ಕನ್ನಡಪ್ರಭ ವಾರ್ತೆ ಪಾಂಡವಪುರ
ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಬೇಕು ಎಂಬ ಉದ್ದೇಶದಿಂದ ಪಟ್ಟಣದಲ್ಲಿ ‘ಅಕ್ಕಕೆಫೆ’ ಆರಂಭಿಸಲಾಗಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.ಪಟ್ಟಣದ ತಾಪಂ ಆವರಣದಲ್ಲಿ ಜಿಪಂ, ತಾಪಂ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಯ ಇಲಾಖೆ ಹಾಗೂ ರಾಜ್ಯ ಗ್ರಾಮೀಣ ಬಲವರ್ಧನೆ ಸಂಸ್ಥೆ ಸಹಯೋಗದಲ್ಲಿ ನಿರ್ಮಿಸಿದ್ದ ಕಾರ್ಯಕ್ರಮದಲ್ಲಿ ‘ಅಕ್ಕಕೆಫೆ’ಯನ್ನು ಉದ್ಘಾಟಿಸಿ ಮಾತನಾಡಿದರು.ಮಹಿಳಾ ಸಬಲೀಕರಣದ ಭಾಗವಾಗಿ ಪಟ್ಟಣದಲ್ಲಿ ನೂತನವಾಗಿ ‘ಅಕ್ಕಕೆಫೆ’ ಆರಂಭಿಸಲಾಗಿದೆ. ಶಂಭೂನಹಳ್ಳಿ ಸ್ವಸಹಾಯ ಸಂಘದ ಗುಂಪಿನ 6 ಮಂದಿ ಮಹಿಳಾ ಸದಸ್ಯರು ಇದರ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದಾರೆ. ಇಂತಹ ‘ಅಕ್ಕಕೆಫೆ’ಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾಗಿದೆ ಎಂದರು.
ಮಹಿಳಾ ಸಬಲೀಕರಣ ಮಾಡಬೇಕು ಎಂಬ ಉದ್ದೇಶದಿಂದ ‘ಅಕ್ಕಕೆಫೆ’ ನಿರ್ಮಾಣ ಮಾಡಲಾಗಿದೆ. ಹಾಗೆಯೇ ನಮ್ಮ ಹಳ್ಳಿಹಳ್ಳಿಗಳಲ್ಲೂ ಸಹ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನಾವು ಬೆಳೆಯುವ ಬೆಳೆಗಳನ್ನು ಹೇಗೆ ಸ್ಥಳೀಯವಾಗಿ ಉಪಯೋಗಿಸಿಕೊಂಡು ಬಳಿಕ ಮಾರುಕಟ್ಟೆಗೆ ತರುವ ಬಗ್ಗೆ ಚಿಂತನೆ ಮಾಡಬೇಕು ಎಂದರು.ಪಾಂಡವಪುರ ಸಾವಯವ ತಾಲೂಕು ಎಂಬುದಾಗಿ ಘೋಷಣೆಯಾಗಿದೆ. ರಾಸಾಯನಿಕ ಕೃಷಿಯಿಂದ ತಿನ್ನುವ ಆಹಾರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹಾಗಾಗಿ ಎಲ್ಲರು ಸಾವಯವ ಕೃಷಿಯ ಕಡೆಗೆ ಮುಂದಾಗಬೇಕು ಎಂದರು.
ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ರಾಷ್ಟ್ರೀಯ ಜೀವನೋಪಾಯ ಅಭಿಯಾನದಡಿ ಮಹಿಳಾ ಸಬಲೀಕರಣ ಹಾಗೂ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿ ಬದುಕು ನಡೆಸಬೇಕು ಎಂಬ ಉದ್ದೇಶದಿಂದ ‘ಅಕ್ಕಕೆಫೆ’ ಆರಂಭಿಸಲಾಗಿದೆ. ಇದರಿಂದ ಹಲವು ಸ್ವಸಹಾಯ ಸಂಘಗಳ ಮಹಿಳೆಯರು ಆರ್ಥಿಕವಾಗಿ ಸಬಲೀಕರಣಗೊಂಡು ಕುಟುಂಬ ನಿರ್ವಹಣೆಗೆ ಸಹಕಾರಿಯಾಗಲಿದೆ ಎಂದರು.
