ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪಟ್ಟಣದ ವಿವೇಕಾನಂದ ಇಂಟರ್ನ್ಯಾಷನಲ್ ಸ್ಕೂಲ್ ಮತ್ತು ಭಾರತೀಯ ರೆಡ್ಕ್ರಾಸ್ ಸಂಸ್ಥೆ ತಾಲೂಕು ಘಟಕ ಮತ್ತು ಸರ್ಕಾರಿ ಆಸ್ಪತ್ರೆ ಇವರ ವತಿಯಿಂದ ಹದಿಹರೆಯದ ಹೆಣ್ಣುಮಕ್ಕಳಿಗೆ ಆರೋಗ್ಯ ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು.ಈ ಕಾರ್ಯಕ್ರಮವನ್ನು ಭಾರತೀಯ ರೆಡ್ಕ್ರಾಸ್ ಸಂಸ್ಥೆ ಅಧ್ಯಕ್ಷರಾದ ಭರತ್ ಕುಮಾರ್ ಎಚ್.ಜಿ ಹಾಗೂ ತಾಲೂಕು ಆಡಳಿತ ಅಧಿಕಾರಿ ಡಾ. ತೇಜಸ್ವಿನಿ ಹಾಗೂ ಗಣ್ಯರು ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಭರತ್ ಕುಮಾರ್, ಹೆಣ್ಣುಮಕ್ಕಳ ಆರೋಗ್ಯ ಹಾಗೂ ಹೆಣ್ಣು ಮಕ್ಕಳ ಸುರಕ್ಷತೆ ವಿಚಾರದಲ್ಲಿ ಪೋಷಕರು ಹಾಗೂ ಶಿಕ್ಷಕರು ಗಮನಹರಿಸಬೇಕು. ಕಾರಣ ವಿದ್ಯಾಭ್ಯಾಸದ ಸಂದರ್ಭದಲ್ಲಿ ಮಕ್ಕಳು ಹಲವು ವಿಚಾರದಲ್ಲಿ ಆಕರ್ಷಣೆಗೊಂಡು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಹಾಗೂ ಹಲವು ಬದಲಾವಣೆಗಳನ್ನು ಕಾಣುತ್ತಾರೆ. ಆದಕಾರಣ ಮಕ್ಕಳಿಗೆ ಒಳ್ಳೆ ವಿಚಾರವನ್ನು ಹಾಗೂ ಒಳ್ಳೆ ಸಂಸ್ಕಾರವನ್ನು ಕಲಿಸುವುದರಿಂದ ಭವಿಷ್ಯ ಉತ್ತಮವಾಗಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸರಾಗಿ ಆಗಮಿಸಿದ ಡಾ. ತೇಜಸ್ವಿರವರು ಹೆಣ್ಣು ಮಕ್ಕಳಿಗೆ ಜೀವನಶೈಲಿ ಹಾಗೂ ಹೆಣ್ಣುಮಕ್ಕಳ ಆರೋಗ್ಯದ ಬಗ್ಗೆ ವಹಿಸಬೇಕಾದ ಕ್ರಮಬದ್ಧತೆ ಹಾಗೂ ಹೆಣ್ಣುಮಕ್ಕಳು ತಮ್ಮ ಜೀವನವನ್ನು ಇನ್ನೊಂದು ಜೀವಕ್ಕೆ ಮುಡುಪಾಗಿಡುವುದು ಸಹಜ. ಆದಕಾರಣ ನಾವು ಒಳ್ಳೆ ವಿಚಾರವನ್ನು ತಿಳಿದು ನಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ನೀಡಲು ಮುಂದಾಗಬೇಕು ಎಂದು ತಿಳಿಸಿದರು.ತಾಲೂಕು ಆಸ್ಪತ್ರೆ ಆರೋಗ್ಯ ಶಿಕ್ಷಣಾಧಿಕಾರಿ ಅನಿತಾರವರು ಮಾತನಾಡಿ, ವಿದ್ಯಾರ್ಥಿಗಳಿಗೆ ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಯಾವ ರೀತಿ ಸಮಸ್ಯೆಗಳು ಎದುರಾಗುತ್ತದೆ ಮತ್ತು ಯಾವುದು ಒಳ್ಳೆಯದು ಯಾವ ವಿಷಯ ಕೆಟ್ಟದ್ದು ಹಾಗೆ ಯಾರ ಜೊತೆ ಸ್ನೇಹ ಮಾಡಬೇಕು ಯಾರನ್ನು ದೂರ ಇಡಬೇಕು. ಹೀಗೆ ಹಲವು ವಿಚಾರವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಮಹದೇವ್ ಕಾರ್ಯಕ್ರಮವನ್ನು ಕುರಿತು ಮಾತನಾಡಿ, ಈ ಕಾರ್ಯಕ್ರಮವು ಹೆಣ್ಣುಮಕ್ಕಳಿಗೆ ಅತಿ ಅವಶ್ಯಕ. ಇದನ್ನು ಅರ್ಥ ಮಾಡಿಕೊಂಡು ಹೆಣ್ಣುಮಕ್ಕಳು ತಾವು ಜಾಗೃತರಾಗಿ ಬದುಕಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಭಾರತೀಯ ಸಂಸ್ಥೆ ತಾಲೂಕು ಕಾರ್ಯದರ್ಶಿ ಜಬಿಉಲ್ಲಾ ಬೇಗ್, ಶಾಲಾ ಶಿಕ್ಷಕರು ಹಾಗೂ ಇತರರು ಭಾಗಿಯಾಗಿದ್ದರು.