ಅವನತಿಯತ್ತ ಮಂಜರಾಬಾದ್‌ ತಾಲೂಕು ಕಚೇರಿ ಕಟ್ಟಡ

| Published : Jun 21 2025, 12:49 AM IST

ಸಾರಾಂಶ

ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಹಳೆ ತಾಲೂಕು ಕಚೇರಿ ಕಟ್ಟಡದ ಮರಮುಟ್ಟುಗಳು ಪ್ರಕೃತಿಯ ಹೊಡೆತಕ್ಕೆ ಸಿಲುಕಿ ನಾಶವಾಗುತ್ತಿವೆ. ಹರಾಜು ವೇಳೆ ವ್ಯಕ್ತಿಯೊಬ್ಬರು ಮೂರು ಲಕ್ಷ ರು. ಗಳಿಗೆ ಈ ಮರಮುಟ್ಟುಗಳನ್ನು ಹರಾಜು ಕೂಗಿದ್ದರು. ಆದರೆ, ಮತ್ತಷ್ಟು ಹೆಚ್ಚಿನ ದರಕ್ಕೆ ಮರಮುಟ್ಟುಗಳು ಹರಾಜಾಗಲಿದೆ ಎಂದು ಅಂದಿನ ಕಂದಾಯ ಇಲಾಖೆ ಅಧಿಕಾರಿಗಳು ಈ ಹರಾಜನ್ನು ರದ್ದುಗೊಳಿಸಿದರು. ಆದರೆ, ಮತ್ತೊಮ್ಮೆ ಮರಮುಟ್ಟುಗಳನ್ನು ಹರಾಜು ನಡೆಸಲು ಇಚ್ಛಾಶಕ್ತಿ ತೊರದ ಅಧಿಕಾರಿಗಳು ನೆಲಂತಸ್ತಿಗೆ ಮತ್ತೆ ಈ ಮರಮುಟ್ಟುಗಳನ್ನು ಸಾಗಿಸಲು ನಿರ್ಲಕ್ಷ್ಯ ವಹಿಸಿದರು. ಪರಿಣಾಮ ಅಂದಿನಿಂದ ಬಿಸಿಲು, ಮಳೆಯಲ್ಲಿ ಈ ಮರಮುಟ್ಟುಗಳು ನೆನೆದು ಒಣಗಿ ಹಾಳಾಗುತ್ತಿದ್ದು ಸದ್ಯದ ಮಳೆಗೆ ಕೊಳೆತು ಹೋಗುತ್ತಿವೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಹಳೆ ತಾಲೂಕು ಕಚೇರಿ ಕಟ್ಟಡದ ಮರಮುಟ್ಟುಗಳು ಪ್ರಕೃತಿಯ ಹೊಡೆತಕ್ಕೆ ಸಿಲುಕಿ ನಾಶವಾಗುತ್ತಿವೆ.

