ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಪಂಚ ಗ್ಯಾರಂಟಿಗಳಲ್ಲಿ ಅತ್ಯಂತ ಜನಪ್ರಿಯ ಯೋಜನೆಯಾದ ಗೃಹಲಕ್ಷ್ಮೀ ಯೋಜನೆ ಜಾರಿಯಾಗಿ ಮೂರು ವರ್ಷಗಳ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಜ್ಯ ಸಮಿತಿ ನಿರ್ದೇಶನದಂತೆ ತಾಲೂಕಿನ ಗೃಹಲಕ್ಷ್ಮೀಯರನ್ನು ಸನ್ಮಾನಿಸುವ ಕಾರ್ಯಕ್ಕೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯು ಗುರುವಾರದಂದು ಚಾಲನೆ ನೀಡಿತು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ೨೬ನೇ ಮಾಸಿಕ ಸಭೆಯಲ್ಲಿ ಕಸಬಾ ಹೋಬಳಿ ವ್ಯಾಪ್ತಿಯ ಆಯ್ದ ೧೫ಮಂದಿ ಗೃಹಲಕ್ಷ್ಮೀಯರನ್ನು ಸನ್ಮಾನಿಸಿ ಮತ್ತು ತಾಲೂಕು ಪಂಚಾಯಿತಿ ಆವರಣದಲ್ಲಿ ಗಿಡನೆಟ್ಟು ನೀರರೆದು ಮಾತನಾಡಿದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು, ವಕೀಲರಾದ ಎಲ್.ಪಿ. ಪ್ರಕಾಶ್‌ ಗೌಡ, ರಾಜ್ಯದ ಜನಪ್ರಿಯ ಯೋಜನೆಯಾದ ಗೃಹಲಕ್ಷ್ಮೀ ಗ್ಯಾರಂಟಿ ಯೋಜನೆ ಜಾರಿಯಾಗಿ ೩ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅನುಷ್ಠಾನ ಸಮಿತಿಯ ರಾಜಾಧ್ಯಕ್ಷರಾದ ಎಚ್. ಎಂ. ರೇವಣ್ಣನವರ ನಿರ್ದೇಶನದಂತೆ ತಾಲೂಕಿನ ೪೦ ಗ್ರಾಮಪಂಚಾಯಿತಿಗಳಲ್ಲಿ ಗಿಡನೆಟ್ಟು, ಆಯ್ದ ಅರ್ಹ ಫಲಾನುಭವಿಗಳನ್ನು ಗೌರವಿಸುವ ಕೆಲಸಕ್ಕೆ ಇಂದು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಚಾಲನೆ ನೀಡಲಾಗಿದೆ ಎಂದರು.