ಮಂಡ್ಯ ಜಿಲ್ಲೆಯಲ್ಲಿ ‘ಅಕ್ಕನ ಮನೆ ಮೀನೂಟ’ ಎಂಬ ಕಾರ್ಯಕ್ರಮ ಆರಂಭಿಸಿ ಯಶಸ್ಸು ಕಂಡಿದ್ದೇವೆ. ಜಿಲ್ಲೆಗೆ ಬರೋಬ್ಬರು 12 ‘ಅಕ್ಕನ ಮನೆ ಮೀನೂಟ’ ಕ್ಯಾಂಟಿನ್ಗಳನ್ನು ಇಲಾಖೆ ಕಾರ್ಯುದರ್ಶಿಗಳು ಮಂಜೂರು ಮಾಡಿಕೊಟ್ಟಿದ್ದರು ಅಷ್ಟು ಸಂಖ್ಯೆಯಲ್ಲಿ ಮಂಜೂರಾದ ಏಕೈಕ ಜಿಲ್ಲೆಯಾಗಿತ್ತು. ಇದೀಗ ‘ಅಕ್ಕಕೆಫೆ’ ಆರಂಭಿಸಲಾಗಿದೆ ಎಂದರು.
ಜಿಲ್ಲೆಗೆ 3 ‘ಅಕ್ಕಕೆಫೆ’ ಮಂಜೂರಾಗಿದ್ದು, ಮೊದಲ ಹಂತದಲ್ಲಿ ಪಾಂಡವಪುರ, ಶ್ರೀರಂಗಪಟ್ಟಣ ಹಾಗೂ ಮಳವಳ್ಳಿ ತಾಲೂಕಿನಲ್ಲಿ ನಿರ್ಮಾಣ ಮಾಡಲಾಗಿದೆ. ಮೊದಲಿಗೆ ಪಾಂಡವಪುರ ತಾಲೂಕಿನಲ್ಲಿ ಪೂರ್ಣಗೊಂಡಿದ್ದ ‘ಅಕ್ಕಕೆಫೆ’ಗೆ ಚಾಲನೆ ನೀಡಲಾಗಿದೆ. ಇದಕ್ಕೆ ಸ್ಥಳೀಯ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ಅವರು ಸಾಕಷ್ಟು ಸಹಕಾರ ನೀಡಿದ್ದಾರೆ ಎಂದರು.ಶೀಘ್ರವೇ ಉಳಿದ ಎರಡು ತಾಲೂಕುಗಳಲ್ಲೂ ಚಾಲನೆ ನೀಡಲಾಗುವುದು. ಮುಂದಿನ ದಿನಗಳಲ್ಲಿ ಬಾಕಿ ಉಳಿದಿರುವ ಎಲ್ಲಾ ತಾಲೂಕುಗಳಲ್ಲೂ ‘ಅಕ್ಕಕೆಫೆ’ ಆರಂಭಿಸಲಾಗುವುದು, ಅಧಿಕಾರಿಗಳು ಸರ್ಕಾರ ಮಾರ್ಗಸೂಚಿಯ ಅನುಸಾರ ಪಾಲನೆ ಮಾಡಿದ್ದಾರೆ ಹಾಗಾಗಿ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಮಣ್ಣು, ಜಲ, ತಿನ್ನುವ ಆಹಾರ ಶುದ್ಧವಾಗಿರಬೇಕು, ನಾವು ತಿನ್ನುವ ಆಹಾರ ರಾಸಾಯನಿಕ ಮುಕ್ತವಾಗಿ ಸಾವಯವ ಆಹಾರವಾಗಿರಬೇಕು, ಪಾಂಡವಪುರ ತಾಲೂಕನ್ನು ಸಾವಯವ ತಾಲೂಕು ಎಂಬುದಾಗಿ ಘೋಷಣೆ ಮಾಡಿದ್ದು ಎಲ್ಲರು ಸಾವಯವ ಕೃಷಿಗೆ ಹೊತ್ತು ನೀಡಬೇಕು ಎಂದರು.ಈ ವೇಳೆ ತಾಪಂ ವೀಣಾ, ಜಿಪಂ ಯೋಜನಾ ನಿರ್ದೇಶಕ ಸುಂದರ್ ರಾಜ್, ಕೆಆರ್ಐಡಿಎಲ್ ಕಾರ್ಯಹಪಾಲಕ ಅಭಿಯಂತರ ಕೆ.ಸೋಮಶೇಖರ್, ಎಇಇ ಚೈತ್ರ, ಟಿಎಚ್ಒ ಡಾ.ಸಿ.ಎ.ಅರವಿಂದ್, ಪುರಸಭೆ ಮುಖ್ಯಾಧಿಕಾರಿ ಸತೀಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಮುಖಂಡರು ಹಾಜರಿದ್ದರು.