ಅಪಹರಿಸಿ ಕೂಡಿಟ್ಟಿದ್ದ ಮನೆ ಮೇಲೆ ದಾಳಿ- ನಾಲ್ವರ ರಕ್ಷಣೆ

| Published : Oct 02 2024, 01:02 AM IST

ಸಾರಾಂಶ

ಸಿಂಧನೂರು ತಾಲೂಕಿನ ಕುನ್ನಟಗಿ ಗ್ರಾಮದಲ್ಲಿ ಅಪಹರಣಕ್ಕೆ ಒಳಗಾಗಿದ್ದ ಸಂತ್ರಸ್ತರನ್ನು ಕೂಡಿ ಹಾಕಿದ್ದ ಮನೆಯ ಬಾಗಿಲು ತಳ್ಳುವ ಮೂಲಕ ಪೊಲೀಸ್ ಒಳ ನುಗುತ್ತಿರುವುದು.

ಕನ್ನಡಪ್ರಭ ವಾರ್ತೆ ಸಿಂಧನೂರು

ಮಹಾರಾಷ್ಟ್ರ ಪುಣೆ ಮೂಲದ ಏಳು ಜನರನ್ನು ಅಪಹರಿಸಿ, ಕೋಟಿಗಟ್ಟಲೇ ಹಣದ ಬೇಡಿಕೆ ಇಟ್ಟಿದ್ದ ಆರೋಪಿಗಳನ್ನು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಹಾಗೂ ಪುಣೆಯಿಂದ ಆಗಮಿಸಿದ್ದ ಪೊಲೀಸರು ಮಂಗಳವಾರ ಜಂಟಿ ಕಾರ್ಯಾಚರಣೆ ನಡೆಸಿ ಸಿನಿಮೀಯ ರೀತಿ ಮೂವರನ್ನು ಬಂಧಿಸಿದ್ದಾರೆ.

ಸೆ.29ರಂದು ಪುಣೆಯಲ್ಲಿರುವ ದೇವಸ್ಥಾನವೊಂದರಲ್ಲಿ ಪೂಜೆ ಸಲ್ಲಿಸಲು ಬಂದಿದ್ದ 7 ಜನರನ್ನು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್‌ ತಾಲೂಕಿನ ತಿಕ್ಕುಂದಿ ಗ್ರಾಮದ ರಾಮು ಅಪ್ಪರಾಜು, ದತ್ತ ಶಿವಾಜಿ, ಹರ್ಷಕ ಸುರೇಶ ಪಾಟೀಲ್ ಮತ್ತಿತರರು ಸೇರಿ ಅಪಹರಿಸಿದ್ದಾರೆ.

ಇದರಲ್ಲಿ 4 ಜನರನ್ನು ಮುಖ್ಯ ಆರೋಪಿ ರಾಮು ತನ್ನ ಪತ್ನಿಯ ಸಂಬಂಧಿಕ ವಾಸು ಎನ್ನುವವನ ಸಹಕಾರದಿಂದ ಸಿಂಧನೂರು ತಾಲೂಕಿನ ಕುನ್ನಟಗಿ ಗ್ರಾಮದ ಮನೆಯೊಂದರಲ್ಲಿ ಕೂಡಿ ಹಾಕಿದ್ದರು. ಇನ್ನು ಮೂರು ಜನರನ್ನು ಸಾಂಗ್ಲಿಗೆ ಕರೆದೊಯ್ದಿದ್ದಾರೆ ಎಂದು ಹೇಳಲಾಗಿದೆ.

