ಕನ್ನಡಪ್ರಭ ವಾರ್ತೆ ಬೆಂಗಳೂರು:
ರಾಜ್ಯ ಕಾಂಗ್ರೆಸ್ ಸರ್ಕಾರ ಮುಸ್ಲಿಮರ ಆಶೋತ್ತರ ಈಡೇರಿಸಿಲ್ಲ ಎಂದು ಆರೋಪಿಸಿರುವ ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟವು, ಈ ಕುರಿತು ಸರ್ಕಾರಕ್ಕೆ ಎಚ್ಚರಿಕೆ ನೀಡಲು ಮೇ 16 ರಂದು ಬೆಂಗಳೂರಿನ ಪುರಭವನದಲ್ಲಿ ‘ಕರ್ನಾಟಕ ಮುಸ್ಲಿಂ ಸಮಾವೇಶ’ ಹಮ್ಮಿಕೊಂಡಿದೆ.ರಾಜ್ಯ ಸರ್ಕಾರ ಸಮುದಾಯಕ್ಕೆ ನೀಡಿರುವ ಹಲವು ವಾಗ್ದಾನ ಈಡೇರಿಸಿಲ್ಲ. ಹೀಗಾಗಿ ಸರ್ಕಾರದ ಕಿವಿ ಹಿಂಡಲು ‘ಕಾಂಗ್ರೆಸ್ ಸರ್ಕಾರ ಹೇಳಿದ್ದೇನು? ಮಾಡಿದ್ದೇನು? ಮುಂದೇನು?’ ಎಂಬ ಕುರಿತು ವರದಿ ಬಿಡುಗಡೆ ಮಾಡುವುದಾಗಿ ಸಮಿತಿ ಪ್ರಕಟಿಸಿದೆ.
ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಮಿತಿ ಸಂಚಾಲಕ ಸುಹೇಲ್ ಅಹ್ಮದ್ ಮರೂರ್, ‘ಕಾಂಗ್ರೆಸ್ ಸರ್ಕಾರ ಸಮುದಾಯಕ್ಕೆ ನೀಡಿದ್ದ ಹಲವು ಭರವಸೆ ಈಡೇರಿಸಿಲ್ಲ. ಹೀಗಾಗಿ ಸರ್ಕಾರದ ಕಾರ್ಯವೈಖರಿ ಜತೆಗೆ ಮುಸ್ಲಿಮರಿಗೆ ನೀಡಿದ್ದ ಭರವಸೆಗಳೆಷ್ಟು? ಈಡೇರೆಸಿದ್ದೆಷ್ಟು? ಎಂಬ ಬಗ್ಗೆ ಪ್ರಶ್ನಿಸಲಾಗುವುದು’ ಎಂದು ಹೇಳಿದರು.ಕಾಂಗ್ರೆಸ್ ವಿರುದ್ಧ ಅಸಮಾಧಾನವಿದ್ದರೆ ಯಾವ ಪಕ್ಷ ಬಂದರೆ ನಿಮಗೆ ನೆಮ್ಮದಿ? ಎಂಬ ಪ್ರಶ್ನೆಗೆ, ‘ನೆಮ್ಮದಿ ಪ್ರಶ್ನೆ ಅಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವುದು ಯಾವುದೇ ಪಕ್ಷದ ಕರ್ತವ್ಯ. ಯಾವ ಸರ್ಕಾರ ಅಧಿಕಾರದಲ್ಲಿದ್ದರೂ ಶಾಂತಿ ಸುವ್ಯವಸ್ಥೆ ಕಾಪಾಡುವುದು ಆದ್ಯತೆ’ ಎಂದರು.
