ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ದೇಶದ ಏಕತೆ, ಸಮಗ್ರತೆ ಮತ್ತು ಭದ್ರತೆಯನ್ನು ಕಾಪಾಡಲು ಪೊಲೀಸ್ ಇಲಾಖೆಗೆ ನಾಗರಿಕರ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ನಮ್ಮ ಪೊಲೀಸ್ ನಮ್ಮ ಹೆಮ್ಮೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಎಸ್ಪಿ ಕುಶಾಲ್ ಚೌಕ್ಸೆ ಹೇಳಿದರು.ನಗರದ ಜಿಲ್ಲಾ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಭಾನುವಾರ ನಮ್ಮ ಪೊಲೀಸ್ ನಮ್ಮ ಹೆಮ್ಮೆ ಘೋಷವಾಕ್ಯದಲ್ಲಿ ಜಿಲ್ಲಾ ಕೇಂದ್ರದಲ್ಲಿ ನಡೆದ ಭಾನುವಾರದ ಮ್ಯಾರಥಾನ್ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮರ್ಪಣಾ ಭಾವನೆ ಬೆಳೆಸಿಕೊಳ್ಳಿದೇಶವನ್ನು ಶತೃಗಳಿಂದ ಕಾಪಾಡಿ ಸಮಾಜದಲ್ಲಿ ಶಾಂತಿ ಸುವ್ಯಸ್ಥೆಯನ್ನು ಮರುಸ್ಥಾಪಿಸಲು ಮತ್ತು ಸಮರ್ಪಣಾ ಭಾವನೆಯನ್ನು ಬೆಳೆಸಲು ರಾಷ್ಟ್ರೀಯ ಏಕತಾ ದಿನವನ್ನು ಆಚರಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಚಂದನ್ಶೆಟ್ಟಿ, ನಟಿಯರಾದ ಸಂಜನಾನಾಯ್ಡು, ಅಚ್ಚುಗೌಡ ಸೇರಿ ಎಲ್ಲಾ ನಾಗರಿಕರಿಗೆ, ಪುಟಾಣಿಗಳಿಗೆ ಇಲಾಖೆ ವತಿಯಿಂದ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕ್ರೀಡಾಂಗಣ,ಬಜಾರ್ ರಸ್ತೆ, ಗಂಗಮ್ಮಗುಡಿ ರಸ್ತೆ, ಅಂಬೇಡ್ಕರ್ ಭವನ ಬಳಸಿಕೊಂಡು ಬಿಬಿರಸ್ತೆ ಮೂಲಕ ಮತ್ತೆ ಜಿಲ್ಲಾ ಕ್ರೀಡಾಂಗಣ ಹೀಗೆ ನಡೆದ ಒಟ್ಟು 5 ಕಿ.ಮೀ ಮ್ಯಾರಥಾನ್ ಓಟದಲ್ಲಿ ಹೆಜ್ಜೆಹಾಕುವ ಮೂಲಕ ನಾಗರಿಕರು ನಾವು ನಿಮ್ಮೊಂದಿಗಿದ್ದೇವೆ ಎನ್ನುವ ಭರವಸೆ ತುಂಬುವಲ್ಲಿ ಯಶಸ್ವಿಯಾದರು.ಕಾರ್ಯಕ್ರಮಕ್ಕೆ ಕೈಜೋಡಿಸಿ ರ್ಯಾಪರ್ ಚಂದನ್ಶೆಟ್ಟಿ ಮಾತನಾಡಿ, ಪೊಲೀಸ್ ಇಲಾಖೆ ಆಯೋಜಿಸಿರುವ ಮಾದಕವಸ್ತು ಮುಕ್ತ ಕರ್ನಾಟಕ ನಿರ್ಮಾಣದ ಉದ್ದೇಶ ಮತ್ತು ಫಿಟ್ನೆನ್ ಕಾಡಿಕೊಳ್ಳುವ ಬಗ್ಗೆ ಸಂದೇಶ ನೀಡುತ್ತಿರುವ ಈ ಜಾಗೃತಿ ಕಾರ್ಯಕ್ರಮದಲ್ಲಿ ಕೈಜೋಡಿಸಲು ಹೆಮ್ಮೆಯಿದೆ. ಎಲ್ಲರೂ ಕೂಡ ಫಿಟ್ನೆಸ್ ಬಗ್ಗೆ ಗಮನಹರಿಸಬೇಕು. ಕರಿದ ಪದಾರ್ಥಗಳು,ಜಂಕ್ಫುಡ್,ಅತಿಯಾದ ಸಿಹಿಯುಳ್ಳ ಆಹಾರದಿಂದಿ ದೂರವಿರಬೇಕು.ಇವುಗಳ ಬದಲಿಗೆ ಮನೆಯ ಆಹಾರಕ್ಕೆ ಹೆಚ್ಚಿನ ಒತ್ತು ನೀಡಬೇಕು.