ಮುಂದಿನ ವಾರದಿಂದ ತಾಲೂಕಿನ ೪೦ ಗ್ರಾಮ ಪಂಚಾಯಿತಿಗಳಿಗೂ ಭೇಟಿ ನೀಡಿ ಅಭಿನಂದಿಸುವ ಕಾರ್ಯಕ್ರಮ ಅಯೋಜಿಸಲಾಗುವುದು, ಅತ್ಯಂತ ಜನಪ್ರಿಯ ಯೋಜನೆಯಾಗಿ ರಾಜ್ಯದ ಮಹಿಳೆಯರ ಸ್ವಾವಲಂಬಿ ಬದುಕಿಗೆ ನೆರವಾಗಿರುವ ಗೃಹಲಕ್ಷ್ಮೀ ಯೋಜನೆಗಾಗಿ ೮೧೧೧೧ ಫಲಾನುಭವಿಗಳು ನೋಂದಾಯಿಸಿಕೊಡು ತಿಂಗಳಿಗೆ ೧೬ ಕೋಟಿ ರು. ನಷ್ಟು ಹಣ ಪಡೆಯುತ್ತಿದ್ದಾರೆ. ಬೆಂಗಳೂರು-ಮಂಗಳೂರು ನಡುವೆ ಕೇಂದ್ರಸ್ಥಾನದಲ್ಲಿರುವ ಚನ್ನರಾಯಪಟ್ಟಣದಿಂದ ಲಕ್ಷಾಂತರ ಮಹಿಳೆಯರು ಶಕ್ತಿ ಯೋಜನೆಯ ಲಾಭ ಪಡೆದಿದ್ದಾರೆ. ಪ್ರತಿ ತಿಂಗಳು ೮.೫೩ ಲಕ್ಷ ಜನ ಸಂಚಾರ ಮಾಡುವ ಮೂಲಕ ೩ ಕೋಟಿ ರು. ನಷ್ಟು ಹಣ ಇಲಾಖೆಗೆ ಜಮೆ ಆಗಿದೆ. ಗೃಹಜ್ಯೋತಿಗೆ ೭೨ ಸಾವಿರ ನೊಂದಣಿ ಮಾಡಿಕೊಂಡು ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಅನ್ನಭಾಗ್ಯ ಯೋಜನೆ, ಯುವನಿಧಿ ಸೇರಿದಂತೆ ೫ ಗ್ಯಾರಂಟಿ ಯೋಜನೆಗಳಿಂದ ತಾಲೂಕಿಗೆ ಪ್ರತಿಮಾಹೆ ೨೫ ಕೋಟಿ ರು. ಅನುದಾನ ಸರ್ಕಾರದಿಂದ ನೇರವಾಗಿ ಫಲಾನುಭವಿಗಳಿಗೆ ದೊರೆಯುತ್ತಿದೆ. ೫ ಯೋಜನೆಗಳ ಸಾಕಾರಕ್ಕಾಗಿ ದುಡಿದ ಅಧಿಕಾರಿಗಳಿಗೆ ಇದೇ ವೇಳೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ ಅವರು ಗ್ಯಾರಂಟಿ ಯೋಜನೆಗಳು ಎಂದಿಗೂ ಸ್ಥಗಿತಗೊಳ್ಳುವುದಿಲ್ಲ, ೫ವರ್ಷಗಳು ಪೂರ್ಣ ಜಾರಿಯಲ್ಲಿರುತ್ತವೆ ಎಂದರು.

ಸಮಿತಿ ಸದಸ್ಯ ನವೀನ್ ಮಾತನಾಡಿ, ಗೃಹಲಕ್ಷ್ಮೀಯರನ್ನು ಅಭಿನಂದಿಸುವ ಕೆಲಸವನ್ನು ಮೊದಲಿಗೆ ಕಸಬಾ ಹೋಬಳಿ, ಪಟ್ಟಣ ವ್ಯಾಪ್ತಿಯಲ್ಲಿ ನಡೆಸುತ್ತಿದ್ದು, ಸರ್ಕಾರ ನೀಡುವ ಪ್ರತಿ ಮಾಹೆ ೨ ಸಾವಿರ ಹಣವನ್ನು ತಮ್ಮ ಬದುಕಿನ ಆಸರೆಗಾಗಿ, ಆರೋಗ್ಯ ಸಮಸ್ಯೆ ಸೇರಿ ಉತ್ತಮ ಕೆಲಸಕ್ಕಾಗಿ ಬಳಕೆ ಮಾಡಿಕೊಂಡವರನ್ನು ಗುರ್ತಿಸಿ ಅಭಿನಂದಿಸಲಾಗುತ್ತಿದೆ ಎಂದರು.


ಚನ್ನರಾಯಪಟ್ಟಣ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸಭೆಯಲ್ಲಿ ಕಸಬಾ ಮತ್ತು ಪಟ್ಟಣ ವ್ಯಾಪ್ತಿಯ ಅರ್ಹ ಗೃಹಲಕ್ಷ್ಮೀ ಫಲಾನುಭವಿಗಳನ್ನು ಸಮಿತಿ ಅಧ್ಯಕ್ಷ ಎಲ್.ಪಿ. ಪ್ರಕಾಶ್‌ ಗೌಡ ಮತ್ತು ಸದಸ್ಯರು ಸೇರಿ ಅಭಿನಂದಿಸಿದರು.