ನಾವು ಯಾವುದೇ ಪಕ್ಷದ ಏಜೆಂಟರಲ್ಲ:ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸುಹೇಲ್ ಅಹ್ಮದ್, ನಾವು ಯಾವುದೇ ಪಕ್ಷದ ಏಜೆಂಟರಲ್ಲ. ನಮ್ಮ ಹಿಂದೆ ಯಾವ ಪಕ್ಷದ ಯಾವ ನಾಯಕರೂ ಇಲ್ಲ. 1 ಕೋಟಿ ಜನಸಂಖ್ಯೆ ಇರುವ ಸಮುದಾಯದಲ್ಲಿ 1,000 ಜನರನ್ನು ಸೇರಿಸಿ ಕಾರ್ಯಕ್ರಮ ಮಾಡಲು ಯಾವೊಬ್ಬ ನಾಯಕರೂ ಬೇಕಾಗಿಲ್ಲ. ಅಲ್ಲಿಗೆ ಯಾವ ರಾಜಕಾರಣಿಯನ್ನೂ ಆಹ್ವಾನಿಸಿಲ್ಲ ಎಂದು ಹೇಳಿದರು.
ವೆಲ್ಫೇರ್ ಆಫ್ ಹ್ಯುಮಾನಿಟಿ ಫೌಂಡೇಶನ್ ಅಧ್ಯಕ್ಷ ಮೌಲಾನ ಶಬ್ಬೀರ್ ಅಹ್ಮದ್ ಹುಸೇನ್ ನದ್ವಿ, ಮೌಲಾನಾ ಖಾರಿ ಝುಲ್ಫಿಖಾರ್ ರಝಾ ನೂರಿ, ಸಮಿತಿ ಸಂಚಾಲಕರಾದ ತನ್ವೀರ್ ಅಹ್ಮದ್, ಯಹ್ಯಾ ದಾಮೂದಿ ಸೇರಿ ಹಲವರು ಉಪಸ್ಥಿತರಿದ್ದರು.
ಸಚಿವ ಜಮೀರ್ ಏಕೆ ಧ್ವನಿ ಎತ್ತುತ್ತಿಲ್ಲಎಂಬುದನ್ನು ನೀವೇ ಕೇಳಿ: ಸುಹೇಲ್
ರಾಜ್ಯ ಸರ್ಕಾರದಲ್ಲಿ ಮುಸ್ಲಿಂ ಸಮುದಾಯದ ಪ್ರತಿನಿಧಿಗಳಂತಿರುವ ಸಚಿವ ಜಮೀರ್ ಅಹ್ಮದ್ ಹಾಗೂ ಇತ್ತೀಚಿನವರೆಗೂ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯಾಗಿದ್ದ ನಜೀರ್ ಅಹ್ಮದ್ ಅವರು ಸಮುದಾಯದ ಪರ ನಿಂತಿಲ್ಲವೇ ಎಂಬ ಪ್ರಶ್ನೆಗೆ, ‘ಅವರು ಯಾಕೆ ಧ್ವನಿ ಎತ್ತುತ್ತಿಲ್ಲ ಎಂಬುದನ್ನು ನೀವೇ ಕೇಳಬೇಕು’ ಎಂದಷ್ಟೇ ಸುಹೇಲ್ ಅಹ್ಮದ್ ಹೇಳಿದರು.ರಾಜ್ಯ ಸರ್ಕಾರದಲ್ಲಿ ಮುಸ್ಲಿಂ ಸಮುದಾಯ ಪ್ರತಿನಿಧಿಸುವ ಇಬ್ಬರು ಸಚಿವರಿದ್ದಾರೆ. ಅಲ್ಲದೆ, ಸಿಎಂ ರಾಜಕೀಯ ಕಾರ್ಯದರ್ಶಿಯಾಗಿದ್ದ ನಸೀರ್ ಅಹ್ಮದ್ ಇದ್ದಾರೆ. ಈ ನಾಯಕರಿದ್ದರೂ ಮುಸ್ಲಿಂ ಸಮುದಾಯದ ಆಶೋತ್ತರ ಈಡೇರಿಲ್ಲ ಎಂದರೆ, ಈ ನಾಯಕರು ತಮ್ಮ ಕೆಲಸ ಸಮರ್ಪಕವಾಗಿ ಮಾಡಿಲ್ಲ ಎಂದು ಅರ್ಥವೇ ಎಂಬ ಪ್ರಶ್ನೆಗೆ, ‘ಇದೆಲ್ಲಾ ಪ್ರಶ್ನೆಗಳಿಗೆ ವಿಸ್ತೃತವಾಗಿ ಸಮಾವೇಶದಲ್ಲಿ ಉತ್ತರ ನೀಡುತ್ತೇವೆ’ ಎಂದರು.