ಸಾರಾಂಶ
ಶಿರಸಿಯಿಂದ ಹೇರೂರು ಅಥವಾ ಗೋಳಿಮಕ್ಕಿ ಹೋಗಬೇಕೆಂದರೆ ನೀವು ಹರಸಾಹಸ ಮಾಡಬೇಕಾಗಿದೆ. ತಿರುವು ಮುರುವಿನಿಂದ ಕೂಡಿದ ಈ ರಸ್ತೆಯಲ್ಲಿ ತಿರುವಿನಲ್ಲಿ ಯಾವ ಮಾದರಿಯ ರಸ್ತೆ ಹೊಂಡ ಇದೆ ಎಂದು ಊಹಿಸುವುದೂ ನಿಮಗೆ ಕಷ್ಟವಾಗುತ್ತದೆ.
ಶಿರಸಿಶಿರಸಿಯಿಂದ ಹೇರೂರು ಅಥವಾ ಗೋಳಿಮಕ್ಕಿ ಹೋಗಬೇಕೆಂದರೆ ನೀವು ಹರಸಾಹಸ ಮಾಡಬೇಕಾಗಿದೆ. ತಿರುವು ಮುರುವಿನಿಂದ ಕೂಡಿದ ಈ ರಸ್ತೆಯಲ್ಲಿ ತಿರುವಿನಲ್ಲಿ ಯಾವ ಮಾದರಿಯ ರಸ್ತೆ ಹೊಂಡ ಇದೆ ಎಂದು ಊಹಿಸುವುದೂ ನಿಮಗೆ ಕಷ್ಟವಾಗುತ್ತದೆ!
ಹೌದು, ಮಳೆಗಾಲ ಕಳೆದ ಮೇಲೆ ಈ ರಸ್ತೆಯ ಹೊಂಡ ತುಂಬುವ ಪ್ರಕ್ರಿಯೆ ಸಹ ನಡೆದಿಲ್ಲ. ಅಲ್ಲಲ್ಲಿ ಉತ್ತಮ ರಸ್ತೆ ನಿರ್ಮಿಸಲಾಗಿದ್ದರೂ ನಿಮ್ಮಗಾಡಿ ವೇಗ ಜಾಸ್ತಿ ಮಾಡುತ್ತಿದ್ದಂತೆಯೇ ಮತ್ತೆ ರಸ್ತೆ ಹೊಂಡಗಳು ಧುತ್ತೆಂದು ಎದುರಿಗೆ ರಾರಾಜಿಸುತ್ತವೆ.ಶಿರಸಿ-ಕುಮಟಾ ರಸ್ತೆಯ ಕೊಳಗಿಬೀಸ್ನಿಂದ ಹೇರೂರು ಮತ್ತು ಗೋಳಿಮಕ್ಕಿಗೆ ತೆರಳುವ ಮಾರ್ಗ ಆರಂಭವಾಗುತ್ತದೆ. ಕೊಳಗಿಬೀಸ್ನಿಂದ 2.5 ಕಿಮೀ ವರೆಗೆ, ಅಂದರೆ ಹೆಬ್ಬಲಸು ಕ್ರಾಸ್ ವರೆಗೆ ರಸ್ತೆಯ ಸ್ಥಿತಿ ಸಂಪೂರ್ಣ ಹಾಳಾಗಿದೆ. ಕಳೆದ ಬೇಸಿಗೆಯಲ್ಲಿ ಇಲ್ಲಿ ಮರು ಡಾಂಬರೀಕರಣಕ್ಕೆ ಯೋಜನೆ ರೂಪಿಸಲಾಗಿತ್ತಾದರೂ ವಿಧಾನಸಭೆಯ ಚುನಾವಣೆಯ ಕಾರಣ ಟೆಂಡರ್ ಪ್ರಕ್ರಿಯೆ ಅಷ್ಟಕ್ಕೇ ನಿಂತಿತ್ತು. ಎಂದೋ ಮಾಡಿದ ರಿ ಕಾರ್ಪೆಟ್ ಸಂಪೂರ್ಣ ಕಿತ್ತೆದ್ದು ಹೋಗಿ ಓಡಾಡುವ ವಾಹನಗಳನ್ನು