ಸಾರಾಂಶ
ತಹಸೀಲ್ದಾರ್ ಸಂತೋಷ್ ಕುಮಾರ್ ಅವರಿಗೆ ಮನವಿ ಕೊಟ್ಟು ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮತ್ತು ಅಪರ ಜಿಲ್ಲಾಧಿಕಾರಿ ಕನಕರೆಡ್ಡಿ ಅವರ ವರ್ಗಾವಣೆಗೆ ಒತ್ತಾಯಿಸಿದರು.
ಅರಸೀಕೆರೆ: 29 ಗ್ರಾಮ ಆಡಳಿತ ಅಧಿಕಾರಿಗಳಿಗೆ ಯಾವುದೇ ತಿಳಿವಳಿಕೆ ನೀಡದೆ ಒಂದು ವಾರ್ಷಿಕ ವೇತನ ಬಡ್ತಿಯ ದಂಡನೆ ವಿಧಿಸಿ ಆದೇಶಿಸಿರುವುದರ ವಿರುದ್ಧ ಅರಸೀಕೆರೆ ತಾಲೂಕು ಗ್ರಾಮ ಆಡಳಿತ ಅಧಿಕಾರಿಗಳು ಕೇಂದ್ರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಾನಂದ ನಾಯಕ್ ನೇತೃತ್ವದಲ್ಲಿ ತಹಸೀಲ್ದಾರ್ ಸಂತೋಷ್ ಕುಮಾರ್ ಅವರಿಗೆ ಮನವಿ ಕೊಟ್ಟು ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮತ್ತು ಅಪರ ಜಿಲ್ಲಾಧಿಕಾರಿ ಕನಕರೆಡ್ಡಿ ಅವರ ವರ್ಗಾವಣೆಗೆ ಒತ್ತಾಯಿಸಿದರು.
ರಾಜ್ಯ ಕೇಂದ್ರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಾನಂದ ನಾಯಕ ಮಾತನಾಡಿ, ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮತ್ತು ಅಪರ ಜಿಲ್ಲಾಧಿಕಾರಿ ಕನಕ ರೆಡ್ಡಿ ಅವರುಗಳು ಕಾನೂನು ಮತ್ತು ಸುತ್ತೋಲೆಗಳ ವಿರುದ್ಧವಾದ ನಡವಳಿಕೆಗಳು ಮತ್ತು ನಿಯಮ ಬಾಹಿರ ಆದೇಶಗಳನ್ನು ಮಾಡಿದ್ದು ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಂದಾಯ ಇಲಾಖೆ ಬ್ರಿಟಿಷ್ ಆಡಳಿತ ಇದ್ದಂತಿದೆ ಎಂದರು.
ದಂಡನೆಗೆ ಒಳಗಾದ ನೌಕರರು ಮನವಿ ಮಾಡಲು ಹೋದಾಗ ತಾವು ಮಾಡಿರುವ ಆದೇಶ ಸರಿ ಇದೆ ಎಂದು ಗದರಿ ಕಳುಹಿಸಿರುತ್ತಾರೆ. ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಅನ್ಯ ಕರ್ತವ್ಯ ಮತ್ತು ನಿಯೋಜನೆಗಳನ್ನು ರದ್ದುಪಡಿಸಿ ಗ್ರಾಮ ಆಡಳಿತ ಅಧಿಕಾರಿಗಳನ್ನು ಅನ್ಯ ಕರ್ತವ್ಯ ಮತ್ತು ನಿಯೋಜನೆ ಮಾಡಬಾರದೆಂದು ಕಟ್ಟುನಿಟ್ಟಿನ ಸುತ್ತೋಲೆ ಇದ್ದರೂ ಸಹ ಸುತ್ತೋಲೆಯನ್ನು ಉಲ್ಲಂಘಿಸಿ ಮನಬಂದಂತೆ ಶಿಕ್ಷಿಸುವ ರೂಪದಲ್ಲಿ ನಿಯೋಜನೆ ಮಾಡಿರುತ್ತಾರೆ ಎಂದು ಆರೋಪಿಸಿದರು. ಈ ಈರ್ವರು ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದ ಅವರು, ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಫೆ. 3ರಂದು ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಮುಷ್ಕರ ಕೈಗೊಳ್ಳುವುದಾಗಿ ಹೇಳಿದರು.
ಅರಸೀಕೆರೆ ತಾಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಕುಮಾರ್ ಕಾರ್ಯದರ್ಶಿ ಸುಮಂತ್ ಖಜಾಂಚಿ ನಂದಿನಿ ಹಾಗೂ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.