ಅಂಬೇಡ್ಕರ್ ಅವರ ಚಿಂತನೆಗಳು ಯುವ ಪೀಳಿಗೆಗೆ ತಲುಪಬೇಕಿದೆ

| Published : Feb 12 2024, 01:33 AM IST

ಸಾರಾಂಶ

ಸಮುದಾಯ ಭವನದ ಜತೆಗೆ ಅಂಬೇಡ್ಕರ್ ಅವರ ಹೆಸರಿನಲ್ಲಿ ಉದ್ಯಾನವನ ಮತ್ತು ಗ್ರಂಥಾಲಯ ಸ್ಥಾಪಿಸಲು ಸಾಕಷ್ಟು ಬೇಡಿಕೆ ಇದೆ. ಸಾಮಾಜಿಕ ಅಸಮಾನತೆ ವಿರುದ್ದ ಹೋರಾಡಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ ಸಾಧನೆ, ವ್ಯಕ್ತಿತ್ವ ಎಲ್ಲರಿಗೂ ದಾರಿದೀಪವಾಗಿವೆ. ಅವರ ವಿಚಾರ, ಚಿಂತನೆ ಯುವ ಪೀಳಿಗೆಗೆ ತಲುಪಬೇಕಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಭಾರತ ರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಸೇವಾ ಸಂಘದ ವತಿಯಿಂದ ಎಚ್.ಡಿ ಕುಮಾರಸ್ವಾಮಿ ಬಡಾವಣೆಯಯಲ್ಲಿ ಶನಿವಾರ ಡಾ. ಬಿ.ಆರ್ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ನಿಯೋಜಿತ ಜಾಗದಲ್ಲಿ, ನಾಮಫಲಕ ಅನಾವರಣ ಮಾಡಲಾಯಿತು.

ಈ ವೇಳೆ ಮಾತನಾಡಿದ ಮಹಾನಗರ ಪಾಲಿಕೆ ನಗರ ಸೇವಕ ಸಂದೀಪ ಜೀರಗ್ಯಾಳ, ನಗರದ ಪ್ರತಿಷ್ಠಿತ ಬಡಾವಣೆಗಳಲ್ಲೊಂದಾದ ಕುಮಾರ ಸ್ವಾಮಿ ಬಡಾವಣೆ ನಿರ್ಮಾಣವಾಗಿ ಸುಮಾರು 15 ವರ್ಷಗಳು ಕಳೆದಿವೆ. ಇಲ್ಲಿನ ಸಮುದಾಯದ ಬೇಡಿಕೆಯಂತೆ ಡಾ. ಬಿ.ಆರ್ ಅಂಬೇಡ್ಕರ್ ಅವರ ಸಮುದಾಯ ಭವನ ನಿರ್ಮಾಣವಾಗಬೇಕಿದೆ. ಈ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಸಮುದಾಯ ಭವನ ನಿರ್ಮಾಣಕ್ಕೆ ಸದ್ಯದಲ್ಲೇ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಸಮುದಾಯ ಭವನದ ಜತೆಗೆ ಅಂಬೇಡ್ಕರ್ ಅವರ ಹೆಸರಿನಲ್ಲಿ ಉದ್ಯಾನವನ ಮತ್ತು ಗ್ರಂಥಾಲಯ ಸ್ಥಾಪಿಸಲು ಸಾಕಷ್ಟು ಬೇಡಿಕೆ ಇದೆ. ಸಾಮಾಜಿಕ ಅಸಮಾನತೆ ವಿರುದ್ದ ಹೋರಾಡಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ ಸಾಧನೆ, ವ್ಯಕ್ತಿತ್ವ ಎಲ್ಲರಿಗೂ ದಾರಿದೀಪವಾಗಿವೆ. ಅವರ ವಿಚಾರ, ಚಿಂತನೆ ಯುವ ಪೀಳಿಗೆಗೆ ತಲುಪಬೇಕಿದೆ ಎಂದರು.

ಅಂಬೇಡ್ಕರ ಅವರು ದೇಶಕ್ಕೆ ಕೊಡುಗೆಯಾಗಿ ನೀಡಿದ ಸಂವಿಧಾನದಿಂದ ವಿಶ್ವದಲ್ಲಿಯೇ ಭಾರತ ಮಾದರಿ ಪ್ರಜಾಸತ್ಯಾತ್ಮಕ ರಾಷ್ಟ್ರವಾಗಿ ಹೊರಹೊಮ್ಮಿದೆ. ಸಂವಿಧಾನದಲ್ಲಿ ಸ್ವಾತಂತ್ರ್ಯ, ಸಮಾನತೆ, ಶೋಷಣೆ ವಿರುದ್ಧ ಹಕ್ಕು, ಧಾರ್ಮಿಕ ಹಕ್ಕು, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಹಕ್ಕು ಹಾಗೂ ಸಂವಿಧಾನಿಕ ಪರಿಹಾರದ ಮೂಲಭೂತ ಹಕ್ಕುಗಳನ್ನು ನೀಡಿ ಆಧುನಿಕ ಭಾರತದ ನಿರ್ಮಾತೃವಾಗಿದ್ದಾರೆ. ಸಾಮಾಜಿಕ ಕಲ್ಯಾಣ ಹಾಗೂ ರಾಷ್ಟ್ರ ರಕ್ಷಣೆಯೊಂದಿಗೆ ವ್ಯಕ್ತಿಯ ವ್ಯಕ್ತಿತ್ವವನ್ನು ಅಭಿವೃದ್ಧಿಗೊಳಿಸುವುದೇ ಸಂವಿಧಾನದ ಘನ ಉದ್ದೇಶವಾಗಿದೆ. ಅಂತಹ ಸಂವಿಧಾನ ಗ್ರಂಥವನ್ನು ಕೊಡುಗೆಯಾಗಿ ನೀಡಿದ ಅಂಬೇಡ್ಕರ್ ಅವರ ಸಮುದಾಯ ಭವನ ನಿರ್ಮಾಣ ಬಡಾವಣೆಯಲ್ಲಿ ಅವಶ್ಯವಾಗಿ ಆಗಬೇಕಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಭಾರತ ರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಸೇವಾ ಸಂಘದ ಅಧ್ಯಕ್ಷ ಮಹಾದೇವ ಭೀಮನಾಯ್ಕ, ಉಪಾಧ್ಯಕ್ಷ ಲಕ್ಷ್ಮಣ ಅಕ್ಕೆನ್ನವರ, ಖಜಾಂಚಿ ಬಸಪ್ಪ ಕುಂಬಾರ, ವೈ.ವೈ. ತಳವಾರ, ವಿಠ್ಠಲ ಅಸೋದೆ, ಹನುಮಂತ ಕಾಂಬಳೆ, ಜೀವನಲತಾ ನಡುವಿನಮನಿ, ಮಹಾದೇವ ಶಿರಗಾಂವಕರ ಹಾಗೂ ಮತ್ತಿತರು ಇದ್ದರು.