ರಸಾಯನ ವಿಜ್ಞಾನ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಿ:ಪ್ರೊ. ಬಸಪ್ಪ

| Published : May 08 2024, 01:05 AM IST

ರಸಾಯನ ವಿಜ್ಞಾನ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಿ:ಪ್ರೊ. ಬಸಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಬದಲಾದ ಜೀವನಶೈಲಿ, ಕ್ಯಾನ್ಸರ್‌ ಕಾರಕಗಳ ಸೇವನೆಯಿಂದ ರೋಗವನ್ನು ಜನರು ಆಹ್ವಾನಿಸಿಕೊಳ್ಳುತ್ತಿದ್ದಾರೆ. ಔಷಧ ವಿಜ್ಞಾನ ಕ್ಷೇತ್ರ ಬೆಳೆಯಲು ರಸಾಯನ ವಿಜ್ಞಾನಿಗಳು ಕೈ ಜೋಡಿಸಬೇಕಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ರಸಾಯನ ವಿಜ್ಞಾನ ವಿದ್ಯಾರ್ಥಿಗಳು ಸಂಶೋಧನೆಯತ್ತ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ಬಸಪ್ಪ ಕರೆ ನೀಡಿದರು.

ನಗರದ ಸರಸ್ವತಿಪುರಂನ ಜೆಎಸ್‌ಎಸ್‌ ಮಹಿಳಾ ಕಾಲೇಜಿನ ರಸಾಯನಶಾಸ್ತ್ರ ವಿಭಾಗವು ನವಜ್ಯೋತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ರಸಾಯನ ವಿಜ್ಞಾನದ ಹೊಸ ನೋಟಗಳು ಕುರಿತ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಅವರು, ಔಷಧದಲ್ಲಿ ರಸಾಯನಿಕ ಜೀವವಿಜ್ಞಾನ ಕುರಿತು ಮಾತನಾಡಿದರು.

ಬದಲಾದ ಜೀವನಶೈಲಿ, ಕ್ಯಾನ್ಸರ್‌ ಕಾರಕಗಳ ಸೇವನೆಯಿಂದ ರೋಗವನ್ನು ಜನರು ಆಹ್ವಾನಿಸಿಕೊಳ್ಳುತ್ತಿದ್ದಾರೆ. ಔಷಧ ವಿಜ್ಞಾನ ಕ್ಷೇತ್ರ ಬೆಳೆಯಲು ರಸಾಯನ ವಿಜ್ಞಾನಿಗಳು ಕೈ ಜೋಡಿಸಬೇಕಿದೆ. ರೋಗಕ್ಕೆ ಕಾರಣವೇನು? ಔಷಧ ಕಂಡು ಹಿಡಿಯಲು ವಿಜ್ಞಾನಿಗಳು ಅನುಸರಿಸಬೇಕಾದ ಮಾರ್ಗಗಳು ಯಾವುವು ಎಂಬುದನ್ನು ಅರ್ಥೈಸಿಕೊಂಡು ‍ಪ್ರಯೋಗ ನಡೆಸಬೇಕು. ಹೊಸ ರಾಸಾಯನಿಕ ವಸ್ತು ಕಂಡು ಹಿಡಿದರೆ, ಅದರ ಬಳಕೆ, ಉಪಯೋಗದ ಬಗ್ಗೆಯೂ ಬೆಳಕು ಚೆಲ್ಲಬೇಕು ಎಂದರು.

