸಮುದಾಯದ ಮುಖಂಡರ ಮನ ಒಲಿಕೆಗೆ ಯತ್ನಿಸಿದರಾದರೂ ಪಟ್ಟು ಸಡಿಲಿಸಲಿಲ್ಲ, ಸಧ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ, ಗ್ರಾಮದಲ್ಲಿ ಅಹಿತಕರ ಘಟನೆ ನಡೆಯದಂತೆ ಡಿವೈಎಸ್ಪಿ ರಘು ನೆತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದೆ.--------