ಮಂಜ್ರಾಬಾದ್ ತಾಲೂಕು ಕಚೇರಿ ಎಂದು ಕರೆಸಿಕೊಳ್ಳುತ್ತಿದ್ದ ಬ್ರಿಟಿಷರು ನಿರ್ಮಿಸಿದ್ದ ಪಟ್ಟಣದ ಹಳೇ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿದ್ದ ಹಳೇ ತಾಲೂಕು ಕಚೇರಿಯನ್ನು ಮಿನಿವಿಧಾನಸೌಧಕ್ಕೆ ೨೦೦೮ರಲ್ಲಿ ಸ್ಥಳಾಂತರಿಸಲಾಗಿತ್ತು. ಕಚೇರಿ ಸ್ಥಳಾಂತರಗೊಂಡ ಹಲವು ವರ್ಷ ಹಳೇ ತಾಲೂಕು ಕಚೇರಿ ಕಟ್ಟಡ ಪಾಳು ಬಿದ್ದಿತ್ತು. ಈ ಕಟ್ಟಡ ಅತ್ಯಂತ ವಿಶೇಷ ವಾಸ್ತು ಶೈಲಿ ಹೊಂದಿದ್ದರಿಂದ ಪಟ್ಟಣದ ಹಲವು ಸಂಘಟನೆಗಳು ಈ ಕಟ್ಟಡವನ್ನು ಸಂರಕ್ಷಿಸುವ ಬಗ್ಗೆ ಮಾತುಗಳನ್ನಾಡಿದರೆ, ಕಚೇರಿಗಳಲ್ಲದ ಹಲವು ಸರ್ಕಾರದ ಅಡಿಯಲ್ಲಿ ಕೆಲಸ ಮಾಡುವ ಸಂಘಸಂಸ್ಥೆಗಳಿಗೆ ಈ ಕಟ್ಟಡದಲ್ಲಿ ಕಚೇರಿ ತೆರೆಯಲು ಅವಕಾಶ ನೀಡುವ ಮೂಲಕ ಕಟ್ಟಡವನ್ನು ಜೀವಂತವಾಗಿಡುವ ಮಾತುಗಳು ಕೇಳಿ ಬಂದಿದ್ದವು. ಆದರೆ, ಈ ಯಾವುದೇ ಮಾತುಗಳು ಕಾರ್ಯರೂಪಕ್ಕೆ ಬಾರದ ಹಿನ್ನೆಲೆಯಲ್ಲಿ ಕಟ್ಟಡ ವರ್ಷದಿಂದ ವರ್ಷಕ್ಕೆ ನಶಿಸುತ್ತ ಬಂದಿತ್ತು. ಆದರೆ, ಪಟ್ಟಣದ ಮುಖ್ಯರಸ್ತೆಯಲ್ಲಿ ಭಾರಿ ವಾಹನ ದಟ್ಟಣೆ ಸೃಷ್ಟಿಯಾಗುತ್ತಿದ್ದರಿಂದ ೨೦೧೮ರಲ್ಲಿ ಅಂದಿನ ಉಪವಿಭಾಗಾಧಿಕಾರಿಯಾಗಿದ್ದ ಲಕ್ಷ್ಮಿಕಾಂತರೆಡ್ಡಿ ರಸ್ತೆ ವಿಸ್ತರಣೆ ಮಾಡುವುದರಿಂದ ವಾಹನ ದಟ್ಟಣೆ ಕಡಿಮೆಯಾಗಲಿದೆ ಎಂಬ ಗುರಿಯೊಂದಿಗೆ ಮೊದಲು ಹೆದ್ದಾರಿ ಬದಿಯಲ್ಲಿದ್ದ ಸರ್ಕಾರಿ ಕಟ್ಟಡಗಳ ತೆರವುಗೊಳಿಸಲು ಮುಂದಾಗಿದ್ದರು. ಈ ವೇಳೆ ಹಳೇ ತಾಲೂಕು ಕಚೇರಿ ಕಟ್ಟಡವನ್ನು ನೆಲಸಮಗೊಳಿಸಲಾಯಿತು. ಈ ವೇಳೆ ಇಲ್ಲಿನ ಎಲ್ಲ ಮರಮುಟ್ಟುಗಳನ್ನು ಮಿನಿವಿಧಾನಸೌಧದ ನೆಲಂತಸ್ತಿಗೆ ಸಾಗಿಸಿ ಸಂಗ್ರಹಿಡಲಾಗಿತ್ತು.

ನಾಶಕ್ಕೆ ಮುನ್ನುಡಿ:

ಮಿನಿವಿಧಾನಸೌಧದ ನೆಲಂತಸ್ತಿನಲ್ಲಿ ಸಂಗ್ರಹಿಸಿಡಲಾಗಿದ್ದ ಈ ಮರಮುಟ್ಟುಗಳನ್ನು ಹರಾಜು ಹಾಕುವ ಯೋಜನೆಯೊಂದಿಗೆ ನೆಲಂತಸ್ತಿನಿಂದ ಮಿನಿವಿಧಾನಸೌಧದ ಹೊರಭಾಗಕ್ಕೆ ತಂದು ಹಾಕಲಾಗಿತ್ತು. ಹರಾಜು ವೇಳೆ ವ್ಯಕ್ತಿಯೊಬ್ಬರು ಮೂರು ಲಕ್ಷ ರು. ಗಳಿಗೆ ಈ ಮರಮುಟ್ಟುಗಳನ್ನು ಹರಾಜು ಕೂಗಿದ್ದರು. ಆದರೆ, ಮತ್ತಷ್ಟು ಹೆಚ್ಚಿನ ದರಕ್ಕೆ ಮರಮುಟ್ಟುಗಳು ಹರಾಜಾಗಲಿದೆ ಎಂದು ಅಂದಿನ ಕಂದಾಯ ಇಲಾಖೆ ಅಧಿಕಾರಿಗಳು ಈ ಹರಾಜನ್ನು ರದ್ದುಗೊಳಿಸಿದರು. ಆದರೆ, ಮತ್ತೊಮ್ಮೆ ಮರಮುಟ್ಟುಗಳನ್ನು ಹರಾಜು ನಡೆಸಲು ಇಚ್ಛಾಶಕ್ತಿ ತೊರದ ಅಧಿಕಾರಿಗಳು ನೆಲಂತಸ್ತಿಗೆ ಮತ್ತೆ ಈ ಮರಮುಟ್ಟುಗಳನ್ನು ಸಾಗಿಸಲು ನಿರ್ಲಕ್ಷ್ಯ ವಹಿಸಿದರು. ಪರಿಣಾಮ ಅಂದಿನಿಂದ ಬಿಸಿಲು, ಮಳೆಯಲ್ಲಿ ಈ ಮರಮುಟ್ಟುಗಳು ನೆನೆದು ಒಣಗಿ ಹಾಳಾಗುತ್ತಿದ್ದು ಸದ್ಯದ ಮಳೆಗೆ ಕೊಳೆತು ಹೋಗುತ್ತಿವೆ.ಉತ್ತಮ ಮರಮುಟ್ಟುಗಳು:

ಬ್ರಿಟಿಷರ ಕಾಲದ ಹಳೇ ತಾಲೂಕು ಕಚೇರಿ ಕಟ್ಟಡದ ಮೇಲ್ಛಾವಣಿಗೆ ಹಾಕಿದ್ದ ಮರಮುಟ್ಟುಗಳು ತ್ಯಾಗ, ಹೊನ್ನೆಯಂತಹ ಉತ್ತಮ ಜಾತಿಯ ಮರಮುಟ್ಟುಗಳಾಗಿದ್ದು, ಭಾರಿ ಗಾತ್ರದ ಮರಮುಟ್ಟುಗಳು ಇಂದು ನೋಡಲಿಕ್ಕೂ ಸಿಗುವುದಿಲ್ಲ ಎಂಬುದು ಹಿರಿಯರ ಮಾತು.ಕಳ್ಳರ ಪಾಲಾದ ಟ್ರಜರಿ:

ಹಳೇ ತಾಲೂಕು ಕಚೇರಿಯಲ್ಲಿದ್ದ ಸುಮಾರು ಐದು ಅಡಿ ವಿನ್ಯಾಸದ ಕಬ್ಬಿಣದ ಟ್ರಜರಿಯನ್ನು ಕಟ್ಟಡ ನೆಲಸಮಗೊಳಿಸಿದ ವೇಳೆ ಕಟ್ಟಡದಿಂದ ಹೊರಭಾಗಕ್ಕೆ ತಂದು ಇಡಲಾಗಿತ್ತು. ಟ್ರಜರಿ ರಕ್ಷಣೆಗಾಗಿ ಅಳವಡಿಸಿದ್ದ ಬೃಹತ್ ಕಬ್ಬಿಣದ ಸಲಾಕೆಗಳನ್ನು ಇದರೊಂದಿಗೆ ಇಡಲಾಗಿತ್ತು. ಮೊದಲಿಗೆ ಈ ಎಲ್ಲವನ್ನು ಮಿನಿವಿಧಾನಸೌಧಕ್ಕೆ ಸಾಗಿಸಲಾಗಿದೆ ಎಂದು ಎಲ್ಲರೂ ನಂಬಿದ್ದರು. ಆದರೆ, ಮಿನಿ ವಿಧಾನಸೌಧಕ್ಕೆ ಕೇವಲ ಕಬ್ಬಿಣದ ಸಲಾಕೆಗಳು ತಲುಪಿದ್ದು, ಬೃಹತ್ ಗಾತ್ರದ ಟ್ರಜರಿ ಬಾಕ್ಸ್ ಯಾರು ಕೊಂಡೊಯ್ದರು ಎಂಬುದು ಇಂದಿಗೂ ತಿಳಿಯದಾಗಿದೆ. ಈ ಬಗ್ಗೆ ಹಲವು ಚರ್ಚೆಗಳು ನಡೆದರೂ ಟ್ರಜರಿ ಬಾಕ್ಸ್ ಪತ್ತೆಗೆ ಕಂದಾಯ ಇಲಾಖೆ ಅಧಿಕಾರಿಗಳು ಯಾವುದೇ ಉತ್ಸಾಹ ತೋರದ ಹಿನ್ನೆಲೆಯಲ್ಲಿ ಟ್ರಜರಿ ಕಳ್ಳರ ಪಾಲಾಗುವಂತಾಗಿದೆ. ಉದ್ಘಾಟನೆಯಾಗದ ಕಟ್ಟಡ:

ಸದ್ಯ ನೆಲಮಾಳಿಗೆ ಹಾಗೂ ಮೊದಲ ಹಂತದ ಮಿನಿವಿಧಾನಸೌಧ ೨೦೦೮ರಲ್ಲಿ ಸಾರ್ವಜನಿಕರ ಸೇವೆಗೆ ಮುಕ್ತಗೊಂಡಿದೆ. ಆದರೆ, ಮಿನಿವಿಧಾನಸೌಧದ ಕಟ್ಟಡದಲ್ಲಿ ಸ್ಥಳಾವಕಾಶದ ಕೊರತೆ ಕಾರಣ ಇಂದಿಗೂ ಕಂದಾಯ ಇಲಾಖೆಯ ಹಲವು ಶಾಖೆಗಳು ಪಟ್ಟಣದ ವಿವಿಧೇಡೆ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ೨೦೧೮ರಿಂದ ಮಿನಿವಿಧಾನಸೌಧದ ಮೇಲ್ಭಾಗದಲ್ಲಿ ಮೂರು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು ಕುಂಟುತ್ತಾ, ತೆವಳುತ್ತಾ ನಡೆದ ಕಾಮಗಾರಿ ೨೦೨೪ರ ಮಧ್ಯಭಾಗದಲ್ಲಿ ಪೂರ್ಣಗೊಂಡಿದೆ. ಆದರೆ, ಕಟ್ಟಡ ನಿರ್ಮಾಣಗೊಂಡು ವರ್ಷ ಕಳೆಯುತ್ತ ಬಂದರೂ ಉದ್ಘಾಟನೆ ಭಾಗ್ಯಪಡೆಯದಾಗಿರುವ ಕಾರಣ ಸಾರ್ವಜನಿಕರು ಕಂದಾಯ ಇಲಾಖೆಯ ಕೆಲಸಕ್ಕಾಗಿ ಪಟ್ಟಣದಾದ್ಯಂತ ಅಲೆದಾಡಬೇಕಾಗಿದೆ.

---------------------------------------------------------------ಹೇಳಿಕೆ1

- ತಹಸೀಲ್ದಾರಾಗಿ ಇಲ್ಲಿಗೆ ಆಗಮಿಸುವ ಮುನ್ನವೆ ಮರಮುಟ್ಟುಗಳು ಸಂಪೂರ್ಣ ಹಾಳಾಗಿದ್ದು ಇಂದು ಈ ಮಟ್ಟುಗಳನ್ನು ಸಂರಕ್ಷಿಸಿದರು ಯಾವುದೇ ಪ್ರಯೋಜವಿಲ್ಲ.

ಅರವಿಂದ್, ತಹಸೀಲ್ದಾರ

ಹೇಳಿಕೆ2ಮಿನಿವಿಧಾನಸೌಧದ ಕಟ್ಟಡ ಉದ್ಘಾಟನೆಗೆ ದಿನಾಂಕವನ್ನು ಕಂದಾಯ ಇಲಾಖೆ ಸಚಿವರ ಬಳಿ ಕೇಳಲಾಗಿದ್ದು ಅವರು ದಿನಾಂಕ ನಿಗದಿಪಡಿಸಿದ ತಕ್ಷಣ ಕಟ್ಟಡವನ್ನು ಉದ್ಘಾಟಿಸಲಾಗುವುದು.

ಸಿಮೆಂಟ್ ಮಂಜು ಶಾಸಕ

----------------------------------------------------------------