ಮಹದಾಯಿ ವಿಚಾರ ಕೇವಲ ರಾಜಕೀಯಕ್ಕೆ ಬಳಕೆ

| Published : Apr 20 2024, 01:01 AM IST

ಸಾರಾಂಶ

ಕೃಷ್ಣಾ ನ್ಯಾಯಾಧಿಕರಣ-2ರ ವರದಿ ಕೇಂದ್ರಕ್ಕೆ ಸಲ್ಲಿಸಿ 13 ವರ್ಷಗಳು ಕಳೆದಿವೆ. ಆದರೂ, ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಲು ಹಿಂದೇಟು ಹಾಕುತ್ತಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಉತ್ತರ ಕರ್ನಾಟಕದ ಮಹತ್ವಾಕಾಂಕ್ಷಿ ಯೋಜನೆಗಳಾದ ಮಹದಾಯಿ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಗಳನ್ನು ಕೇವಲ ರಾಜಕೀಯ ಭಾಷಣಕ್ಕೆ ಮಾತ್ರ ಬಿಜೆಪಿ ಬಳಸಿಕೊಂಡಿದೆ ಎಂದು ಸಚಿವ ಎಚ್.ಕೆ.ಪಾಟೀಲ ಆರೋಪಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣಾ ನ್ಯಾಯಾಧಿಕರಣ-2ರ ವರದಿ ಕೇಂದ್ರಕ್ಕೆ ಸಲ್ಲಿಸಿ 13 ವರ್ಷಗಳು ಕಳೆದಿವೆ. ಆದರೂ, ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಲು ಹಿಂದೇಟು ಹಾಕುತ್ತಿದೆ. ಅಧಿಸೂಚನೆ ಹೊರಡಿಸಲು ಅವರಿಗೆ ಏನು ತೊಂದರೆ ಎಂದು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡರು.

ಪ್ರಧಾನಿ ಮೋದಿ ಮಹದಾಯಿಗೆ ಸಂಬಂಧಿಸಿದಂತೆ ಮೂರೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸುವುದಾಗಿ ಹೇಳಿ ಐದು ವರ್ಷಗಳು ಕಳೆದಿವೆ. ಇನ್ನೂ ಸಭೆ ಕರೆದಿಲ್ಲ. ಕೃಷ್ಣಾ ಮತ್ತು ಮಹದಾಯಿ ವಿಷಯದಲ್ಲಿ ಬಿಜೆಪಿಗರು ಬರಿ ನ್ಯಾಯಾಲಯದ ನೆಪ ಹೇಳುವುದು ಸರಿಯಲ್ಲ. ಕಾವೇರಿ ವಿಷಯದಲ್ಲಿ ಕೈಗೊಂಡ ನಿರ್ಣಯದಂತೆ ಇಲ್ಲಿಯೂ ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ಸಚಿವರು ಆಗ್ರಹಿಸಿದರು.

ಕೃಷ್ಣಾ ಮತ್ತು ಮಹದಾಯಿ ವಿಷಯದಲ್ಲಿ ಬಿಜೆಪಿಗರು ರಾಜ್ಯದ ಜನತೆಗೆ ಅನ್ಯಾಯ ಮಾಡಿದ್ದಾರೆ. ಅವರು ಮತ ಕೇಳುವ ನೈತಿಕತೆ ಕಳೆದುಕೊಂಡಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬರೀ ಸುಳ್ಳನ್ನೇ ಹೇಳಿದ್ದಾರೆ. ಪ್ರಸಕ್ತ ಲೋಕಸಭೆ ಚುನಾವಣೆ ಭಾವನೆ ಮತ್ತು ಬದುಕಿನ ಸಂಘರ್ಷದ ಮೇಲೆ ನಡೆಯುತ್ತಿದೆ ಎಂದರು.

ಬಿಜೆಪಿ ದೇವರ ಹೆಸರಿನಲ್ಲಿ ಪ್ರಮಾದ ಮಾಡುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನಪ್ರಿಯತೆ ಪಡೆದಿವೆ. ನಮ್ಮ ಸರ್ಕಾರ ಬಡವರ ಪರ, ಜನಪರ ಕೆಲಸ ಮಾಡಿದೆ. ಇದಕ್ಕೆ ಜನ ಬೆಂಬಲ ಕೂಡ ವ್ಯಕ್ತವಾಗಿದೆ. ಹಾಗಾಗಿ ಉತ್ತರ ಕರ್ನಾಟಕದ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ 12 ಸ್ಥಾನಗಳನ್ನು ಗೆಲ್ಲುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಸಚಿವರಾದ ಶಿವಾನಂದ ಪಾಟೀಲ, ಆರ್‌.ಬಿ.ತಿಮ್ಮಾಪೂರ, ಮಾಜಿ ಸಚಿವ ಎಸ್.ಆರ್‌.ಪಾಟೀಲ, ಅಜಯಕುಮಾರ ಸರನಾಯಕ, ಶಾಸಕ ಎಚ್.ವೈ.ಮೇಟಿ, ಜೆ.ಟಿ.ಪಾಟೀಲ, ಬಿ.ಬಿ.ಚಿಮ್ಮನಕಟ್ಟಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತಾ ಪಾಟೀಲ, ಮುಖಂಡ ಪ್ರಕಾಶ ತಪಶೆಟ್ಟಿ, ಎಂ.ಬಿ.ಸೌದಾಗರ, ಸಿದ್ದು ಕೊಣ್ಣೂರ, ಮಲ್ಲಿಕಾರ್ಜುನ ಚರಂತಿ ಮಠ, ಸಂತೋಷ ಹೊಕ್ರಾಣಿ ಸೇರಿದಂತೆ ಮತ್ತಿತರರು ಇದ್ದರು.