ಸಾರಾಂಶ
ಕಾನೂನು ಬಾಹಿರವಾಗಿ ವ್ಯಕ್ತಿಯೊಬ್ಬರ ಮನೆಯನ್ನು ನೆಲಸಮ ಮಾಡಿರುವ ಯಸಳೂರು ವಲಯ ಅರಣ್ಯಾಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿ ವಿವಿಧ ದಲಿತಪರ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಯಸಳೂರು ವಲಯ ಅರಣ್ಯಾಧಿಕಾರಿ ಅವರು ಈ ಮನೆವನ್ನು ಸಂಪೂರ್ಣ ನಾಶಪಡಿಸಿದ್ದು ಅಲ್ಲದೆ, ಶೋಭರಾಜು ಎಂಬವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಕನ್ನಡಪ್ರಭ ವಾರ್ತೆ ಸಕಲೇಶಪುರ
ಕಾನೂನು ಬಾಹಿರವಾಗಿ ವ್ಯಕ್ತಿಯೊಬ್ಬರ ಮನೆಯನ್ನು ನೆಲಸಮ ಮಾಡಿರುವ ಯಸಳೂರು ವಲಯ ಅರಣ್ಯಾಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿ ವಿವಿಧ ದಲಿತಪರ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.ತಾಲೂಕಿನ ಯಸಳೂರು ಹೋಬಳಿಯ ಮರಡಿಕೆರೆ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಪ್ರಿಯಾ ಶೋಭರಾಜು ಎಂಬುವರು ವಾಸಕ್ಕೆ ಮನೆ ಇಲ್ಲದ ಕಾರಣ ಯಸಳೂರು ಗ್ರಾಮಪಂಚಾಯತಿಯ ಅನುದಾನದಲ್ಲಿ, ಯಸಳೂರು ವ್ಯಾಪ್ತಿಯ ಸ.ನಂ.೩೬೧ರ ಜಾಗದಲ್ಲಿ ೨ ತಿಂಗಳ ಬಾಣಂತಿಯಾಗಿದ್ದ ಅವರು ವಾಸದ ಮನೆಯನ್ನು ನಿರ್ಮಿಸಿಕೊಂಡಿದ್ದರು. ಆದರೆ, ಜುಲೈ ೪ರಂದು ಯಸಳೂರು ವಲಯ ಅರಣ್ಯಾಧಿಕಾರಿ ಅವರು ಈ ಮನೆವನ್ನು ಸಂಪೂರ್ಣ ನಾಶಪಡಿಸಿದ್ದು ಅಲ್ಲದೆ, ಶೋಭರಾಜು ಎಂಬವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಆದ್ದರಿಂದ ಅವರನ್ನು ತಕ್ಷಣ ಸೇವೆಯಿಂದ ವಜಾಗೊಳಿಸಿ, ಪರಿಶಿಷ್ಟ ಜಾತಿ ಪ್ರತಿಬಂಧಕ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಒತ್ತಾಯಿಸಿದರು.ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಶಾಸಕ ಸಿಮೆಂಟ್ ಮಂಜು, ಯಾವುದೇ ಅಧಿಕಾರಿಯು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳದೆ, ಕಾನೂನಿನ ಚೌಕಟ್ಟಿನೊಳಗೆ ಕಾರ್ಯ ನಿರ್ವಹಿಸಬೇಕು. ಗ್ರಾಮ ಪಂಚಾಯತಿ ಮಂಜೂರಾದ ಸರ್ಕಾರಿ ಜಾಗದಲ್ಲಿ ನಿರ್ಮಿಸಲಾಗಿದ್ದ ಮನೆಯನ್ನು ಯಾವುದೇ ನೋಟಿಸ್ ನೀಡದೆ, ಏಕಾಏಕಿ ಜೆಸಿಬಿಯಿಂದ ನೆಲಸಮಗೊಳಿಸಿರುವುದು ಅಕ್ಷಮ್ಯ ಅಪರಾಧ. ಈ ಅಧಿಕಾರ ದರ್ಪದಿಂದಾಗಿ ದಂಪತಿಗಳು ಈಗ ಮರದ ಅಡಿಯಲ್ಲಿ ಜೀವನ ಕಳೆಯುವ ಸ್ಥಿತಿಗೆ ತಲುಪಿದ್ದಾರೆಂದು ವಿಷಾದಿಸಿದರು.ಪ್ರತಿಭಟನೆ ವೇಳೆ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಹಳೇ ಬಸ್ ನಿಲ್ದಾಣದ ಎದುರ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಲಾಯಿತು.ಈ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಕಾಡಪ್ಪ ಮತ್ತು ಬೆಳಗೋಡು ಗ್ರಾಮಪಂಚಾಯಿತಿ ಅಧ್ಯಕ್ಷ ಭುವನಾಕ್ಷ, ದಲಿತ ಮುಖಂಡ ಕೊಮಾರಯ್ಯ, ಬಿಜೆಪಿ ಮುಖಂಡರಾದ ಮಾಸವಳ್ಳಿ ಚಂದ್ರು, ಗುರು ಪ್ರಶಾಂತ್,ಸ್ಟೀವನ್ ಪ್ರಕಾಶ್ ಮುಂತಾದವರಿದ್ದರು.