ತರಕಾರಿ ಮತ್ತು ಹಣ್ಣುಗಳನ್ನು ಹೆಚ್ಚಾಗಿ ಬಳಸುವ ಮೂಲಕ ಆರೋಗ್ಯಕರ ಜೀವನ ನಡೆಸಲು ಮುಂದಾಗಿ ಇಂಡಿಯಾ ಫಿಟ್ ಆಗಿ ಇರುವಂತೆ ನೀಡಿಕೊಳ್ಳಿ ಎಂದು ಕರೆ ನೀಡಿದರು. ತಾವೂ ಕೂಡ ಡ್ರಗ್ಸ್ ಸಂಬಂಧಿತ ಹಾಡನ್ನು ಬರೆದಿದ್ದೇನೆ. ಇದನ್ನು ಕೇಳಿದಾಗ ನೆಗೆಟೀವ್ ಶೇಡ್ ಕಾಣಿಸುತ್ತದೆ. ಆದರೆ ಇದನ್ನು ಸಿನಿಮಾಗೆ ಬರೆದಿದ್ದು, ಡ್ರಗ್ಸ್ ಅಪಾಯ ತಿಳಿಸುವ ಉದ್ದೇಶಕ್ಕಾಗಿಯೇ ಬರೆದಿದ್ದು, ದುರದೃಷ್ಟಕ್ಕೆ ಸಿನಿಮಾ ಬಿಡುಗಡೆ ಆಗಲಿಲ್ಲ, ಹಾಡು ಜನಪ್ರಿಯವಾಯಿತು. ಕಾರಣ ಸಮಾಜ ನೆಗೆಟೀವ್ ಸಂಗತಿಗಳಿಗೆ ಕೊಟ್ಟಷ್ಟು ಬೆಲೆ ಒಳ್ಳೆಯದಕ್ಕೆ ಕೊಡುವುದಿಲ್ಲ ಎಂದರು.ಕಾರ್ಯಕ್ರಮದಲ್ಲಿ ಯಶಸ್ವಿಯಾಗಿ ಓಟ ಮುಗಿಸಿದ 150 ಮಂದಿಗೆ ಪದಕ ವಿತರಣೆ ಮಾಡಲಾಯಿತು. ಮಂಜೇಶ್ ಅವರ ತಮಟೆ ಸದ್ದಿಗೆ ಚಂದನ್ಶೆಟ್ಟಿ ಸಹಿತ ಎಸ್ಪಿ,ಡಿವೈಎಸ್ಪಿ , ಸಹಿತ ಎಲ್ಲಾ ಪೊಲೀಸ್ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ, ನಾಗರಿಕರು ಮಕ್ಕಳು ಅವರಿವರೆನ್ನದೆ ಎಲ್ಲರೂ ಕುಣಿದು ಕುಪ್ಪಳಿಸಿದರು.
ಮ್ಯಾರಥಾನ್ ಪ್ರಶಸ್ತಿ ವಿಜೇತರುನಾಗರೀಕರು ಪುರುಷರ ವಿಭಾಗದಿಂದ ಚಿರಂತ್ ಕಶ್ಯಪ್ ಪ್ರಥಮ,ಎಂ.ಸಿ ಉಮರ್ ದ್ವಿತೀಯ,ಎಂ,ಆರ್ ಗೌತಮ್ ತೃತೀಯ ಸ್ಥಾನ ಪಡೆದು ಪೊಲೀಸ್ ಗೌರವಕ್ಕೆ ಪಾತ್ರವಾದರೆ ಮಹಿಳೆಯರ ವಿಭಾಗದಿಂದ ಆರ್. ಭೂಮಿಕ ಪ್ರಥಮ,ಭಾರ್ಗವಿ ದ್ವಿತೀಯ,ಎ.ಆಧ್ಯಾ ತೃತೀಯ ಸ್ಥಾನಪಡೆದು ಪೊಲೀಸ್ ಇಲಾಖೆಯ ಗೌರವಕ್ಕೆ ಪಾತ್ರವಾದರು.
ಪೊಲೀಸ್ ಇಲಾಖೆ ಪುರುಷರ ವಿಭಾಗದಿಂದ ಪ್ರಥಮ ಸ್ಥಾನವನ್ನು ಪೆರೇಸಂದ್ರ ಪೊಲೀಸ್ಠಾಣೆಯ ಸಿ.ಪಿ.ಸಿ ಮಂಜುನಾಥ್,ದ್ವಿತೀಯ ಸ್ಥಾನವನ್ನು ನಗರದ ಮೀಸಲು ಪೊಲೀಸ್ ಪೇದೆ ಆರ್.ರವಿ, ತೃತೀಯ ಸ್ಥಾನವನ್ನು ಸಿ.ಪಿ.ಸಿ. ಸುರೇಶ್.ಎಂ ಪಡೆದರೆ, ಮಹಿಳಾ ಪೊಲೀಸ್ ವಿಭಾಗದಲ್ಲಿ ನಗರದ ಮಹಿಳಾ ಪೊಲೀಸ್ ಠಾಣೆಯ ಕುಸುಮ ಪ್ರಥಮ, ಗ್ರಾಮಾಂತರ ಠಾಣೆಯ ಸಾಯಿಲಕ್ಷ್ಮೀ ದ್ವಿತೀಯ, ಗುಡಿಬಂಡೆ ಠಾಣೆಯ ನವ್ಯಶ್ರೀ ತೃತೀಯ ಸ್ಥಾನ ಪಡೆದರು.ಈ ವೇಳೆ ಹೆಚ್ಚುವರಿ ಎಸ್ಪಿ ರಾಜಾ ಇಮಾಮ್ ಖಾಸೀಂ, ಡಿವೈಎಸ್ಪಿ ಎಸ್.ಶಿವಕುಮಾರ್, ಡಿಎಚ್ಒ ಡಾ.ಮಹೇಶ್ಕುಮಾರ್ ಸೇರಿದಂತೆ ಪೊಲೀಸರು, ಸಾರ್ವಜನಿಕರು ಇದ್ದರು.