ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಖಾಸಗಿ ಶಾಲಾ ಮಕ್ಕಳಂತೆ ಸರ್ಕಾರಿ ಶಾಲೆಗಳ ಮಕ್ಕಳನ್ನು ಕೂಡ ತಯಾರು ಮಾಡಬೇಕು. ಜೊತೆಗೆ ಎಸ್ಸೆಸ್ಸಲ್ಸಿಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆಯಬೇಕು ಎಂಬುದು ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ ಕರೆ ನೀಡಿದರು. ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಖಾಸಗಿ ಅನುದಾನಿತ ಪ್ರೌಢಶಾಲಾ ಮತ್ತು ಸಂಯುಕ್ತ ಪದವಿಪೂರ್ವ ಕಾಲೇಜು ನೌಕರರ ಸಂಘ ಇವರ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಎಸ್ಸೆಸ್ಸೆಲ್ಸಿಯಲ್ಲಿ ಫಲಿತಾಂಶ ಸುಧಾರಣಾ ಕಾರ್ಯಾಗಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಾಲೆ ಬಿಟ್ಟ ಮಕ್ಕಳಿದ್ದರೆ ಸರಿಯಾಗಿ ಶಾಲೆಗೆ ಬಾರದ ಮಕ್ಕಳು ಕಂಡು ಬಂದರೆ ಅಂತವರ ಮನೆಗೆ ಹೋಗಿ ಅವರ ಪೋಷಕರಿಗೆ ತಿಳಿವಳಿಕೆ ನೀಡುವುದು, ಮಕ್ಕಳು ಓದುವುದಕ್ಕೆ ಕಾಲಾವಕಾಶ ಮಾಡಿಕೊಡುವುದು, ಎಲ್ಲಾ ಮಕ್ಕಳಿಗೆ ಮತ್ತು ಪೋಷಕರಿಗೆ ಪತ್ರ ಬರೆದು ಅವರಿಗೆ ಒಂದು ಭರವಸೆ ಬರುವಂತೆ ಮಾಡಬೇಕು. ಮಕ್ಕಳು ಹೆಚ್ಚು ಗಣಿತ ಮತ್ತು ವಿಜ್ಞಾನದಲ್ಲಿ ಫೇಲ್ ಆಗುತ್ತಿದ್ದರೆ ಆ ವಿಷಯವನ್ನು ಶಿಕ್ಷಕರು ಹೆಚ್ಚು ಗಮನ ವಹಿಸಬೇಕೆಂದು ಕಿವಿಮಾತು ಹೇಳಿದರು.ಯಾರೂ ಕೂಡ ಅನುತ್ತೀಣರಾಗದೇ ನೂರಕ್ಕೆ ನೂರರಷ್ಟು ಫಲಿತಾಂಶ ಬರಬೇಕೆಂಬುದು ನಮ್ಮ ಉದ್ದೇಶವಾಗಿದೆ. ಶಿಕ್ಷಕರು ಆಯಾ ಶಾಲೆಯಲ್ಲಿ ಮಕ್ಕಳು ಯಾವ ವಿಷಯದಲ್ಲಿ ವೀಕ್ ಇದ್ದಾರೆ ಎಂಬುದನ್ನು ಗ್ರಹಿಸಬೇಕು. ಅಂತವರಿಗೆ ವಿಶೇಷ ತರಗತಿ ಮಾಡಬೇಕು ಎಂದು ಸಲಹೆ ನೀಡಿದರು. ಪಾಸ್ ಆಗುವುದು ಉದ್ದೇಶವಾಗದೇ ಹೆಚ್ಚು ಅಂಕ ಗಳಿಸುವ ಬಗ್ಗೆಯೂ ಗಮನ ವಹಿಸಬೇಕು ಹಾಗೂ ಆತನ ಜ್ಞಾನ ಅಭಿವೃದ್ಧಿ ಆಗಬೇಕು. ನಾಮ್ಕಾವಸ್ತೆಯಾಗಿ ಪಾಸಾದರೇ ಯಾವ ಉಪಯೋಗವಿಲ್ಲ. ಪ್ರಸ್ತುತದ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳನ್ನು ಸಿದ್ಧಪಡಿಸಬೇಕಾಗಿದೆ. ಸಾಮಾನ್ಯ ಜ್ಞಾನ ಇರಬಹುದು, ಪಾಠದ ಜೊತೆಗೆ ಪುಸ್ತಕ ಓದುವುದನ್ನು ಹೇಳಿಕೊಡಬೇಕು. ಕೆಲ ಮಕ್ಕಳು ಶಾರ್ಪ್ ಆಗಿ ಇರುತ್ತಾರೆ. ಇನ್ನು ಕೆಲ ಮಕ್ಕಳು ಓದುವುದರಲ್ಲಿ ಸಲ್ಪ ಹಿಂದೆ ಇರುತ್ತಾರೆ. ಈ ವೇಳೆ ಅಂತವರಿಗೆ ಓದುವ ವಿಶಿಷ್ಟ ವಿಧಾನವನ್ನು ತಿಳಿಸಬೇಕಾಗುತ್ತದೆ. ಓದಿದ್ದನ್ನು ಆಗಾಗ ಮನನ ಮಾಡಿದರೇ ಹೆಚ್ಚು ತಲೆಯಲ್ಲಿ ಉಳಿಯುತ್ತದೆ. ಕೆಲ ದಿನಗಳ ಹಿಂದೆ ಶ್ರೀ ಆದಿಚುಂಚನಗಿರಿ ಮಠದಲ್ಲಿ ಮಕ್ಕಳಿಗಾಗಿ ಕಾರ್ಯಾಗಾರ ಮಾಡಲಾಗಿತ್ತು. ಶೀಘ್ರದಲ್ಲಿಯೇ ಇನ್ನೊಂದು ಕಾರ್ಯಾಗಾರ ಮಾಡಲು ಸೂಚಿಸಲಾಗಿದೆ ಎಂದು ಹೇಳಿದರು.
ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಮಕ್ಕಳೇ ಸರ್ಕಾರಿ ಶಾಲೆಗೆ ಬರುತ್ತಾರೆ. ಖಾಸಗಿ ಮಕ್ಕಳ ಜೊತೆ ಸ್ಪರ್ಧೆ ಮಾಡುವಂತೆ ಸರ್ಕಾರಿ ಶಾಲಾ ಮಕ್ಕಳನ್ನು ತಯಾರು ಮಾಡಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ನಮ್ಮ ಉದ್ದೇಶ ಸಫಲವಾಗಿ ನೂರಕ್ಕೆ ನೂರರಷ್ಟು ಫಲಿತಾಂಶ ಬರಬೇಕು ಎಂದು ಕರೆ ನೀಡಿದರು. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಎಚ್.ಎಸ್. ಚಂದ್ರಶೇಖರ್ ಮಾತನಾಡಿ, ಪ್ರಸ್ತುತದಲ್ಲಿ ಎಸ್ಸೆಸ್ಸಲ್ಸಿಯಲ್ಲಿ ಫಲಿತಾಂಶದ ಕಡೆ ಹೆಚ್ಚಿನ ಗಮನ ನೀಡಬೇಕಾಗಿದೆ. ಸ್ಥಳೀಯ ಆಡಳಿತ ಸಂಸ್ಥೆ ಮತ್ತೊಂದು ಸರಕಾರ ಎರಡರಿಂದಲೂ ಒತ್ತಡವಿದೆ. ಶಾಲಾ ಶಿಕ್ಷಕರಿಗೆ ಸೇವಾ ಸುರಕ್ಷತೆ ಕೊಡುವ ಬಗ್ಗೆ ಸರ್ಕಾರವು ಕ್ರಮ ತೆಗೆದುಕೊಳ್ಳುತ್ತಿದೆ. ಎಸ್ಸೆಸ್ಸೆಲ್ಸಿಯಲ್ಲಿ ಪರೀಕ್ಷೆಯ ಫಲಿತಾಂಶದ ಸಂಕ್ರಮಣ ಕಾಲವಾಗಿದೆ. ಕಡ್ಡಾಯ ಶಿಕ್ಷಣದಲ್ಲಿ ಮತ್ತು ಹಾಜರಾತಿಯಲ್ಲಿ ಎಲ್ಲಾರ ಜವಬ್ದಾರಿ ಹೆಚ್ಚು ಇದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಣಾಧಿಕಾರಿ ಜೆ.ಬಿ. ತಮ್ಮಣ್ಣಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎನ್. ಮಂಜುಳಾ, ಅರಸೀಕೆರೆ ಕ್ಷೇತ್ರ ಶಿಕ್ಣಾಧಿಕಾರಿ ಎಚ್.ಬಿ. ಮೋಹನ್ ಕುಮಾರ್, ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯ ಕಾರ್ಯದರ್ಶಿ ರಾಮು ಅ. ಗುಗ್ವಾಡ, ರಾಜ್ಯ ಸಹ ಕಾರ್ಯದರ್ಶಿ ದೇವರಾಜೇಗೌಡ, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ. ಕೃಷ್ಣೇಗೌಡ, ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾಧ್ಯಕ್ಷ ಬಿ.ಎಲ್. ಚಂದ್ರಪ್ಪ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಚ್.ಸಿ. ಬಸವರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಣ್ಣಪ್ಪ, ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ಎಲ್. ಚಕ್ರಪಾಣಿ, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ಬಿ. ಸತೀಶ್, ಲಿಪಿಕ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಎನ್. ಜಯರಾಂ ಹಾಗೂ ಜಿಲ್ಲಾ ಅನುಧಾನಿತ ಶಾಲಾ ನೌಕರರ ಕಾರ್ಯಕಾರಿ ಸಮಿತಿ ಅಧ್ಯಕ್ಷ ಕೆ.ಬಿ. ಆನಂದ್, ಗೌರವಾಧ್ಯಕ್ಷ ಎಂ.ಎಂ. ನಟೇಶ್, ಪ್ರಧಾನ ಕಾರ್ಯದರ್ಶಿ ಎಸ್.ಬಿ. ಕಲ್ಯಾಣ್ ಕುಮಾರ್, ಖಜಾಂಚಿ ಎನ್. ಎಚ್. ನವೀನ್ ಕುಮಾರ್, ಉಪಾಧ್ಯಕ್ಷ ಶಿಪ್ರಕಾಶ್, ಕೆ.ಎಲ್. ಜಗದೀಶ್, ಕೆ. ದೇವರಾಜು, ಕೆ.ಎಲ್. ಹರೀಶ್, ಜಿ.ಆರ್. ಪ್ರಶಾಂತ್, ಸುಂದರೇಶ್ ಡಿ. ಹುಳುವಾರೆ, ಇತರರು ಉಪಸ್ಥಿತರಿದ್ದರು.