ಕೃತಕ ಬುದ್ಧಿಮತ್ತೆ (ಎಐ) ಸೇರಿದಂತೆ ವಿವಿಧ ತಂತ್ರಜ್ಞಾನಗಳು ಇತ್ತೀಚೆಗೆ ವಿಶ್ವವನ್ನು ಪ್ರವೇಶಿಸಿವೆ. ಹೊಸ ತಂತ್ರಜ್ಞಾನಗಳು ಚಿಕಿತ್ಸೆಯ ಗುಣಮಟ್ಟ ಹೆಚ್ಚಿಸಿವೆ. ಆದರೆ, ಪ್ರಯೋಗಗಳಿಗೆ, ಔಷಧ ಕಂಡು ಹಿಡಿಯಲು ವಿಜ್ಞಾನಿಗಳು ಬೇಕಿದೆ. ವಿಜ್ಞಾನಿಗಳ ಹೊಸ ತಂತ್ರಜ್ಞಾನಗಳ ಸಹಕಾರವನ್ನೂ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.

ಕ್ಯಾನ್ಸರ್‌ ಸೇರಿದಂತೆ ಹಲವು ಮಾರಣಾಂತಿಕ ರೋಗಗಳು ಮನುಷ್ಯನನ್ನು ಭಾದಿಸುತ್ತಿವೆ. ಮಾನವನ ದೇಹದಲ್ಲಿ ಎಷ್ಟು ಅಂಗಗಳಿವೆಯೋ ಅದಕ್ಕೆಲ್ಲದಕ್ಕೂ ಸಂಬಂಧಿಸಿದ ಕ್ಯಾನ್ಸರ್‌ ಕಾಣಿಸಿಕೊಳ್ಳುತ್ತಿದೆ. ಮಹಿಳೆಯರು ಸ್ತನ, ಗರ್ಭಕೋಶ ಕ್ಯಾನ್ಸರ್‌ ಗೆ ಒಳಗಾಗುತ್ತಿದ್ದಾರೆ. ‍ಪೀಡಿತರ ಸಂಖ್ಯೆಯೂ ಹೆಚ್ಚುತ್ತಿದೆ. ಕ್ಯಾನ್ಸರ್ ಕುರಿತ ಅಧ್ಯಯನ, ಸಂಶೋಧನೆ, ವರ್ತಮಾನದ ಸವಾಲುಗಳನ್ನು ತಿಳಿಯುವ ಕುತೂಹಲ ವಿದ್ಯಾರ್ಥಿಗಳಿಗೆ ಇರಬೇಕು ಎಂದು ಅವರು ತಿಳಿಸಿದರು.

ಕ್ಯಾನ್ಸರ್‌ ಗೆ ಭಾದಿಸಿರುವ ಭಾಗದಲ್ಲಿ ಅಂಗಾಂಶಗಳು ವೇಗದಲ್ಲಿ ಊಹಾತೀತವಾಗಿ ಬೆಳೆಯುತ್ತವೆ. ಅವು ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಕ್ಯಾನ್ಸರ್‌ ಅಣುಗಳು ಬೆಳೆಯಲು ಕಾರಣವಾದ ಪೌಷ್ಟಿಕಾಂಶ ಯಾವುದೆಂದು ಗುರುತಿಸಿ, ಅದಕ್ಕೆ ಚಿಕಿತ್ಸೆ ನೀಡುವುದೇ ದಾರಿಯಾಗಿದೆ ಎಂದರು.

ಮೈಸೂರು ವಿವಿ ರಸಾಯನಶಾಸ್ತ್ರ ವಿಭಾಗದ ಪ್ರೊ.ಕೆ.ಎನ್‌. ಮೋಹನ, ಸಿದ್ದಗಂಗಾ ತಂತ್ರಜ್ಞಾನ ಸಂಸ್ಥೆಯ ಡಾ.ಜಿ. ನಾಗರಾಜು, ಕಾಲೇಜಿನ ಪ್ರಾಂಶುಪಾಲೆ ಡಾ.ಎಂ. ಪೂರ್ಣಿಮಾ, ಶೈಕ್ಷಣಿಕ ಡೀನ್ ಡಾ. ರೇಚಣ್ಣ, ಸಂಚಾಲಕ ಡಾ.ಎಸ್‌. ಸುಬ್ರಹ್ಮಣ್ಯ ರಾಜ್ ಅರಸ್ ಇದ್ದರು.