ಸಾರಾಂಶ
ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಜ. ೧೩ರಿಂದ ೧೫ರ ವರೆಗೆ ಮೂರು ದಿನ ದಕ್ಷಿಣ ಭಾರತದ ಕ್ಷೇತ್ರೀಯ ವೇದ ಸಮ್ಮೇಳನ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಜ. ೧೩ರಂದು ಯತಿಗಳ ಸಾನ್ನಿಧ್ಯ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆಯಾಗಲಿದೆ.
ಶಿರಸಿ:
ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಜ. ೧೩ರಿಂದ ೧೫ರ ವರೆಗೆ ಮೂರು ದಿನ ದಕ್ಷಿಣ ಭಾರತದ ಕ್ಷೇತ್ರೀಯ ವೇದ ಸಮ್ಮೇಳನ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ರಾಜರಾಜೇಶ್ವರೀ ವಿದ್ಯಾ ಸಂಸ್ಥೆ ಮತ್ತು ಉಜ್ಜಯಿನಿ ಮಹರ್ಷಿ ಸಾಂದೀಪನಿ ರಾಷ್ಟ್ರಿಯ ವೇದವಿದ್ಯಾ ಪ್ರತಿಷ್ಠಾನದ ಆಶ್ರಯದಲ್ಲಿ ಆಯೋಜಿಸಿರುವ ಕಾರ್ಯಕ್ರಮವು ಜ. ೧೩ರಂದು ಯತಿಗಳ ಸಾನ್ನಿಧ್ಯ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆಯಾಗಲಿದೆ.ಉದ್ಘಾಟನಾ ಸಮಾರಂಭದಲ್ಲಿ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹಾಗೂ ಕೂಡಲಿ ಶೃಂಗೇರಿ ಮಹಾಸಂಸ್ಥಾನದ ಶಂಕರಾಚಾರ್ಯ ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಶಿವರಾಮ ಹೆಬ್ಬಾರ, ಉಜ್ಜಯಿನಿಯ ಮಹರ್ಷಿ ಸಾಂದೀಪನಿ ರಾಷ್ಟ್ರಿಯ ವೇದವಿದ್ಯಾ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೊ. ಪ್ರಫುಲ್ಲಕುಮಾರ ಮಿಶ್ರ, ಕಾರ್ಯದರ್ಶಿ ಪ್ರೊ. ವಿರೂಪಾಕ್ಷ ವಿ. ಜಡ್ಡೀಪಾಲ, ಮಾಜಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಯಲ್ಲಾಪುರದ ಧಾತ್ರಿ ಫೌಂಡೇಶನ್ ಅಧ್ಯಕ್ಷ ಶ್ರೀನಿವಾಸ ಭಟ್ಟ ಭಾಗವಹಿಸಲಿದ್ದಾರೆ.ಈ ವೇಳೆ ಬೆಂಗಳೂರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಕಾ.ಈ. ದೇವನಾಥನ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ವೇದಶೋಭಾ -ಶೋಭಾಯಾತ್ರೆ:ಚತುರ್ವೇದಗಳ ಮಹತ್ವವನ್ನು ಜನಮಾನಸಕ್ಕೆ ತಲುಪಿಸುವ ಉದ್ದೇಶದಿಂದ ಜ. ೧೩ರಂದು ೪ ಗಂಟೆಯಿಂದ ಶಿರಸಿ ನಗರದಲ್ಲಿ ವೇದಶೋಭಾ-ಶೋಭಾಯಾತ್ರೆ ಆಯೋಜಿಸಲಾಗಿದೆ. ಶಿರಸಿಯ ಮಾರಿಕಾಂಬಾ ದೇವಾಲಯದಿಂದ ಆರಂಭಗೊಂಡು ಶಿವಾಜಿ ಚೌಕ್, ಸಿ.ಪಿ. ಬಝಾರ್, ದೇವಿಕೆರೆ ಮಾರ್ಗವಾಗಿ ಸಾಗಿ ಯೋಗಮಂದಿರದಲ್ಲಿ ಸಮಾಪ್ತಿಗೊಳ್ಳಲಿದೆ.ವೇದಪಾರಾಯಣ:ಸಮ್ಮೇಳನದಲ್ಲಿ ವೇದಪಾರಾಯಣ, ವಿದ್ವಾಂಸರಿಗೆ ಸನ್ಮಾನ, ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಮುಂತಾದ ವಿವಿಧ ಆಯಾಮಗಳಲ್ಲಿ ಜರುಗಲಿದೆ. ಜ. ೧೩ರಿಂದ ೧೫ರ ವರೆಗೆ ಪ್ರತಿದಿನ ಬೆಳಗ್ಗೆ ೮.