ಶಾಲೆಗಳಲ್ಲಿ ಸಂಸ್ಕೃತ ಕಡ್ಡಾಯಗೊಳಿಸಬೇಕು

| Published : Feb 12 2024, 01:37 AM IST

ಸಾರಾಂಶ

ನಿತ್ಯ ಬದುಕಿನಲ್ಲಿ ಬಳಸಲಾಗುವ ವಿವಿಧ ವಸ್ತುಗಳ ಹೆಸರನ್ನು ಸಂಸ್ಕೃತದಲ್ಲೇ ಬರೆದಿದ್ದು ವಿಶೇಷವಾಗಿತ್ತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಪ್ರತಿ ಶಾಲೆಗಳಲ್ಲಿ ಸಂಸ್ಕೃತ ವಿಷಯವನ್ನು ಕಡ್ಡಾಯವಾಗಿ ಬೋಧನೆ ಮಾಡಬೇಕಿದ್ದು, ಈ ವಿಚಾರವಾಗಿ ರಾಜ್ಯ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ವಿಧಾನ ಪರಿಷತ್‌ ಸದಸ್ಯ ಸಾಬಣ್ಣ ತಳವಾರ ಹೇಳಿದರು.

ನಗರದ ಬಿ.ಕೆ.ಮಾಡೆಲ್‌ ಪ್ರೌಢಶಾಲೆಯಲ್ಲಿ ಸಂಸ್ಕೃತ ಭಾರತೀ ಬೆಳಗಾವಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಸಂಸ್ಕೃತ ಭಾರತೀ ಸಂಘಟನೆಯ ಕರ್ನಾಟಕದ ಮಠ - ಮಂದಿರದ ಪ್ರಮುಖ ರಾಮಕೃಷ್ಣ ತದ್ದಲಸೆ ಮಾತನಾಡಿ, ಮೂರು ವರ್ಷಕ್ಕೊಮ್ಮೆ ಜಿಲ್ಲಾ ಸಮ್ಮೇಳನ ನಡೆಯುತ್ತವೆ. ನಂತರ ರಾಜ್ಯಮಟ್ಟ ಮತ್ತು ಅಖಿಲ ಭಾರತೀಯ ಮಟ್ಟದಲ್ಲಿ ಪ್ರತಿ ವರ್ಷಕ್ಕೊಮ್ಮೆ ಆಯೋಜಿಸಲಾಗುತ್ತದೆ. ಕಳೆದ 42 ವರ್ಷಗಳಿಂದ ಸಂಸ್ಕೃತ ಭಾರತಿ ಸಂಸ್ಕೃತದ ಪ್ರಚಾರ, ಪ್ರಸಾರ ಕಾರ್ಯದಲ್ಲಿ ತೊಡಗಿದ್ದೇವೆ ಎಂದರು.

200 ವರ್ಷಗಳ ಹಿಂದೆ ಪ್ರತಿ ಮನೆಯಲ್ಲಿ ಸಂಸ್ಕೃತ ಮಾತನಾಡಲಾಗುತ್ತಿತ್ತು. ಪರಕೀಯರ ಆಳ್ವಿಕೆಯಿಂದ ಕಾಲಕ್ರಮೇಣವಾಗಿ ಆ ಭಾಷೆ ತನ್ನ ವೈಭವ ಕಳೆದುಕೊಂಡಿದೆ. ಈಗ ನಾವು ಸಂಸ್ಕೃತವನ್ನು ಮನೆ–ಮನೆಗೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. 40 ವರ್ಷಗಳ ಅವಧಿಯಲ್ಲಿ 1 ಕೋಟಿಗೂ ಅಧಿಕ ಜನರಿಗೆ ಸಂಸ್ಕೃತ ಕಲಿಸಿರುವ ಹೆಮ್ಮೆಯಿದೆ ಎಂದರು.

ಲೆಕ್ಕ ಪರಿಶೋಧಕ ಎಂ.ಎಸ್‌.ತಿಗಡಿ, ನನಗೆ ಪರಿಪೂರ್ಣವಾಗಿ ಸಂಸ್ಕೃತ ಮಾತನಾಡಲು ಬರುವುದಿಲ್ಲ. ಮುಂದಿನ ದಿನಗಳಲ್ಲಿ ಕಲಿಯಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು. ಶ್ರೀನಿವಾಸ ಶಿವಣಗಿ, ಸಂಸ್ಕೃತ ಭಾರತೀ ಬೆಳಗಾವಿ ನಗರ ಅಧ್ಯಕ್ಷ ಶ್ರೀಧರ ಗುಮ್ಮಾಣಿ, ಬೆಳಗಾವಿ ಜಿಲ್ಲೆಯ ಸಂಯೋಜಕ ಮಲ್ಲಿಕಾರ್ಜುನ ಹಳಿಜೋಳೆ ಇತರರಿದ್ದರು.

ಇದೇ ವೇಳೆ ಶಾಲೆಯ ಆವರಣದಲ್ಲಿ ಸಂಸ್ಕೃತ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ನಿತ್ಯ ಬದುಕಿನಲ್ಲಿ ಬಳಸಲಾಗುವ ವಿವಿಧ ವಸ್ತುಗಳ ಹೆಸರನ್ನು ಸಂಸ್ಕೃತದಲ್ಲೇ ಬರೆದಿದ್ದು ವಿಶೇಷವಾಗಿತ್ತು. ಸಂಸ್ಕೃತ ಭಾರತೀ ಪ್ರಕಾಶನದ ಪುಸ್ತಕಗಳು, ಭಿತ್ತಿಪತ್ರಗಳು ಮತ್ತು ಪಾಠೋಪಕರಣಗಳನ್ನು ಜನರು ಖರೀದಿಸಿದರು.