ಸಾರಾಂಶ
ಕನ್ನಡಪ್ರಭ ವಾರ್ತೆ ಬಂಟ್ವಾಳ
ಸ್ವಯಂ ಅನುಕೂಲಕ್ಕಾಗಿ ಒಂದು ಸಂಸ್ಥೆಯಿಂದ ಮತ್ತೊಂದು ಸಂಸ್ಥೆಗೆ ಸೇರಿಕೊಳ್ಳುವ ಈ ಕಾಲದಲ್ಲಿ ಕಳೆದ 32 ವರ್ಷ ಒಂದೇ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ, ಅಲ್ಲಿಯೇ ನಿವೃತ್ತಿ ಗೊಳ್ಳುತ್ತಿರುವುದು ಗಂಗಾಧರ ಆಳ್ವರ ಬಹುದೊಡ್ಡ ಸಾಧನೆ ಎಂದು ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.
ಅವರು ಬಂಟ್ವಾಳ ತಾಲೂಕಿನ ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ಗಂಗಾಧರ ಆಳ್ವರ ಸೇವಾ ನಿವೃತ್ತಿಯ ಬೀಳ್ಕೊಡುಗೆ ಸಮಾರಂಭ ‘ಗಂಗಾಭಿನಂದನಾ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿರುವ ಗಂಗಾಧರ ಆಳ್ವರು ವೃತ್ತಿಯಿಂದ ನಿವೃತ್ತರಾದರೂ ಪ್ರವೃತ್ತಿಯಲ್ಲಿ ಇನ್ನೂ ಹಲವಾರು ಸಾಧನೆ ಮಾಡಲಿದ್ದು ಹೆಚ್ಚಿನ ಶೇಯಸ್ಸು ಸಿಗಲಿ ಎಂದು ಶುಭ ಹಾರೈಸಿದರು.
ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ.ಎನ್. ಗಂಗಾಧರ ಆಳ್ವ, ಮನುಷ್ಯನಿಗೆ ಅಭಿಮಾನದಿಂದ ಕೊಟ್ಟ ಗೌರವ ಯಾವತ್ತೂ ಮರೆಯಲು ಸಾಧ್ಯವಿಲ್ಲ.
ಕಳೆದ 32 ವರ್ಷದ ವೃತ್ತಿಯಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ್ದೇನೆ. ನನ್ನ ಸೇವಾವಧಿಯಲ್ಲಿ ವಿವಿಧ ರೀತಿಯಲ್ಲಿ ನನಗೆ ಸಹಕಾರ ನೀಡಿದ ಸರ್ವರಿಗೂ ನಾನು ಆಭಾರಿಯಾಗಿದ್ದೇನೆ ಎಂದರು.ಬಿ.ಎ. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್ ಸಲಾಂ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಎಕ್ಸ್ಪರ್ಟ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎಲ್. ನರೇಂದ್ರ ನಾಯಕ್, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ನಿಸಾರ್ ಅಹಮದ್ ಶುಭ ಹಾರೈಸಿದರು, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಡಿ. ಜಯಣ್ಣ, ಜಿ.ಪಂ. ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ.ಎ. ಶಿಕ್ಷಣ ಸಂಸ್ಥೆಗಳ ಟ್ರಸ್ಟಿ ಬಿ.ಎಂ. ಅಶ್ರಫ್, ತುಂಬೆ ಗ್ರಾ.ಪಂ. ಅಧ್ಯಕ್ಷ ಗಣೇಶ್ ಸಾಲಿಯಾನ್,
ಜ್ಯೋತಿಷಿ ಅನಿಲ್ ಪಂಡಿತ್, ಮೋಹಿನಿ ಸುವರ್ಣ, ಜಯಾನಂದ ಸುವರ್ಣ ಉಪಸ್ಥಿತರಿದ್ದರು. ಉಪನ್ಯಾಸಕ ದಿನೇಶ್ ಶೆಟ್ಟಿ ಅಳಿಕೆ ಪ್ರಸ್ತವಿಕವಾಗಿ ಮಾತನಾಡಿದರು. ನಿಯೋಜಿತ ಪ್ರಾಂಶುಪಾಲ ವಿ. ಸುಬ್ರಹ್ಮಣ್ಯ ಭಟ್ ಸ್ವಾಗತಿಸಿದರು. ಕಚೇರಿ ಅಧಿಕ್ಷಕ ಅಬ್ದುಲ್ ಕಬೀರ್ ವಂದಿಸಿದರು. ಕವಿತಾ ದೇವದಾಸ ಅರ್ಕುಳ ಹಾಗೂ ನೀತಾಶ್ರೀ ಕಾರ್ಯಕ್ರಮ ನಿರೂಪಿಸಿದರು.