ಕನ್ನಡಪ್ರಭ ವಾರ್ತೆ ಶಿವಮೊಗ್ಗ:

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಯುವಜನರ ಹೋರಾಟ ತಪ್ಪಲ್ಲ. ಅವರ ಮಧ್ಯೆ ದೇಶ ವಿರೋಧಿ ಶಕ್ತಿಗಳು ಸೇರಿವೆ. ಅದಕ್ಕೆ ಕಾಂಗ್ರೆಸ್ ರಾಜಕೀಯ ಬಣ್ಣವನ್ನು ಕೊಡುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಆರೋಪಿಸಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಕಳೆದ ಒಂದು ವಾರದಿಂದ ನೀಟ್ ವಿಚಾರಕ್ಕೆ ಪ್ರತಿಭಟನೆ ನಡೆಯುತ್ತಿದೆ. ಯುವಕರನ್ನು ತಪ್ಪು ದಾರಿಗೆ ಎಳೆಯುವ‌‌ ಕೆಲಸ ವಿಪಕ್ಷಗಳಿಂದ ಸುವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಹರಿಹಾಯ್ದರು.ಪ್ರಧಾನಿ ಮೋದಿ 11 ವರ್ಷದಲ್ಲಿ ಯುವಜನರ ಭವಿಷ್ಯ ಕಟ್ಟುವ ಕೆಲಸ ಆಗಿದೆ. ಕಾಂಗ್ರೆಸ್ ಸರ್ಕಾರ ಯಾವಾಗಲೂ ಯುವಜನರ ಭವಿಷ್ಯ ಕಟ್ಟಿಲ್ಲ. ರಾಜಕೀಯ ಮಾಡಿಕೊಂಡು ಬಂದಿರೋದೆ ಅವರ ಕೆಲಸ. ರಾಜಕೀಯ ಪ್ರೇರಿತವಾಗಿ ಕಾಂಗ್ರೆಸ್ ಹೋರಾಟ ಮಾಡುತ್ತಿದೆ. ಇದಕ್ಕೆ ದೇಶದ ಜನರೇ ಉತ್ತರ ಕೊಡುತ್ತಿದ್ದಾರೆ. ಇದು ಯಾವುದು ಕೂಡ ಮೋದಿಯವರಿಗೆ ಹೊಸದಲ್ಲ. ಗೋಧ್ರಾ ರೈಲಿಗೆ ಬೆಂಕಿ ಘಟನೆಯಿಂದ ನೀಟ್ ವಿಚಾರದವರೆಗೆ ಕಾಂಗ್ರೆಸ್ ಇದನ್ನೇ ಮಾಡಿದೆ ಯಾವ ಸಂದರ್ಭದಲ್ಲೂ ಕಾಂಗ್ರೆಸ್ ಬೆಂಬಲ ಕೊಟ್ಟಿಲ್ಲ. ಸಿಎಎ, ವಕ್ಫ್, ಇವತ್ತಿನ ಎಸ್ಐಆರ್ ಗೂ ಅವರು ಬೆಂಬಲ ಕೊಟ್ಟಿಲ್ಲ.‌ ಕಾರ್ಗಿಲ್ ಯುದ್ಧದ ವೇಳೆಯೂ ದೇಶದ ಜನರನ್ನ ಎತ್ತಿ ಕಟ್ಟಿದ್ದು, ಕಾಂಗ್ರೆಸ್ ಮೋದಿಯವರನ್ನು ಅವಹೇಳನ ಮಾಡೋ ಕೆಲಸ ಮಾಡ್ತಿದ್ದಾರೆ. ಮೋದಿಯನ್ನ ಕೆಟ್ಟದಾಗಿ ಚಿತ್ರಿಸುವ ಕೆಲಸ ದೇಶವಿರೋಧಿಗಳು ಮಾಡುತ್ತಿದ್ದಾರೆ ಎಂದು ಕಿಡಿ‌ಕಾರಿದರು.ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಶಿಕ್ಷೆಯ ಪ್ರಮಾಣ ಹೆಚ್ಚಿಸಿ ಕಾನೂನು ಬಿಗಿ ಮಾಡಲಾಗ್ತಿದೆ. ತಪ್ಪಿತಸ್ಥರಿಗೆ 1 ಕೋಟಿ ಬದಲು 10 ಕೋಟಿ ದಂಡ, 10 ವರ್ಷ ಶಿಕ್ಷೆ ವಿಧಿಸುವ ಚರ್ಚೆ ನಡೆದಿದೆ. ತಪ್ಪಿತಸ್ಥರನ್ನು ಬಂಧಿಸಿ, ಈಗಾಗಲೇ ಜೈಲಿಗೆ ಕಳಿಸಲಾಗಿದೆ. ಶಿಕ್ಷಣ ಇಲಾಖೆಯಲ್ಲಿ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳನ್ನು ಹೊರ ಹಾಕಲಾಗಿದೆ ಎಂದರು. ನೀಟ್ ವಿಚಾರಕ್ಕೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸ್ಪಷ್ಟ ತೀರ್ಮಾನ ಮಾಡಿದೆ. ನೀಟ್ ಪ್ರಶ್ನೆ ಪತ್ರಿಕೆ ಲೀಕ್ ಆದ ನಂತರ ಒಂದು ತಿಂಗಳಲ್ಲಿ ರೀ ಎಕ್ಸಾಂ ಆಯ್ತು. ಮಕ್ಕಳು ಕೂಡ ಮುಂದಿನ ಭವಿಷ್ಯದ ನಿಟ್ಟಿನಲ್ಲಿ ಸೆಟಲ್ ಆಗಿದ್ದಾರೆ. ಎಲ್ಲೆಲ್ಲಿ ಬೇಕೋ ಅಲ್ಲಿ ಅಡ್ಮಿಶನ್ ಆಗ್ತಿದ್ದಾರೆ. ಪ್ರಧಾನಿ ಮೋದಿ ಅವರು ಬಿಗಿಯಾದ ನಿಲುವು ತೆಗೆದುಕೊಂಡಿದ್ದಾರೆ. ಸೋಮವಾರ ಸಂಸತ್ ನಲ್ಲಿ ಕಾಯ್ದೆ ಕೂಡ ಮಂಡನೆ ಮಾಡ್ತಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯಾವ್ಯಾವ ರಾಜ್ಯದಲ್ಲಿ ಏನೇನು ಆಗಿದೆ. ವಿದ್ಯಾರ್ಥಿಗಳಿಗೆ ಏನು ಆಗಿದೆ ಎಂದು ಪಟ್ಟಿಯನ್ನೇ ಕೊಡಬಹುದು. ಇದು ಇವತ್ತಿನ ಹೋರಾಟ ಅಲ್ಲ. ಟೂಲ್ ಕಿಟ್ ಮಾಡಿಕೊಂಡು ಹೋರಾಟ ಮಾಡ್ತಿದ್ದಾರೆ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಕುಟುಕಿದರು.

------------

ಕೋಟ್‌...


ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಶಿವಮೊಗ್ಗದಲ್ಲಿ ಬಿಜೆಪಿ ಕಚೇರಿಗೆ ನುಗ್ಗುವ ಷಡ್ಯಂತ್ರ ಹಿಂದೆ ರಾಜ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹಾಗೂ ಹೋಮ್ ಮಿನಿಸ್ಟರ್ ಕೂಡ ಇದ್ದಾರೆ. ರಾಜಕಾರಣದಲ್ಲಿ ವಿಚಾರ ಹಂಚಿಕೊಳ್ಳೋದು ಸಹಜ. ಆದರೆ, ಕಲ್ಲು, ಮೊಟ್ಟೆಯನ್ನು ಹಿಡ್ಕೊಂಡು ಬಂದರೇ ಹೇಗೆ..?‌ ಬೆಂಗಳೂರಿನಲ್ಲಿ ಶಾಸಕ ಹರೀಶ್ ಮೇಲೆ ಮೊಟ್ಟೆ ಅಟ್ಯಾಕ್ ಮಾಡಿದರು. ಪೊಲೀಸ್ ವಾಹನದಲ್ಲಿದ್ದ ನಮ್ಮ ಸಂಸದರು, ಶಾಸಕರ ಮೇಲೆ ಹಲ್ಲೆ ಆಗಿದೆ.‌ ಲಾಠಿಯನ್ನು ತಳ್ಳಿ ಹೊಡೆಯುವ ಕೆಲಸ ಆಗಿದೆ. ಈ ರೀತಿ ಘಟನೆ ಯಾವಾಗಲೂ ರಾಜ್ಯದಲ್ಲಿ ನಡೆದಿಲ್ಲ. ಈ ರೀತಿ ದ್ವೇಷದ ರಾಜಕಾರಣ ಬಿಡಬೇಕು.

- ಬಿ.ವೈ. ರಾಘವೇಂದ್ರ, ಸಂಸದ.

-----------------------

ಪೊಟೋ: 25ಎಸ್‌ಎಂಜಿಕೆಪಿ05: ಬಿ.ವೈ.ರಾಘವೇಂದ್ರ