ಕನ್ನಡಪ್ರಭವಾರ್ತೆ ಹೊಸಕೋಟೆ

ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರಜಾ ಪ್ರಭುತ್ವದ ಪರಿಕಲ್ಪನೆಗೆ ಹಾಗೂ ಮಹಿಳಾ ಸಭಲೀಕರಣ ಜಾರಿಗೆ ಮುಂದಾಗಿದ್ದೇ ಜಗಜ್ಯೋತಿ ಬಸವಣ್ಣನವರು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ನಗರದ ತಾಲೂಕು ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಜಗಜ್ಯೋತಿ ಬಸವಣ್ಣನವರ ಬಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ಸಮರ್ಪಿಸಿ ಮಾತನಾಡಿದ ಅವರು ಸಾಮಾಜಿಕ ನ್ಯಾಯದ ಹರಿಕಾರ, ಸಮಾನತೆಯನ್ನು ಸಾರುವ ಮೂಲಕ ಅನುಭವ ಮಂಟಪ ಸ್ಥಾಪಿಸಿ ಎಲ್ಲರೂ ಸಮಾನರು, ಮಹಿಳೆಯರಿಗೂ ಸಮಾನ ಹಕ್ಕು ಇದೆ ಎಂದು ಅಕ್ಕಮಹಾದೇವಿಯವರಿಗೆ ಅವಕಾಶ ನೀಡಿದರು. ವಚನಗಳ ಮೂಲಕ ಸಮಾಜದಲ್ಲಿನ ಮೂಢ ನಂಬಿಕೆ ತೊಡೆದು ಹಾಕಿ ಸಮಾನತೆ ಸಾರುವ ಮೂಲಕ ವಿಶ್ವದ ಮೊದಲ ಸಂವಿಧಾನ ಶಿಲ್ಪಿ ಎನಿಸಿಕೊಂಡವರು ಜಗಜ್ಯೋತಿ ಬಸವಣ್ಣನವರು ಎಂದು ಅವರು ಹೇಳಿದರು.ಕೆಲದಿನಗಳ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಆಡಳಿತ ಭವನದ ಮುಂಭಾಗ ಜಗಜ್ಯೋತಿ ಬಸವಣ್ಣನವರ ಪುತ್ಥ ಳಿಯನ್ನು ಅನೇಕ ನಾಯಕರು ಸೇರಿ ಪ್ರತಿಷ್ಟಾಪಿಸಿದರು. ರಾಜ್ಯದ ಮೊಟ್ಟ ಮೊದಲ ಜಿಲ್ಲಾಡಳಿತದ ಮುಂಭಾಗ ಸ್ಥಾಪಿಸಲಾದ ಬಸವ ಪುತ್ತಳಿ ಎಂಬ ಖ್ಯಾತಿ ಪಡೆದಿದ್ದು ಮಠಾದೀಶರು, ರಾಜಕಾರಣಿಗಳು, ಅಧಿಕಾರಿವರ್ಗ ಹಾಗೂ ಸಮುದಾಯದ ಮುಖಂಡರು ಸೇರಿ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು ಎಂದು ಸ್ಮರಿಸಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಗುರುಬಸಪ್ಪ ಮಾತನಾಡಿ ತಾಲೂಕಿನಲ್ಲಿ ನಮ್ಮ ಸಮುದಾಯಕ್ಕೆ ಸಮುದಾಯ ಭವನ ಬೇಕಿದೆ. ಕಳೆದ ವರ್ಷ ಮನವಿ ಮಾಡಲಾಗಿತ್ತು. ಈ ಬಾರಿ ಜಾಗವನ್ನು ಗುರುತಿಸಲಾಗಿದೆ. ಕೂಡಲೇ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿ ಸದ್ಯ ಗುರುತಿಸಿರುವ ಜಾಗವನ್ನು ಸಮುದಾಯಕ್ಕೆ ನೀಡಬೇಕು ಹಾಗೂ ಅದೇ ಜಾಗದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಶರತ್ ಬಚ್ಚೇಗೌಡ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಈಗಾಗಲೆ ಗುರುತಿಸಿರುವುದರಿಂದ ಸಮಸ್ಯೆ ಇಲ್ಲವಾಗಿದ್ದು ಅಧಿಕಾರಿವರ್ಗಕ್ಕೆ ಕೂಡಲೆ ಈ ಸಂಬಂಧ ಪತ್ರ ವ್ಯವಹಾರದ ಮೂಲಕ ಎಸಿ, ಡಿಸಿಗೆ ಮಾಹಿತಿ ನೀಡಿ ಸಂಪುಟ ಸಭೆಯಲ್ಲಿ ಅನುಮೋದನೆಗೆ ಕ್ರಮ ಕೈಗೊಳ್ಳುವಂತೆ ತಿಳಿಸಲಾಗುವುದು ಹಾಗೂ ಸಂಬಂಧಪಟ್ಟ ಮಂತ್ರಿಗಳ ಬಳಿ ಮಾತನಾಡುವುದಾಗಿ ತಿಳಿಸಿದರು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸೋಮಶೇಖರ್, ತಾಪಂ ಇಒ ಮುನಿಯಪ್ಪ, ನಗರಾಯುಕ್ತ ನೀಲಾ ಲೋಚನ ಪ್ರಭು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಟಿ.ಎಸ್. ರಾಜಶೇಖರ್, ತಾಲೂಕು ಉಪಾಧ್ಯಕ್ಷ ಮಧುಸುಧನ್, ಕಾರ್ಯದರ್ಶಿ ಕುಮಾರ್, ಯೋಜನಾ ಪ್ರಾಧಿಕಾರದ ನಿರ್ದೇಶಕ ಡಾ.ಎಚ್‌.ಎಂ. ಸುಬ್ಬರಾಜ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ವೈಎಸ್‌ಎಂ ಮಂಜುನಾಥ್, ನಗರಸಭೆ ಸದಸ್ಯ ಗೌತಂ, ತಾಲೂಕು ವೀರಶೈವ ಲಿಂಗಾಯತ ಸಂಘದ ಅಧಕ್ಷ ಶಿವಕುಮಾರ್, ಕಾರ್ಯದರ್ಶಿ ಪರಮೇಶ್, ಕಾರ್ತಿಕ್, ಮುಖಂಡರಾದ ದಯಾನಂದ್, ನಂದಕುಮಾರ್ ಸೇರಿ ಹಲವಾರು ಮುಖಂಡರು ಹಾಜರಿದ್ದರು.------------------


20 ಹೆಚ್‌ಎಸ್‌ಕೆ 1ಹೊಸಕೋಟೆ ತಾಲೂಕು ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಜಗಜ್ಯೋತಿ ಬಸವಣ್ಣ ನವರ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಶರತ್ ಬಚ್ಚೇಗೌಡ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಹಾಗೂ ಪುಷ್ಪ ನಮನ ಸಲ್ಲಿಸಿದರು.