ಕುಂದಾಪುರ: ಇಲ್ಲಿನ ಮೂಡಲಕಟ್ಟೆಯ ಅಲ್ಲೈಡ್ ಹೆಲ್ತ್ ಸೈನ್ಸಸ್, ಫಿಸಿಯೋಥೆರಪಿ ಹಾಗೂ ಪ್ಯಾರಮೆಡಿಕಲ್ ಸೈನ್ಸಸ್ ಕಾಲೇಜುಗಳ ಆಶ್ರಯದಲ್ಲಿ ವಾರ್ಷಿಕ ಕ್ರೀಡಾಕೂಟ ಆಯೋಜಿಸಲಾಯಿತು. ಈ ಕ್ರೀಡಾಕೂಟವನ್ನು ಮುಖ್ಯ ಅತಿಥಿ ರಾಷ್ಟ್ರೀಯ ಕರಾಟೆ ಕ್ರೀಡಾಪಟು ಹಾಗೂ ಆರ್. ಎಸ್. ಎಂ. ಸಂಸ್ಥೆಯ ಹಿರಿಯ ಟಾಲೆಂಟ್ ಅಕ್ವಿಜಿಷನ್ ಎಚ್. ಆರ್. ಆಗಿರುವ ಪ್ರಣವ್ ಎಲ್. ಆಚಾರ್ ಉದ್ಘಾಟಿಸಿದರು. ಇಂದಿನ ಮೊಬೈಲ್ ಯುಗದಲ್ಲಿ ದೈಹಿಕ ಚಟುವಟಿಕೆ ಅವಶ್ಯ, ಶಾಲೆಗಳಲ್ಲಿ ಕ್ರೀಡಾ ಸಮಯವನ್ನು ಕ್ರೀಡೆಗೆ ಮೀಸಲಿಡಬೇಕಾಗಿ ವಿನಂತಿಸಿದರು. ಯಶಸ್ಸು ಮತ್ತು ಸಾಧನೆ ಪಥದ ಕುರಿತು ವಿಷಯ ಹಂಚಿಕೊಂಡ ಅವರು, ಶಿಸ್ತು, ಪರಿಶ್ರಮ ಮತ್ತು ಆತ್ಮವಿಶ್ವಾಸವೇ ಯಶಸ್ಸಿನ ಮೂಲವೆಂದು ತಿಳಿಸಿದರು.ಕಾಲೇಜಿನ ಡೀನ್‌ ಡಾ. ಪ್ರೊ. ಪದ್ಮಚರಣ ಸ್ವೈನ್ ಅವರು ಕ್ರೀಡೆಯ ಮಹತ್ವವನ್ನು ವಿವರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಐ. ಎಂ. ಜೆ. ಸಂಸ್ಥೆಗಳ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ. ರಾಮಕೃಷ್ಣ ಹೆಗಡೆ ಅವರು ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಗೂ ಸಮಾನ ಆದ್ಯತೆ ನೀಡಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಪ್ರೊ. ಹೇಮಲತಾ, ಉಪಪ್ರಾಂಶುಪಾಲರಾದ ಸೌಜನ್ಯ, ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರವೀಣ ಖಾರ್ವಿ ಹಾಗೂ ಕಾರ್ಯಕ್ರಮ ಸಂಯೋಜಕರಾದ ಸುಶ್ಮಾ ಉಪಾಧ್ಯ ಅವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ತಸ್ಫಿಯಾ ಕಾರ್ಯಕ್ರಮ ನಿರೂಪಿಸಿದರು, ಸಿಂಧು ಅವರು ಸ್ವಾಗತಿಸಿದರು. ನಂದಿನಿ ವಂದಿಸಿದರು.