ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಮೈಸೂರು ದಸರಾ ಹಾಗೂ ಹಾಸನಾಂಬ ಜಾತ್ರೆಯ ವಿದ್ಯುತ್ ದೀಪಾಲಂಕಾರಗಳನ್ನು ನೆನಪಿಸುವ ರೀತಿಯಲ್ಲಿ ನಮ್ಮೂರಿನಲ್ಲಿ ವಿದ್ಯುತ್ ದೀಪಾಲಂಕಾರ ಮಾಡಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವ ಎಸ್.ಎಲ್.ಎನ್ ಯುವಕ ಸಂಘದ ಸದಸ್ಯರು, ಪುರಸಭೆ ಮಾಜಿ ಅಧ್ಯಕ್ಷ ಎಚ್.ವಿ.ಪುಟ್ಟರಾಜು ಜತೆಗೆ ಪಟ್ಟಣದ ವಿವಿಧ ಸಂಘ ಸಂಸ್ಥೆಗಳ ಮತ್ತು ಸಾರ್ವಜನಿಕರ ಸಹಕಾರ ಅಭಿನಂದನೀಯ. ನಾಲ್ಕು ದಿನಗಳು ನಡೆಯುತ್ತಿರುವ ರಾಜ್ಯೋತ್ಸವ ಕಾರ್ಯಕ್ರಮಗಳು ಅವಿಸ್ಮರಣೀಯ ಎಂದು ಸಂಸದ ಶ್ರೇಯಸ್ ಎಂ.ಪಟೇಲ್ ಮೆಚ್ಚುಗೆ ವ್ಯಕ್ತಪಡಿಸಿದರು.ಪಟ್ಟಣದಲ್ಲಿ ಆಯೋಜಿಸಿರುವ ನಾಲ್ಕುದಿನಗಳ ಅದ್ಧೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಗುರುವಾರ ಸಂಜೆ ಬಸವನಗುಡಿ ಬೀದಿಯಲ್ಲಿ ನಿರ್ಮಿಸಿದ್ದ ಪುನೀತ್ ರಾಜಕುಮಾರ್ ವೇದಿಕೆಯಲ್ಲಿ ಜಿ ಕನ್ನಡ ಸರಿಗಮಪ ತಂಡದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮ ನಾಡಿನಲ್ಲಿ ಕನ್ನಡ ಭಾಷೆಗೆ ಮೊದಲ ಸ್ಥಾನ. ಎಲ್ಲಾ ಭಾಷೆಗಳ ಬಗ್ಗೆ ಅಭಿಮಾನ ಇರಲಿ, ಆದರೆ ಕನ್ನಡ ಭಾಷೆಗೆ ತಾಯಿ ಸ್ಥಾನ ಇರಲಿ. ದೇಶ ಆಧುನಿಕತೆಗೆ ತೆರೆದುಕೊಳ್ಳುತ್ತಿರುವ ಇಂದಿನ ದಿನದಲ್ಲಿ ನಮ್ಮ ನಾಡಿನ ಸಂಸ್ಕೃತಿ ಮಾಯವಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮ ನಾಡಿನ ಕುಸ್ತಿ ಕಲೆಯನ್ನು ನೆನಪಿಸಲು ಶುಕ್ರವಾರ ರಾಜ್ಯ ಮತ್ತು ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ. ಶನಿವಾರ ಗಿಚ್ಚಿಗಿಲಿಗಿಲಿ ತಂಡದ ಕಾರ್ಯಕ್ರಮ, ಭಾನುವಾರ ಭುವನೇಶ್ವರಿ ದೇವಿಯ ಮೆರವಣಿಗೆ ಹಲವಾರು ಕಲಾತಂಡಗಳ ಜೊತೆಯಲ್ಲಿ ನಡೆಯಲಿದ್ದು, ಎಲ್ಲರೂ ಈ ಕಾರ್ಯಕ್ರಮಗಳಲ್ಲಿ ಶಾಂತ ರೀತಿಯಿಂದ ಭಾಗವಹಿಸಿ ರಾಜ್ಯೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ವಿನಂತಿಸಿದರು.
ಸಾಹಿತಿ ಗುಂಜೇವು ಅಣ್ಣಾಜಪ್ಪ, ಯೋಗ ಗುರು ಗಣೇಶ್ ಬಾಬು, ಇತರರನ್ನು ಸನ್ಮಾನಿಸಿದರು. ಐಪಿಎಸ್ ಅಧಿಕಾರಿ ಡಿವೈಎಸ್ಪಿ ಶಾಲು, ಪುರಸಭೆ ಮಾಜಿ ಅಧ್ಯಕ್ಷ ಎಚ್.ವಿ. ಪುಟ್ಟರಾಜು, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ವಿ.ಸುರೇಶ್ ಕುಮಾರ್, ಎಚ್.ಟಿ.ಲಕ್ಷ್ಮಣ, ಪ್ರಾಂಶುಪಾಲ ಎಚ್.ಎಸ್. ಪ್ರಭುಶಂಕರ್, ಪುರಸಭೆ ಮಾಜಿ ಸದಸ್ಯ ಓಲೆ ಕುಮಾರ್, ಉಮೇಶ್, ಕಾರ್ತಿಕ್, ಬಾಲಾಜಿ, ಬಸವರಾಜು, ಬಾಗೀವಾಳು ಮಂಜು, ಸುದರ್ಶನ್ ಬಾಬು ಇದ್ದರು.ವೇದಿಕೆ ಕಾರ್ಯಕ್ರಮದ ನಂತರ ಸರಿಗಮಪ ತಂಡದ ಪುರುಷೋತ್ತಮ್, ಕಂಬದ ರಂಗಯ್ಯ, ಶಿವಾನಿ, ಹಾಗೂ ಡಿಕೆಡಿ ತಂಡದ ಸದಸ್ಯರು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಜನರನ್ನು ರಂಜಿಸಿತು.