ಸಂತ್ರಸ್ತರ ಕಡೆಯವರಿಗೆ ಭಾನುವಾರ ಸಂಜೆಯಿಂದ ಮೊಬೈಲ್ ಕರೆ ಮಾಡಿ ಅಪಹರಣಕ್ಕೆ ಒಳಗಾದವರನ್ನು ಬಿಡಬೇಕಾದರೆ ಪ್ರತಿಯೊಬ್ಬರಿಗೆ ತಲಾ ₹1 ಕೋಟಿ ತಂದೊಪ್ಪಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಜಾಗೃತರಾದ ಸಂತ್ರಸ್ತರ ಪಾಲಕರು ಪುಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಮೊಬೈಲ್ ಟ್ರಾಕಿಂಗ್ ಮಾಡಿ ಸ್ಥಳ (ಲೋಕೇಶನ್) ಹುಡುಕಿ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಗೆ ಅಪಹರಣ ಪ್ರಕರಣದ ಮಾಹಿತಿ ನೀಡಿದ್ದಾರೆ.

ಸರ್ಕಲ್ ಇನ್ಸ್‌ಪೆಕ್ಟರ್ ವೀರಾರೆಡ್ಡಿ ಹಾಗೂ ಗ್ರಾಮೀಣ ಪೊಲೀಸ್ ಠಾಣೆಯ ಸಬ್ಇನ್ಸ್‌ಪೆಕ್ಟರ್ ಮಹ್ಮದ್ ಇಸಾಕ್ ನೇತೃತ್ವದ ತಂಡ ಮತ್ತು ಪುಣೆ ಪೊಲೀಸರು ಕುನ್ನಟಗಿ ಗ್ರಾಮಕ್ಕೆ ಧಾವಿಸಿ ಅಪಹರಣ ಮಾಡಿ ಕೂಡಿ ಹಾಕಿದ್ದ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಆಗ ಅಪಹರಣಕಾರರು ಪಿಸ್ತೂಲ್ ತೋರಿಸಿ ಮನೆಯೊಳಗೆ ಬಂದರೆ ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಜಾಗೃತರಾದ ಪೊಲೀಸ್ ಅಧಿಕಾರಿಗಳು ಠಾಣೆಯಿಂದ ಹೆಚ್ಚುವರಿ ಸಿಬ್ಬಂದಿ ಹಾಗೂ ಆಧುನಿಕ ಶಸ್ತ್ರಾಸ್ತ್ರಗಳನ್ನು ತರಿಸಿ ಸುತ್ತುವರಿದು, ಮನೆಯೊಳಗೆ ನುಗ್ಗಿ ಆರೋಪಿತರಾದ ರಾಮು ಅಪ್ಪರಾಜು, ದತ್ತ ಶಿವಾಜಿ, ಹರ್ಷಕ ಸುರೇಶ ಪಾಟೀಲ್‌ರನ್ನು ಬಂಧಿಸಿದ್ದಾರೆ. ಇದರಿಂದ ಮೂರು ದಿನದಿಂದ ಸಾವು ಬದುಕಿನಲ್ಲಿ ಜೀವ ಹಿಡಿದುಕೊಂಡಿದ್ದ ಸಂತ್ರಸ್ತರಾದ ಸ್ಟಪನ್ ಭಜರಂಗ ಲಾಂಡೆ (23), ಶುಭಂ ಭಜರಂಗ ಲಾಂಡೆ (22), ಕೃಷ್ಣ ಗಜಾನನ ಪಾಂಡ್ರೆ (22), ಓಂಕಾರ ಗಜಾನನ ಪಾಂಡ್ರೆ (20) ಅವರನ್ನು ಆರೋಪಿಗಳಿಂದ ಬಿಡುಗಡೆಯಾಗಿದ್ದಾರೆ. ಪೊಲೀಸರ ಕಾರ್ಯಾಚರಣೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ನಡುವೆ ಅಪಹರಣಕ್ಕೊಳಗಾದ 7 ಜನರ ಸಾಂಗ್ಲಿಗೆ ಕರೆದೊಯ್ದಿದ್ದ ಮೂರು ಜನರ ಬಗ್ಗೆ ಕರ್ನಾಟಕ ಪೊಲೀಸರಿಗೆ ಲಭ್ಯವಾಗಿಲ್ಲ,