೩೦ರಿಂದ ೧೧ರ ವರೆಗೆ ಐದು ರಾಜ್ಯಗಳಿಂದ ಆಮಂತ್ರಿತರಾದ ನೂರಕ್ಕೂ ಹೆಚ್ಚು ವೇದ-ವಿದ್ವಾಂಸರಿಂದ ನಾಲ್ಕು ವೇದಗಳ ೮ ಶಾಖೆಗಳ ವೇದ ಪಾರಾಯಣವು ಪ್ರತ್ಯೇಕವಾಗಿ ೮ ಸ್ಥಳಗಳಲ್ಲಿ ನಡೆಯಲಿದೆ.ವೇದಗಳ ಕುರಿತು ವಿಶೇಷ ಜ್ಞಾನ ಜನಸಾಮಾನ್ಯರ ಅರಿವಿಗೆ ಬರುವಂತಾಗಬೇಕು ಎಂಬ ಘನೋದ್ದೇಶದಿಂದ ಚತುರ್ವೇದಗಳ ಕುರಿತಾದ ಉಪನ್ಯಾಸಗಳ ೪ ಗೋಷ್ಠಿ ಆಯೋಜಿಸಲಾಗಿದೆ. ಜ. ೧೩ರಂದು ಬೆಳಗ್ಗೆ ೧೨ರಿಂದ ಮೈಸೂರಿನ ವೇದ ವಿಜ್ಞಾನ ವಿಪ್ಪರಮ್ ಸಂಸ್ಥಾಪಕ ಡಾ. ವಂಶೀಕೃಷ್ಣ ಘನಪಾಠಿಗಳಿಂದ ಕೃಷ್ಣಯಜುರ್ವೇದದ ಕುರಿತು, ಜ. ೧೪ರಂದು ೧೧ರಿಂದ ೧ರ ವರೆಗೆ ಹಾಸನದ ಎಂ.ವಿ. ಕೃಷ್ಣಮೂರ್ತಿ ಘನಪಾಠಿಗಳು ಹಾಗೂ ಬ್ಯಾಡಗಿಯ ಗೋಪಾಲಕೃಷ್ಣ ಶಿವಪೂಜಿ ಅವರಿಂದ ಋಗ್ವೇದ ಮತ್ತು ಶುಕ್ಲಯಜುರ್ವೇದದ ಕುರಿತು, ಜ. ೧೪ರಂದು ೩ರಿಂದ ೫ರ ವರೆಗೆ ಮೈಸೂರಿನ ಸುಬ್ರಹ್ಮಣ್ಯ ಭಟ್ಟ ಹಾಗೂ ಕುಮಟಾದ ರಮೇಶ ವರ್ಧನ ಅವರಿಂದ ಸಾಮವೇದ ಮತ್ತು ಅಥರ್ವವೇದದ ಕುರಿತು ಉಪನ್ಯಾಸ ಜರುಗಲಿವೆ. ಜ. ೧೫ರಂದು ಬೆಳಗ್ಗೆ ೧೧.೩೦ರಿಂದ ೧೨.೩೦ರ ವರೆಗೆ ಮೈಸೂರಿನ ಪ್ರಾಚಾರ್ಯ ಟಿ. ಎನ್. ಪ್ರಭಾಕರ ಅವರಿಂದ ಮಹಾಭಾರತದ ಕುರಿತು ಉಪನ್ಯಾಸ ಸಂಯೋಜಿಸಲಾಗಿದೆ.ವಿದ್ವಾಂಸರಿಗೆ ಸನ್ಮಾನ:ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರಿನ ಋಗ್ವೇದ ವಿದ್ವಾಂಸ ಗಣೇಶ ಘನಪಾಠಿ ಹಾಗೂ ಸಾಮವೇದ ವಿದ್ವಾಂಸರಾದ ವಿಜಯವಾಡದ ಸುಂದರರಾಮ ಶ್ರೌತಿ ಅವರನ್ನು ಸನ್ಮಾನಿಸಲಾಗುವುದು. ಸಮಾರೋಪ ಸಮಾರಂಭದಲ್ಲಿ ಬೆಂಗಳೂರಿನ ಆಹಿತಾಗ್ನಿಗಳಾದ ಗೋವಿಂದ ಪ್ರಕಾಶ ಘನಪಾಠಿ ಹಾಗೂ ಅಥರ್ವವೇದದ ವಿದ್ವಾಂಸರಾದ ಒಡಿಶಾದ ಪುರಿಯ ಕುಂಜಬಿಹಾರೀ ಉಪಾಧ್ಯಾಯರನ್ನು ಸನ್ಮಾನಿಸಲಾಗುವುದು. ಜ. ೧೪ರಂದು ಸಂಜೆ ೫.30ರಿಂದ ಸುಬ್ರಾಯ ಭಟ್ಟ, ವಿ. ಗೀತಾ ಚಿನ್ನಾಪುರ ಅವರಿಂದ ಭಕ್ತಿಸಂಗೀತ, ಶ್ರೀ ಸ್ವರ್ಣವಲ್ಲಿ ಮಾತೃ ವೃಂದದವರಿಂದ ಭಜನಾಮೃತ ಕಾರ್ಯಕ್ರಮ ನಡೆಯಲಿದೆ. ಜ. ೧೫ರಂದು ೩.೩೦ರಿಂದ ಸಮ್ಮೇಳನದ ಸಮಾರೋಪ ಸಮಾರಂಭ ನಡೆಯಲಿದ್ದು ಸ್ವರ್ಣವಲ್ಲೀ ಶ್ರೀ, ಕೂಡಲಿ ಶೃಂಗೇರಿ ಶ್ರೀ ಸಾನ್ನಿಧ್ಯ ವಹಿಸಲಿದ್ದಾರೆ. ಅಭ್ಯಾಗತರಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂಸದ ಅನಂತಕುಮಾರ ಹೆಗಡೆ, ಶಾಸಕ ಭೀಮಣ್ಣ ನಾಯ್ಕ ಹಾಗೂ ಉಜ್ಜಯಿನಿಯ ಮಹರ್ಷಿ ಸಾಂದೀಪನಿ ರಾಷ್ಟ್ರಿಯ ವೇದವಿದ್ಯಾ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೊ. ಪ್ರಫುಲ್ಲಕುಮಾರ ಮಿಶ್ರ ಹಾಗೂ ಕಾರ್ಯದರ್ಶಿ ಪ್ರೊ. ವಿರೂಪಾಕ್ಷ ಜಡ್ಡೀಪಾಲ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.