ಸಾಹಿತ್ಯವು ವ್ಯಕ್ತಿಯ ಬೌದ್ಧಿಕ ಬೆಳವಣಿಗೆಗೆ ಮಾತ್ರವಲ್ಲ, ಮಾನಸಿಕ ಮತ್ತು ದೈಹಿಕ ಆರೋಗ್ಯದ ವೃದ್ಧಿಗೂ ಮಹತ್ವದ ಕೊಡುಗೆ ನೀಡುತ್ತದೆ

ಕನ್ನಡಪ್ರಭ ವಾರ್ತೆ ಮೈಸೂರುಲೇಖಕ ಕಾಶಿಗೌ ಅವರ " ಚಿಂತನೆ ಬಿತ್ತನೆ ಬೆಳೆ " ಮತ್ತು "ಮತಿ ಬೆರಗು " ಕೃತಿಗಳನ್ನು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಅಧೀಕ್ಷಕ ಹೃದ್ರೋಗ ತಜ್ಞ ಡಾ. ಸದಾನಂದ ಬಿಡುಗಡೆಗೊಳಿಸಿದರು.ನಂತರ ಅವರು ಮಾತನಾಡಿ, ಸಾಹಿತ್ಯವು ವ್ಯಕ್ತಿಯ ಬೌದ್ಧಿಕ ಬೆಳವಣಿಗೆಗೆ ಮಾತ್ರವಲ್ಲ, ಮಾನಸಿಕ ಮತ್ತು ದೈಹಿಕ ಆರೋಗ್ಯದ ವೃದ್ಧಿಗೂ ಮಹತ್ವದ ಕೊಡುಗೆ ನೀಡುತ್ತದೆ ಎಂದ ವ್ಯಕ್ತಪಡಿಸಿದರು.ನಿರಂತರ ಓದು, ಬರವಣಿಗೆ, ಸಾಹಿತ್ಯ ಸೃಜನ, ಸಂಗೀತ ಹಾಗೂ ಇತರ ಸೃಜನಾತ್ಮಕ ಚಟುವಟಿಕೆಗಳು ಮೆದುಳಿನ ಕಾರ್ಯಕ್ಷಮತೆಯನ್ನು ಚುರುಕುಗೊಳಿಸುತ್ತವೆ. ಇವು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ, ಏಕಾಗ್ರತೆ, ನೆನಪಿನ ಸಾಮರ್ಥ್ಯ ಹಾಗೂ ಸಕಾರಾತ್ಮಕ ಚಿಂತನೆಯನ್ನು ವೃದ್ಧಿಸುತ್ತವೆ. ಮನಸ್ಸು ಪ್ರಶಾಂತವಾಗಿದ್ದಾಗ ಹೃದಯದ ಆರೋಗ್ಯವೂ ಉತ್ತಮವಾಗಿರುತ್ತದೆ. ಆದ್ದರಿಂದ ಆರೋಗ್ಯಕರ ಜೀವನಶೈಲಿಯಲ್ಲಿ ಸಾಹಿತ್ಯಕ್ಕೂ ಮಹತ್ವದ ಸ್ಥಾನವಿದೆ ಎಂದು ಅವರು ಅಭಿಪ್ರಾಯಪಟ್ಟರು.ಸಾಹಿತ್ಯವು ಮನುಷ್ಯನಲ್ಲಿ ಮಾನವೀಯ ಮೌಲ್ಯಗಳು, ಸಂವೇದನೆ, ಆತ್ಮವಿಶ್ವಾಸ ಹಾಗೂ ಜೀವನೋತ್ಸಾಹವನ್ನು ಬೆಳೆಸುವ ಶಕ್ತಿಯಾಗಿದೆ. ಪ್ರತಿಯೊಬ್ಬರೂ ತಮ್ಮ ದೈನಂದಿನ ಬದುಕಿನಲ್ಲಿ ಓದು ಮತ್ತು ಸೃಜನಾತ್ಮಕ ಚಟುವಟಿಕೆಗಳಿಗೆ ಸಮಯ ಮೀಸಲಿಡಬೇಕು ಎಂದರು.ಲೇಖಕ ಕಾಶಿಗೌ ಅವರ ಸಾಹಿತ್ಯ ಸೇವೆಯನ್ನು ಶ್ಲಾಘಿಸಿದ ಡಾ. ಸದಾನಂದ ಅವರು, "ಚಿಂತನೆ ಬಿತ್ತನೆ ಬೆಳೆ " ಮತ್ತು "ಮತಿ ಬೆರಗು " ಕೃತಿಗಳು ಓದುಗರಲ್ಲಿ ಉತ್ತಮ ಚಿಂತನೆ, ಆರೋಗ್ಯಕರ ಮನೋಭಾವ ಮತ್ತು ಸೃಜನಶೀಲ ಬದುಕಿನ ಪ್ರೇರಣೆಯನ್ನು ಮೂಡಿಸಲಿ ಎಂದು ಶುಭ ಹಾರೈಸಿದರು.