ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಾಥಪುರ
ಇಲ್ಲಿನ ಶ್ರೀ ಪ್ರಸನ್ನ ಸುಬ್ರಮಣ್ಯಸ್ವಾಮಿಯ 103ನೇ ವರ್ಷದ ಜಾತ್ರೆಯ ಅಂಗವಾಗಿ ಅಂಗಡಿಗಳ ಹರಾಜು ಪ್ರಕ್ರಿಯೆಯು ನವೆಂಬರ್ 22ರಂದು ಶುಕ್ರವಾರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪವನಕುಮಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಂ.ಎನ್. ಕುಮಾರಸ್ವಾಮಿ ತಿಳಿಸಿದರು.ರಾಮನಾಥಪುರ ಗ್ರಾಮ ಪಂಚಾಯತಿಯಲ್ಲಿ ಮಾತನಾಡಿದ ಅವರು, ದಿನಾಂಕ ಡಿ. 7ರಿಂದ 2025ರ ಜ. 8ರವರೆಗೆ ರಾಮನಾಥಪುರ ಶ್ರೀ ಪ್ರಸನ್ನ ಸುಬ್ರಮಣ್ಯಸ್ವಾಮಿಯವರ ರಥೋತ್ಸವ ಕಾಲದಲ್ಲಿ ನಡೆಯುವ ಅಂಗಡಿಗಳ ಮೇಲೆ ಸುಂಕ ವಸೂಲಿ ಮಾಡತಕ್ಕ ಹಕ್ಕನ್ನು ಕೆಲವು ಷರತ್ತುಗಳಿಗೆ ಒಳಪಡಿಸಿ ನಂ. 22 ಶುಕ್ರವಾರ ಬೆಳಗ್ಗೆ 11 ಗಂಟೆಗೆ ರಾಮನಾಥಪುರ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಗ್ರಾಮ ಪಂಚಾಯಿತಿ ಉಪನಿಬಂಧನೆಗಳ ರೀತ್ಯಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪವನಕುಮಾರಿಯವರ ಅಧ್ಯಕ್ಷತೆಯಲ್ಲಿ ಬಹಿರಂಗ ಹರಾಜು ಮಾಡಲಾಗುತ್ತದೆ. ಹರಾಜಿನಲ್ಲಿ ಭಾಗವಹಿಸಲು ಇಚ್ಛಿಸುವವರು ಒಂದು ಲಕ್ಷ ರು. ಠೇವಣಿ ಹಣವನ್ನು ಡಿಡಿ ಮುಖಾಂತರ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಪಡೆದು ನವಂಬರ್ 21ರ ಒಳಗೆ ಪಂಚಾಯಿತಿಗೆ ಸಲ್ಲಿಸತಕ್ಕದ್ದು. ನಂತರ ಸಲ್ಲಿಸಿದ ಡಿಡಿಯನ್ನು ತಿರಸ್ಕರಿಸಲಾಗದು. ಹರಾಜು ಮುಗಿದ ನಂತರ ಹರಾಜನ್ನು ತಮ್ಮದಾಗಿಸಿಕೊಂಡವರು ಕಟ್ಟಿದ್ದ ಠೇವಣಿ ಮೊಬಲಗು ಸೇರಿ ಉಳಿಕೆ ಮೊತ್ತವನ್ನು ಪಾವತಿಸಬೇಕು. ತಪ್ಪಿದ್ದಲ್ಲಿ 2ನೇ ಬಿಡ್ಡುದಾರಿಗೆ ಬಿಡ್ಡನ್ನು ಅಂತಿಮಗೊಳಿಸಲಾಗುವುದು ಎಂದು ಪಿಡಿಒ ಕುಮಾರಸ್ವಾಮಿ ತಿಳಿಸಿದರು.