ರಸ್ತೆ ತೇಲಾಡುವಂತೆ ಮಾಡಿದೆ. ಇಲ್ಲಿಯ ಹಣಜಿಮನೆ ಬಳಿ ಸಂಪೂರ್ಣ ಕಿತ್ತು ಹೋಗಿರುವ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಒಂದಕ್ಕೊಂದು ತಾಗಿ ಮಾತಿನ ಚಕಮಕಿಗಳೂ ನಡೆದಿವೆ.ಇನ್ನು ಹೆಬ್ಬಲಸು ಕ್ರಾಸ್ನಿಂದ ಮರ್ಲಮನೆ ಕ್ರಾಸ್ ವರೆಗೆ ಕಳೆದ ವರ್ಷ ರಸ್ತೆ ಅಗಲಗೊಳಿಸಿ ಮರು ಡಾಂಬರೀಕರಣ ಮಾಡಲಾಗಿದೆ. ಇಲ್ಲಿ ಉತ್ತಮ ರಸ್ತೆ ಇರುವ ಕಾರಣ ವಾಹನಗಳು ವೇಗ ಪಡೆದುಕೊಂಡರೂ ಮತ್ತೆ ಮರ್ಲಮನೆ ಕ್ರಾಸ್ನಿಂದ ಸರಕುಳಿ ಮಹಿಷಾಸುರ ಮರ್ಧಿನಿ ದೇವಾಲಯ ವರೆಗೂ ರಸ್ತೆ ಯಾವುದೋ, ಹೊಂಡ ಯಾವುದೋ ಎಂದು ತಿಳಿಯದ ಸ್ಥಿತಿ ಇದೆ. ಈ ಮಾರ್ಗದಲ್ಲಿ ವಾಹನ ಸಂಖ್ಯೆ ಜಾಸ್ತಿ ಇದ್ದು, ರಾತ್ರಿಯ ವೇಳೆಯಲ್ಲೂ ವಾಹನಗಳು ಚಲಿಸುತ್ತಿರುತ್ತವೆ. ನಿತ್ಯ 300ಕ್ಕೂ ಅಧಿಕ ವಾಹನಗಳ ಸಂಚಾರ ಇಲ್ಲಿದೆ. ಇನ್ನಾದರೂ ಅಗತ್ಯ ಇರುವ ಕಡೆಗಳಲ್ಲಿ ಮರು ಡಾಂಬರೀಕರಣ ಮಾಡಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂಬ ಆಗ್ರಹ ಕೇಳಿಬಂದಿದೆ.
ಮರೆತು ಹೋದ ನೇರ್ಲವಳ್ಳಿ ಸೇತುವೆ:ಇಲ್ಲಿಯ ನೇರ್ಲವಳ್ಳಿ ಬಸ್ ತಂಗುದಾಣದ ಬಳಿ ಅನಾದಿ ಕಾಲದಲ್ಲಿ ನಿರ್ಮಿಸಿದ, ಒಂದು ವಾಹನ ಮಾತ್ರ ದಾಟಬಹುದಾದ ಸೇತುವೆ ಇದೆ. ಈ ಸೇತುವೆಯನ್ನು ಪುನರ್ ನಿರ್ಮಿಸಿ ರಸ್ತೆ ಅಗಲಗೊಳಿಸುವ ಬಗ್ಗೆ ಕಳೆದ ವರ್ಷವೇ ಪ್ರಸ್ತಾವನೆ ಸಲ್ಲಿಸಲಾಗಿತ್ತಾದರೂ ಇದುವರೆಗೂ ಯಾವುದೇ ರೀತಿಯ ಪ್ರಗತಿ ಕಂಡಿಲ್ಲ.