ನಾಟಕಗಳಿಂದ ಮನಸ್ಸು ಪರಿವರ್ತನೆ

| Published : Mar 29 2024, 12:46 AM IST

ಸಾರಾಂಶ

ರಂಗಭೂಮಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ರಂಗಭೂಮಿ ಕಲಾವಿದರ ಗೋಳು ಕೇಳುವವರೇ ಇಲ್ಲದಂತಾಗಿದೆ.

ಕನ್ನಡಪ್ರಭ ವಾರ್ತೆ ಇಳಕಲ್ಲ

ರಂಗಭೂಮಿಯ ನಾಟಕಗಳು ಸಮಾಜ ಹಾಗು ಜನರ ಮನಸ್ಸು ಪರಿವರ್ತನೆ ಮಾಡುತ್ತವೆ ಎಂದು ನಿವೃತ್ತ ಪ್ರಾಧ್ಯಾಪಕ ರಾಮನಗೌಡ ಸಂದಿಮನಿ ಹೇಳಿದರು.

ಬುಧವಾರ ಇಳಕಲ್ಲ ನಗರದ ಸ್ನೇಹರಂಗದಿಂದ ನಡೆದ ವಿಶ್ವರಂಗ ಭೂಮಿ ದಿನಾಚರಣೆ ಹಾಗೂ ಗೌರವ ಸತ್ಕಾರ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ರಂಗಭೂಮಿ ಎಂಬುದು ಒಂದು ಕುಟುಂಬದಂತೆ. ಅಲ್ಲಿ ನಾಯಕ, ಖಳನಾಯಕ, ನಾಯಕಿ ಹಾಗು ಅನೇಕ ಪಾತ್ರಗಳು ಇರುತ್ತವೆ. ಅವು ಸಮಾಜದಲ್ಲಿ ನಡೆಯುತ್ತಿರುವ ಅನೇಕ ಘಟನೆಗಳನ್ನು ನಾಟಕ ಪ್ರದರ್ಶನ ಮೂಲಕ ಜನರಿಗೆ ಹಾಗು ಸಮಾಜಕ್ಕೆ ತೋರಿಸಿ, ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದುವ ಕೆಲಸ ಮಾಡುತ್ತವೆ ಎಂದು ನುಡಿದರು.

ರಂಗಭೂಮಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ರಂಗಭೂಮಿ ಕಲಾವಿದರ ಗೋಳು ಕೇಳುವವರೇ ಇಲ್ಲದಂತಾಗಿದೆ. ಇಂದು ಚಲನಚಿತ್ರ ಮತ್ತು ಮೊಬೈಲ್‌ ಹಾವಳಿಯಿಂದ ನಾಟಕಗಳು ಅವನತಿಯಲ್ಲಿವೆ. ರಂಗಭೂಮಿ ಕಲಾವಿದರು ಜೀವನ ನಡೆಸುವುದು ದುಸ್ತರವಾಗಿದೆ. ಸರ್ಕಾರ ನಾಟಕ ಕಲೆ ಉಳಿಸಲು ಹಾಗು ಕಲಾವಿದರ ಜೀವನಮಟ್ಟ ಸುಧಾರಣೆಗೆ ಅನೇಕ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸ್ನೇಹರಂಗ ಸಂಸ್ಥೆಯ ಅಧ್ಯಕ್ಷ ಬಸವರಾಜ ಮಠದ ಮಾತನಾಡಿ, ರಂಗ ಕಲೆ ಒಂದು ಅಪರೂಪದ ಕಲೆ. ಅದು ಇಂದು ಅವನತಿಯಲ್ಲಿದೆ. ಕಾರಣ ಪ್ರತಿಯೊಬ್ಬರು ನಿಮ್ಮ ಮಕ್ಕಳಿಗೆ ರಂಗ ಕಲೆಯನ್ನು ಕಲಿಸಿ ಅದನ್ನು ಉಳಿಸಲು ಮುಂದಾಬೇಕು. ಸರ್ಕಾರ ರಂಗ ಕಲೆ ಉಳಿಸಲು ಸಹಾಯ ಮಾಡಬೇಕು ಒತ್ತಾಯಿಸಿದರು.

ಈ ವೇಳೆ ಕಲಾವಿದೆ ಸುನಂದ ಕಂದಗಲ್ಲ, ರಂಗಭೂಮಿ ನಟ, ನಿರ್ದೆಶಕ ಉಮೇಶ ಟಂಕಸಾಲಿ ಅವರನ್ನು ಸ್ನೇಹರಂಗದ ಪರವಾಗಿ ಸತ್ಕರಿಸಲಾಯಿತು. ವೇದಿಕೆಯಲ್ಲಿ ಸ್ನೇಹರಂಗದ ಹಿರಿಯ ಪ್ರೊ.ಕೆ.ವಿ.ಬನ್ನಟ್ಟು ಇದ್ದರು. ಗೋಪಿ ಕಠಾರೆ ಪ್ರಾರ್ಥಿಸಿದರು. ಶಿವಪುತ್ರ ಸಮಾಳದ ಸ್ವಾಗತಿಸಿದರು. ಚಂದ್ರು ಶಾಸ್ತ್ರಿ ವಂದಿಸಿದರು. ಪಿ.ಡಗಳಚಂದ ಕಾರ್ಯಕ್ರಮ ನಿರೂಪಿಸಿದರು.