ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ರಾಜ್ಯ ಸರ್ಕಾರವನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ ತಾಲೂಕು ದಂಡಾಧಿಕಾರಿ ನವೀನ್ ಕುಮಾರ್ ಅವರನ್ನು ರಾಜ್ಯ ಸರ್ಕಾರ ಗ್ರೇಡ್ ೧ ತಹಸೀಲ್ದಾರ್ ಹುದ್ದೆಯಿಂದ ಹಿಂಪಡೆದಿದೆ ಎಂದು ಸಿಐಟಿಯು ಮುಖಂಡ ಮಂಜುನಾಥ್ ತಿಳಿಸಿದರು.ಅವರು ಪಟ್ಟಣದ ಪತ್ರಕರ್ತರ ಸಂಘದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕು ದಂಡಾಧಿಕಾರಿ ನವೀನ್ ಕುಮಾರ್ ವಿರುದ್ಧ ಸುಮಾರು ೧೩ ದಿನಗಳ ಕಾಲ ನಿರಂತರ ಅಹೋರಾತ್ರಿ ಧರಣಿ ನಡೆಸಿ ತಾಲೂಕು ದಂಡಾಧಿಕಾರಿ ಹಠಾವೋ ಚನ್ನರಾಯಪಟ್ಟಣ ತಾಲೂಕು ಜನತೆ ಬಚಾವೋ ಎಂಬ ಹೋರಾಟಕ್ಕೆ ಸರ್ಕಾರ ಮಣಿದು ತಾಲೂಕು ಕಚೇರಿಯಿಂದ ದೂರ ಸರಿಸಿದೆ. ಇತ್ತೀಚೆಗೆ ತಾಲೂಕು ಕಚೇರಿಯಲ್ಲಿ ನಡೆಯುತ್ತಿದ್ದ ದೊಡ್ಡ ಭ್ರಷ್ಟಾಚಾರಕ್ಕೆ ತಾಲೂಕಿನ ಭ್ರಷ್ಟಾಚಾರ ನಿರ್ಮೂಲನ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆಗೆ ಯಾವುದೇ ಉನ್ನತ ಮಟ್ಟದ ಅಧಿಕಾರಿಗಳಿಂದ ಪ್ರತಿಕ್ರಿಯೆ ದೊರಕಲಿಲ್ಲ. ಆ ಸಲುವಾಗಿ ಮೇ ೨೭ರಂದು ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಉಗ್ರ ಹೋರಾಟವನ್ನು ನಡೆಸಲಾಗುವುದು ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಿಳಿಯಪಡಿಸಲಾಗಿತ್ತು.
ಆ ಸಲುವಾಗಿ ಜಿಲ್ಲಾಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಲಿಖಿತ ರೂಪದಲ್ಲಿ ಮತ್ತು ಆಡಿಯೋದೊಂದಿಗೆ ರಾಜ್ಯ ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಚಿವರಿಗೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ತಾಲೂಕು ದಂಡಾಧಿಕಾರಿ ನವೀನ್ ಕುಮಾರ್ ಅವರನ್ನು ಶುಕ್ರವಾರದಂದು ಗ್ರೇಡ್೧ ತಾಲೂಕು ದಂಡಾಧಿಕಾರಿ ಹುದ್ದೆಯಿಂದ ಹಿಂಬಡ್ತಿ ಪಡೆಯಲಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಆದೇಶ ಪತ್ರವನ್ನು ಹೊರಡಿಸಿದ್ದಾರೆ. ಇದು ತಾಲೂಕಿನ ಜನತೆಗೆ ಸಂತೋಷದ ವಿಚಾರವಾಗಿದೆ.ಮುಂದಿನ ತಾಲೂಕು ದಂಡಾಧಿಕಾರಿಗಳು ಸರಿಯಾದ ರೀತಿ ಕೆಲಸ ಮಾಡಬೇಕು. ಈ ಬಗ್ಗೆ ಸರ್ಕಾರ ಉತ್ತಮ ಅಧಿಕಾರಿಯನ್ನು ನೇಮಿಸಿ ಜನರ ಕೆಲಸ ಮಾಡಲು ಸಹಕರಿಸಬೇಕು ಅದನ್ನು ಬಿಟ್ಟು ಪುನಹ ಭ್ರಷ್ಟಾಚಾರ ನಡೆಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಚಂದ್ರು ಉತ್ತೇನಹಳ್ಳಿ, ರಾಮಚಂದ್ರು, ಗುಲಸಿಂದಮಹೇಶ್, ಚಂದ್ರಹಾಸ್, ಶಂಕರ್ಬರಗೂರು, ತೇಜಸ್, ವಾಸುಕಲ್ಕೆರೆ, ಮಂಜೇಗೌಡ ಜೋಗಿಪುರ ಮತ್ತಿತರಿದ್ದರು.===
ಬಾಕ್ಸ್:..................ಅನುಕಂಪಾಧಾರಿತರನ್ನು ಬದಲಿಸಿ:ರೈತ ಸಂಘದ ತಾಲೂಕು ಅಧ್ಯಕ್ಷ ಸಿ. ಜಿ. ರವಿ ಮಾತನಾಡಿ, ತಾಲೂಕು ಕಚೇರಿಯಲ್ಲಿ ಕಳೆದ ೧೫ ವರ್ಷಗಳಿಂದ ಅನುಕಂಪದ ಆಧಾರದ ಮೇಲೆ ಕೆಲ ಹುದ್ದೆಗಳಲ್ಲಿ ಅನೇಕ ಅಧಿಕಾರಿಗಳು ಮತ್ತು ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಸಿಬ್ಬಂದಿ ಮತ್ತು ಅಧಿಕಾರಿಗಳು ಸೂಕ್ತ ವಿದ್ಯಾ ಅರ್ಹತೆ ಹೊಂದಿರುವುದಿಲ್ಲ. ವಿದ್ಯಾರ್ಹತೆ ಹೊಂದಿರುವವರು ಇನ್ನು ಕೆಳಮಟ್ಟದ ಹುದ್ದೆಯಲ್ಲೇ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಅಧಿಕಾರದ ಆಸೆಗೆ ಕೆಲ ವ್ಯಕ್ತಿಗಳು ಹಣ ನೀಡಿ ಮತ್ತು ರಾಜಕೀಯ ಬಲವನ್ನು ಉಪಯೋಗಿಸಿಕೊಂಡು ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಇದು ಎಷ್ಟರಮಟ್ಟಿಗೆ ಸರಿ. ಕೂಡಲೇ ರಾಜ್ಯ ಸರ್ಕಾರ ಮತ್ತು ಜಿಲ್ಲಾಧಿಕಾರಿಗಳು ಇಂತಹ ವ್ಯಕ್ತಿಗಳನ್ನು ಗುರುತಿಸಿ ಅಂತವರ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ ಎಂದರು.